ಧರ್ಮ -ಜಾತಿಗಿಂತ ಮಾನವೀಯತೆ ಮಿಗಿಲು
Team Udayavani, Nov 22, 2018, 12:31 PM IST
ಸಿಂಧನೂರು: ಮನುಷ್ಯ-ಮನುಷ್ಯನನ್ನು ಪ್ರೀತಿಸಬೇಕಿದೆ. ಧರ್ಮ, ಜಾತಿಗಿಂತಲೂ ಮಾನವೀಯತೆ ದೊಡ್ಡದಾಗಿದೆ ಎಂದು ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
ಇಸ್ಲಾಂ ಧರ್ಮದ ಸಂಸ್ಥಾಪಕ ಮೊಹಮ್ಮದ್ ಪೈಗಂಬರ್ ರವರ ಜನ್ಮದಿನಾಚರಣೆ ಅಂಗವಾಗಿ ನಗರದ ನೂರಾನಿ ಮಸ್ಜಿದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಲ್ಲ ಧರ್ಮಗಳ ದಾರ್ಶನಿಕರು, ಸೂಫಿಗಳು, ಸಂತರು ಮಾನವೀಯತೆ, ಸಮಾನತೆ,
ಸೌಹಾರ್ದತೆ ಬೋಧಿಸಿದ್ದಾರೆ. ಅವರನ್ನು ಯಾವುದೇ, ಜಾತಿ, ಧರ್ಮಕ್ಕೆ ಸೀಮಿತಗೊಳಿಸಬಾರದು. ಪೈಗಂಬರ್ ಸೇರಿದಂತೆ ವಿಶ್ವದ ಶ್ರೇಷ್ಠ ದಾರ್ಶನಿಕರ ಜಯಂತಿಗಳು ಭಾಷಣ, ಮೆರವಣಿಗೆಗೆ ಸೀಮಿತವಾಗಬಾರದು. ಅವರ ಆಶಯಗಳು, ಆದರ್ಶಗಳು ಯುವ ಪೀಳಿಗೆಗೆ ತಲುಪಿಸುವ ಕೆಲಸಗಳಾಗಬೇಕಾಗಿದೆ. ಮನುಷ್ಯನನ್ನು ಮೀರಿದ ಒಂದು ಶಕ್ತಿ ಇದೆ. ನಾವು ವೈಜ್ಞಾನಿಕವಾಗಿ ಎಷ್ಟೇ ಬೆಳೆದರೂ ಹುಟ್ಟು-ಸಾವು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆ ಶಕ್ತಿ ನಮ್ಮನ್ನು ನಿಯಂತ್ರಿಸುತ್ತಿದೆ ಎಂದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಎಲ್ಲ ದಾರ್ಶನಿಕರು ಮನುಕುಲದ ಒಳಿತಿಗಾಗಿ ಶ್ರಮಿಸಿದ್ದಾರೆ. ಇಡೀ ಮನುಕುಲ ಶಾಂತಿ, ಸಹಬಾಳ್ವೆಯಿಂದ ಬಾಳಬೇಕು. ಸೌಹಾರ್ದಯುತ ಬದುಕು ನಮ್ಮದಾಗಬೇಕು. ದಾರ್ಶನಿಕರ ಜಯಂತಿಗಳನ್ನು ಆಚರಿಸುವಾಗ ಮೆರವಣಿಗೆಗಿಂತಲೂ ಅವರ ವಿಚಾರಧಾರೆಗಳನ್ನು ಅರಿತು ಪಾಲಿಸಲು ಆದ್ಯತೆ ನೀಡಬೇಕು. ಅಂದಾಗ ಮಾತ್ರ ಜಯಂತಿಗಳು ಅರ್ಥಪೂರ್ಣವಾಗುತ್ತವೆ. ಎಲ್ಲ ಧರ್ಮಗಳು ಮಾನವೀಯ ಮೌಲ್ಯಗಳನ್ನೇ ಪ್ರದಿಪಾದಿಸಿವೆ. ಕ್ಷುಲ್ಲಕ ವಿಚಾರಗಳಿಂದ
ಸಮಾಜ ಸ್ವಾಸ್ಥ್ಯ ಕದಡುವ ಕಲಸ ಆಗಬಾರದು ಎಂದು ಹೇಳಿದರು.
ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಬಾದರ್ಲಿ ಮಾತನಾಡಿ, ಸಮಾಜದಲ್ಲಿ ವೈರತ್ವ ಮರೆತು ಸಹೋದರತೆಯಿಂದ ಜೀವನ ಮಾಡಬೇಕು. ಮನುಕುಲ ಸೌಹಾರ್ದತೆಯಿಂದ ಬಾಳಬೇಕು ಎನ್ನುವ ಸಂದೇಶವನ್ನು ಮೊಹಮ್ಮದ್ ಪೈಗಂಬರ್ ನೀಡಿದ್ದಾರೆ ಎಂದರು. ಜಿಪಂ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ನಗರಸಭೆ
ಸದಸ್ಯರಾದ ಮುರ್ತುಜಾ ಹುಸೇನ್, ಶಬ್ಬೀರ್ ಅಹ್ಮದ್, ಜಿಲಾನಿಪಾಷಾ, ಎಚ್.ಬಾಷಾ, ಮಾಜಿ ಸದಸ್ಯ ಹಾಜಿ ಮಸ್ತಾನ್,
ಮುಖಂಡರಾದ ಗಿರಾಮಿಪಾಷಾ ಜಾಹಗೀರದಾರ, ಎಚ್. ಎನ್.ಬಡಿಗೇರ, ಎಸ್.ಶರಣೇಗೌಡ, ರಾಜುಗೌಡ ಬಾದರ್ಲಿ,
ಖಾಜಿ ಮಲ್ಲಿಕ್, ಬಾಬರ್ ಪಾಷಾ ವಕೀಲರು, ಜಮಾಅತೆ ಇಸ್ಲಾಂ ಅಧ್ಯಕ್ಷ ಹುಸೇನ ಬಾಷಾ, ನದೀಮ್ ಮುಲ್ಲಾ, ಅಶೋಕಗೌಡ ಗದ್ರಟಗಿ, ಖಾಜಾ ರೌಡಕುಂದಾ, ಡಿವೈಎಸ್ಪಿ ವಿಶ್ವನಾಥ ಎಚ್.ಕುಲಕರ್ಣಿ ಇತರರು ಇದ್ದರು.