ಕೊವಿಡ್ ಪರೀಕ್ಷಾ ಕೇಂದ್ರ ಆರಂಭಿಸಿ: ಪಾಟೀಲ
Team Udayavani, Apr 29, 2020, 4:31 PM IST
ಹುಮನಾಬಾದ: ಕೋವಿಡ್ ಕುರಿತು ಶಾಸಕ ರಾಜಶೇಖರ ಪಾಟೀಲ ಸಭೆ ನಡೆಸಿದರು.
ಹುಮನಾಬಾದ: ಕೊವಿಡ್-19 ಸೋಂಕು ಪತ್ತೆ ಹಚ್ಚುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಶೀಘ್ರದಲ್ಲಿಯೇ ಪರೀಕ್ಷಾ ಕೇಂದ್ರ ಆರಂಭಿಸುವ ಭರವಸೆ ನೀಡಿದ್ದು, ಇಂದಿಗೂ ಭರವಸೆ ಈಡೇರಿಲ್ಲ. ಕೂಡಲೇ ಮುತುವರ್ಜಿ ವಹಿಸಿ ಲ್ಯಾಬ್ ಆರಂಭಿಸುವಂತೆ ಶಾಸಕ ರಾಜಶೇಖರ ಪಾಟೀಲ ಆಗ್ರಹಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕರೆದ ಸಭೆಯಲ್ಲಿ ಮಾತನಾಡಿದ ಅವರು, ದೆಹಲಿ ಪ್ರಕರಣ ಬಿಟ್ಟರೆ ಬೇರೆಯಾವುದೇ ಪ್ರಕರಣ ಕಂಡು ಬಂದಿಲ್ಲ. ಪತ್ತೆಯಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇನ್ನೂ ಅನೇಕರ ಪರೀಕ್ಷೆ ನಡೆಯಬೇಕು ಎಂಬ ಮಾಹಿತಿ ಇದ್ದು, ಕೂಡಲೇ ಜಿಲ್ಲೆಯಲ್ಲಿ ಲ್ಯಾಬ್ ಸ್ಥಾಪನೆ ಮಾಡಿ ಬಾಕಿ ಇರುವ ಎಲ್ಲಾ ಶಂಕಿತರ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ಕೊರೊನಾ ವೈರಸ್ ತಡೆಗಟುವ ನಿಟ್ಟಿನಲ್ಲಿ ಇಲ್ಲಿನ ಅ ಧಿಕಾರಿಗಳು ಸೂಕ್ತ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕೂಡ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಸದ್ಯ ಎಲ್ಲ ಅಧಿ ಕಾರಿಗಳು ಹಗಳಿರುಳು ಶ್ರಮಿಸುತ್ತಿದ್ದು, ಇದೇ ರೀತಿ ಮುಂದಿನ ದಿನಗಳಲ್ಲಿ ಕೂಡ ಕೆಲಸ ಮಾಡಬೇಕು. ಕಳೆದ ಕೆಲ ದಿನಗಳಿಂದ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಬೀದರ್ ಜಿಲ್ಲೆ ಹಸಿರು ವ್ಯಾಪ್ತಿಗೆ ಬರಬೇಕು ಎಂದು ತಿಳಿಸಿದರು.
ಕ್ರಿಯಾ ಯೋಜನೆ ತಯಾರಿಸಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಡೆಯಬೇಕಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಅಧಿಕಾರಿಗಳು ಕ್ರಿಯಾ ಯೋಜನೆ ತಯಾರಿಸುವಂತೆ ಶಾಸಕ ರಾಜಶೇಖರ ಪಾಟೀಲ ಹೇಳಿದರು.