ಅವಧಿಗೂ ಮುನ್ನ ತೆನೆ ಬಿಚ್ಚಿದ ಭತ್ತ
ರೈತರಿಗೆ ಗಾಯದ ಮೇಲೆ ಬರೆರೈತರ ನೆರವಿಗೆ ಧಾವಿಸಬೇಕಿದೆ ಸರಕಾರ
Team Udayavani, Feb 23, 2020, 4:45 PM IST
ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಒಂದಿಲ್ಲೊಂದು ಸಂಕಷ್ಟ ಎದುರಾಗುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ. ನಾಲ್ಕೈದು ವರ್ಷಗಳಿಂದ ಮಳೆ ಕೊರತೆ, ನೀರಿನ ಅವೈಜ್ಞಾನಿಕ ಬಳಕೆಯಿಂದ ಒಂದೇ ಬೆಳೆ ಪಡೆದ ರೈತರು, ಈ ಬಾರಿ ಬೇಸಿಗೆ ಭತ್ತದ ಬೆಳೆ ನಾಟಿ ಮಾಡಿದ 25 ದಿನಗಳಲ್ಲಿ ತೆನೆ ಬಿಚ್ಚುವ ಮೂಲಕ ರೈತರಲ್ಲಿ ಆತಂಕ ಸೃಷ್ಟಿಸಿದೆ.
ಮುಂಗಾರು ಸುಗ್ಗಿ ಬೆಳೆಗೆ ಸೂಕ್ತ ಬೆಲೆ ಸಿಗದೇ ಬಹುತೇಕ ರೈತರು ಇನ್ನೂ ಭತ್ತವನ್ನು ಮಾರಾಟ ಮಾಡದೇ ಸಂಗ್ರಹ ಮಾಡಿದ್ದಾರೆ. ಬೇಸಿಗೆ ಹಂಗಾಮಿನಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು 90-120 ದಿನಗಳಲ್ಲಿ ಕಟಾವಿಗೆ ಬರುವ ಭತ್ತವನ್ನು ನಾಟಿ ಮಾಡುತ್ತಾರೆ. ನಾಟಿ ಮಾಡಿದ 25 ದಿನಗಳು ಪೂರ್ಣಗೊಳ್ಳುವ ಮುನ್ನವೇ ಬಹುತೇಕ ಭತ್ತದ ಬೆಳೆ ತೆನೆ ಬಿಚ್ಚುವ ಮೂಲಕ ರೈತರನ್ನು ಆತಂಕಕ್ಕೀಡು ಮಾಡಿದೆ.
ಬೇಸಿಗೆ ಹಂಗಾಮಿನ ಭತ್ತದ ಬೆಳೆ ನವೆಂಬರ್, ಡಿಸೆಂಬರ್ನಲ್ಲಿ ನಾಟಿ ಮಾಡಿ ಮಾರ್ಚ್ ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಕಟಾವು ಮಾಡಲಾಗುತ್ತದೆ. ಈ ಭಾರಿ ಬೇಸಿಗೆ ಭತ್ತದ ನಾಟಿ ಜನವರಿ ಮಧ್ಯೆ ಭಾಗದವರೆಗೂ ನಾಟಿ ಕಾರ್ಯ ನಡೆದಿದೆ. ಇದೀಗ ಭತ್ತದ ಬೆಳೆ 20-25 ದಿನಗಳಾಗಿವೆ. ಕಲ್ಗುಡಿ, ಮರಳಿ, ಶ್ರೀರಾಮನಗರ, ಢಣಾಪೂರ, ಮುಸ್ಟೂರು, ಅಯೋಧ್ಯಾ, ಹೊಸಳ್ಳಿ, ಜಂತಗಲ್, ಕುಂಟೋಜಿ, ಬರಗೂರು, ಸಿದ್ದಾಪೂರ, ಶಾಲಿಗನೂರು, ಉಳೇನೂರು, ಬೆನ್ನೂರು, ಜಮಾಪೂರ, ಗುಂಡೂರು, ಸಿಂಗನಾಳ ಭಾಗದಲ್ಲಿ 25 ದಿನದ ಭತ್ತದ ಬೆಳೆ ತೆನೆ ಬಿಚ್ಚಿದ್ದು, ಕಾಳುಕಟ್ಟುವ ಸಂದರ್ಭದಲ್ಲಿ ಚಳಿ ವಾತಾವರಣದಿಂದ ಕಾಳು ಜೊಳ್ಳಾಗುವ ಸಂದರ್ಭವಿದೆ.
