¬ ಹೆರಿಗೆ ಸುರಕ್ಷಿತ, ಸರಕಾರಿ ಆಸ್ಪತ್ರೆಯತ್ತ ಜನರ ಚಿತ್ತ
ತಿಂಗಳಿಗೆ 200 ಮಹಿಳೆಯರಿಗೆ ಸುರಕ್ಷಿತ ಹೆರಿಗೆ! ದುಬಾರಿ ವೆಚ್ಚ ಪಾವತಿ ಹೊರೆ ಇಳಿಸಿದ ವೈದ್ಯರು
Team Udayavani, Feb 12, 2021, 3:28 PM IST
ಸಿಂಧನೂರು: ಕ್ಲಿಷ್ಟ, ಅವಧಿ ಪೂರ್ವ ಹೆರಿಗೆ, ತೀವ್ರ ರಕ್ತಸ್ರಾವದಂತಹ ಪ್ರಕರಣಗಳನ್ನು ನಿರ್ವಹಿಸು ತ್ತಿರುವುದರಿಂದ ಈಗ ಜನರ ಚಿತ್ತ ಸರಕಾರಿ ಆಸ್ಪತ್ರೆಯತ್ತ ನೆಟ್ಟಿದೆ.
ಇಲ್ಲಿನ ವೈದ್ಯರು ತಿಂಗಳಿಗೆ ಬರೋಬ್ಬರಿ 200 ಮಹಿಳೆಯರಿಗೆ ಸುರಕ್ಷಿತ ಹೆರಿಗೆ ಮಾಡಿಸುತ್ತಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿ ದುಬಾರಿ ವೆಚ್ಚ ಪಾವತಿಸಬೇಕಾದ ಹೊರೆ ಇಳಿಸಿದ್ದಾರೆ.
ತಹಶೀಲ್ದಾರ್ ಮಂಜುನಾಥ ಬೋಗಾವತಿ ಅವರು ಕೂಡ ತಮ್ಮ ಪತ್ನಿಗೆ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆಯನ್ನು ಸರಕಾರಿ ಆಸ್ಪತ್ರೆಯಲ್ಲೇ ಮಾಡಿಸಿ ಸರಕಾರಿ ಆಸ್ಪತ್ರೆಯ ಮೇಲಿನ ನಂಬಿಕೆ ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ.
ಇಲ್ಲಿನ ವೈದ್ಯ ಡಾ|ನಾಗರಾಜ್ ಕಾಟವಾ ಪಾಸಿಟಿವ್ ಬಂದು ರಜೆ ತೆಗೆದುಕೊಂಡಿದ್ದರಿಂದ ಒಂದೂವರೆ ತಿಂಗಳು ಪ್ರಕರಣಗಳಲ್ಲಿ ಕುಸಿತ ಕಂಡಿತ್ತು. ತಾಲೂಕಿನ 10 ಪಿಎಚ್ಸಿ ಕೇಂದ್ರಗಳಿಂದ ಹೆರಿಗೆ ಪ್ರಕರಣಗಳನ್ನು ಇಲ್ಲಿಗೆ ಶಿಫಾರಸು ಮಾಡಲಿಕ್ಕೆ ಸಿಬ್ಬಂದಿ ಹೆದರಿದ್ದರು ಎನ್ನುತ್ತವೆ ಇಲಾಖೆ ದಾಖಲೆಗಳು.