ಅವಧಿಗೂ ಮುನ್ನ ತೆನೆ ಬಿಚ್ಚುವ ಕುರಿತು ಕೃಷಿ ವಿಜ್ಞಾನಿಗಳು ಸಂಶೋಧನೆ ಮಾಡುವ ಅವಶ್ಯವಿದೆ. ತಾಲೂಕಿನ ಬಹುತೇಕ ಕಡೆ ಭತ್ತದ ಬೀಜ ತಯಾರಿಕಾ ಘಟಕಗಳು ತಲೆ ಎತ್ತಿದ್ದು, ಈ ಕುರಿತು ರೈತರು ದೂರು ನೀಡಿದರೂ ಕೃಷಿ ಇಲಾಖೆ ಅಧಿಕಾರಿಗಳು ಒತ್ತಡಕ್ಕೆ ಮಣಿದು ಬೀಜ ಮಾರಾಟ ಮಾಡಿದ ವ್ಯಕ್ತಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ಸರಕಾರ ಕೂಡಲೇ ನಕಲಿ ಭತ್ತದ ಬೀಜ ತಯಾರಿಸುವ ಘಟಕಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದೆ. ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ ಬೇಗನೆ ತೆನೆ ಬಿಚ್ಚಿದ ಭತ್ತದ ಕುರಿತು ಸೂಕ್ತ ಸಂಶೋಧನೆ ಮಾಡಿ ರೈತರನ್ನು ರಕ್ಷಣೆ ಮಾಡಬೇಕಿದೆ.
ಬೇಸಿಗೆ ಭತ್ತದ ಬೆಳೆ ನಾಟಿ ಮಾಡಿದ 25 ದಿನಗಳಲ್ಲಿ ತೆನೆ ಬಿಚ್ಚಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಹವಾಮಾನ ವೈಪರಿತ್ಯ ಅಥವಾ ನಕಲಿ ಬೀಜ ಎಂಬ ಕಾರಣ ತಿಳಿಯದಾಗಿದೆ. ಕೂಡಲೇ ಕೃಷಿ ಇಲಾಖೆಯ ಕೃಷಿ ವಿವಿ ಮತ್ತು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಬೇಗನೆ ತೆನೆ ಬಿಚ್ಚಿದ ಕುರಿತು ಸಂಶೋಧನೆ ನಡೆಸಿ ಪರಿಹಾರ ಕಲ್ಪಿಸಬೇಕಾಗಿದೆ.
ವಿ. ಪ್ರಸಾದ,
ರೈತ ಕಲ್ಗುಡಿ ಗ್ರಾಮ
ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಯಲ್ಲಿ ರಾತ್ರಿ ಚಳಿ ಕಡಿಮೆಯಾಗಿ ಉಷ್ಣಾಂಶ ಹೆಚ್ಚಾಗಿರುವುದರಿಂದ ಭತ್ತದ ಬೆಳೆ ಬೇಗ ತೆನೆ ಬಿಚ್ಚಿದೆ. ಹತ್ತು ವರ್ಷಗಳ ಹಿಂದೆ ಇಂತಹ ಪರಿಸ್ಥಿತಿಯುಂಟಾಗಿತ್ತು. ಈಗ ಪುನಃ ಇಂತಹ ಸ್ಥಿತಿಯುಂಟಾಗಿದೆ. ರಾತ್ರಿ-ಹಗಲಿನ ಅವ ಧಿಯಲ್ಲಿ 10-15 ನಿಮಿಷಗಳ ವ್ಯತ್ಯಾಸ ಹಾಗೂ ಫೆಬ್ರವರಿ ಮೊದಲ ವಾರ ಇಬ್ಬನ್ನಿ ಬಿದ್ದ ಪರಿಣಾಮ ಬೇಗನೆ ತೆನೆ ಬಿಚ್ಚಲು ಕಾರಣವಾಗಿದೆ. ರಾತ್ರಿ ವೇಳೆ 18 ಡಿಗ್ರಿ ಉಷ್ಣಾಂಶ ಹಗಲಿನಲ್ಲಿ 36 ಡಿಗ್ರಿ ಉಷ್ಣಾಂಶ ಇದ್ದ ಪರಿಣಾಮ ಬೇಗನೆ ತೆನೆ ಬಂದಿದೆ. ಭತ್ತದ ಇಳುವರಿ ಕಡಿಮೆ ಬರುವ ಸಾಧ್ಯತೆ ಇದೆ.
ಡಾ| ಮಹಾಂತ ಶಿವಯೋಗಿ,
ತಳಿ(ಭತ್ತ) ಕೃಷಿ ಸಂಶೋಧನಾ ಕೇಂದ್ರ
ಕೆ. ನಿಂಗಜ್ಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