ರಿಸ್ಕ್ ಕೇಸ್ನಲ್ಲಿ ಜಿಲ್ಲೆಗೆ ಫಸ್ಟ್: ಕಳೆದ ವರ್ಷ ಡಿಸೆಂಬರ್ನಲ್ಲಿ 180 ಮಹಿಳೆಯರಿಗೆ ಸಹಜ ಹೆರಿಗೆ ಮಾಡಿಸಿದ್ದರೆ, 30 ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. ಕ್ಲಿಷ್ಟಕರ ಕೇಸ್ಗಳನ್ನು ಕೂಡ ಖಾಸಗಿ ಆಸ್ಪತ್ರೆ ಇಲ್ಲವೇ 90 ಕಿ.ಮೀ. ಅಂತರದ ರಾಯಚೂರು, ಬಳ್ಳಾರಿ ಆಸ್ಪತ್ರೆಗಳಿಗೆ ಶಿಫಾರಸು ಮಾಡದೇ 30 ಪ್ರಕರಣಗಳಲ್ಲಿ ಇಲ್ಲಿಯೇ ಸುರಕ್ಷಿತ ಹೆರಿಗೆ ಮಾಡಿಸಲಾಗಿದೆ. 2021 ಜನವರಿಯಲ್ಲಿ 196 ಸಹಜ ಹೆರಿಗೆ ಪ್ರಕರಣ ದಾಖಲಾದರೆ, 89 ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕ್ಲಿಷ್ಟಕರ ಹೆರಿಗೆಯ 90 ಪ್ರಕರಣಗಳನ್ನು ಇಲ್ಲಿ ನಿರ್ವಹಿಸಲಾಗಿದ್ದು, ಫೆಬ್ರವರಿಯಲ್ಲಿ ಹೆರಿಗೆ ಪ್ರಕರಣಗಳ ನಿರ್ವಹಣೆಯಲ್ಲಿ ಹೆಚ್ಚಿನ ಪ್ರಗತಿ ದಾಖಲಾಗುವ ಮುನ್ಸೂಚನೆಯಿದೆ.
ಖಾಸಗಿ ಆಸ್ಪತ್ರೆಗೆ ಕಳುಹಿಸದೇ ನಿರ್ವಹಣೆ: ತಾವರಗೇರಾದ ಯಲ್ಲಮ್ಮ ಎನ್ನುವರಿಗ ಗರ್ಭಚೀಲದಲ್ಲಿ ಬ್ಲಾಕ್ ಇರುವ ಹಿನ್ನೆಲೆಯಲ್ಲಿ ಆಪರೇಷನ್ ಮಾಡಬೇಕಿತ್ತು. ಅದನ್ನು ಇಲ್ಲಿನ ವೈದ್ಯ ಡಾ|ನಾಗರಾಜ್ ಕಾಟವಾ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆ ಬಳಿಕ ಅವ ಧಿ ಪೂರ್ವ ಹೆರಿಗೆ ಹಿನ್ನೆಲೆಯಲ್ಲಿ ಎರಡು ತಿಂಗಳು ಆಸ್ಪತ್ರೆಯಲ್ಲೇ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಕುಷ್ಟಗಿ ತಾಲೂಕಿನ ತಾವರಾಗೇರಾದಿಂದ 40 ಕಿ.ಮೀ. ಬಂದು ಹೋಗುವ ನಡುವೆ ಗರ್ಭಪಾತ ಭೀತಿ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲೇ ದಾಖಲಿಸಿಕೊಳ್ಳಲಾಗಿದೆ. ಯಾದಗಿರಿ ಜಿಲ್ಲೆಯ ಮಮತಾ ಎಂಬುವರನ್ನು ಕೂಡ ಹೆರಿಗೆಯ ರಿಸ್ಕ್ ಗಮನಿಸಿ 2 ತಿಂಗಳಿಂದ ಇಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ.
ಇದನ್ನೂ ಓದಿ :ಕೃಷಿಹೊಂಡದ ನೀರಿನಲ್ಲಿ ಮುಳುಗಿ ನಾಲ್ಕು ವರ್ಷ ಪ್ರಾಯದ ಇಬ್ಬರು ಮಕ್ಕಳ ಸಾವು
ಆರೋಗ್ಯ ಇಲಾಖೆ ಜಂಟಿ ನಿರ್ದೇಶಕರು ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದಾಗ ಅವಧಿ ಪೂರ್ವ ಹೆರಿಗೆ, ತೀವ್ರ ರಕ್ತಸ್ರಾವ ಪ್ರಕರಣ ಗಮನಿಸಿ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆರಿಗೆಗೆ ಖಾಸಗಿ ಆಸ್ಪತ್ರೆಯೇ ಗತಿ ಎಂಬ ವಾದವನ್ನು ತಳ್ಳಿ ಹಾಕುವುದರ ಮೂಲಕ ಇಲ್ಲಿನ ವೈದ್ಯರು ಬಡವರ ಪಾಲಿಗೆ ಆಶಾಕಿರಣವಾಗಿದ್ದಾರೆ.