ಐಸಿಐಸಿಐ ಬ್ಯಾಂಕ್: ರೈತರಿಗೆ ಸಾಲ ವಸೂಲಿ ನೋಟಿಸ್!
Team Udayavani, Nov 11, 2018, 6:50 AM IST
ರಾಯಚೂರು: ಸಾಲ ಮರು ಪಾವತಿ ವಿಚಾರದಲ್ಲಿ ಒತ್ತಾಯ ಮಾಡದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಖಾಸಗಿ ಬ್ಯಾಂಕ್ಗಳಿಗೆ ತಾಕೀತು ಮಾಡಿದ್ದರೂ ಬೆಳಗಾವಿ ಜಿಲ್ಲೆ ಎಕ್ಸಿಸ್ ಬ್ಯಾಂಕ್ ಬಂಧನ ವಾರೆಂಟ್ ಹೊರಡಿಸಿ ಎಡವಟ್ಟು ಮಾಡಿತ್ತು. ಈಗ ಐಸಿಐಸಿಐ ಬ್ಯಾಂಕ್ ಕೂಡ ಸಾಲ ಮರು ಪಾವತಿಸುವಂತೆ ನೋಟಿಸ್ ನೀಡಿದೆ.
ತಾಲೂಕಿನ ಬಿಜನಗೇರಾ ಗ್ರಾಮದ ರೈತ ಮಹಿಳೆ ನರಸಮ್ಮಗೆ ನಗರದ ಐಸಿಐಸಿಐ ಬ್ಯಾಂಕ್ ಡಿಮಾಂಡ್ ಕಾನೂನು ನೋಟಿಸ್ ಜಾರಿ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಾಲದ ಮೊತ್ತ ಬಡ್ಡಿ ಸಹಿತ ಮರುಪಾವತಿ ಮಾಡದಿದ್ದರೆ ಆಸ್ತಿ ಸುಪರ್ದಿಗೆ ತೆಗೆದುಕೊಳ್ಳುವುದಾಗಿ ಎಚ್ಚರಿಸಿದೆ. ನರಸಮ್ಮ
ಹೆಸರಿನಲ್ಲಿರುವ 9.18 ಎಕರೆ ಜಮೀನಿನ ಮೇಲೆ ಕಿಸಾನ್ ಕ್ರೆಡಿಟ್ ಕಾರ್ಡ್ನಡಿ 2015 ಅ.31ರಂದು 5.50 ಲಕ್ಷ ರೂ. ಸಾಲ ಪಡೆಯಲಾಗಿತ್ತು. ಸತತ ಬರದಿಂದ ನರಸಮ್ಮ ಕುಟುಂಬ ನಷ್ಟದಲ್ಲಿದೆ. ಆರ್ಥಿಕ ಸಂಕಷ್ಟದಲ್ಲೂ ಸಕಾಲಕ್ಕೆ ಬಡ್ಡಿ ಪಾವತಿಸುತ್ತ ಬಂದಿತ್ತು. ಆದರೆ, ಈ ಬಾರಿ ಮುಂಗಾರು-ಹಿಂಗಾರು ಕೈಕೊಟ್ಟ ಪರಿಣಾಮ ನಷ್ಟದಲ್ಲಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಮಾತ್ರ ಬಡ್ಡಿ ಸಹಿತ 5,92,765 ರೂ. ಮೊತ್ತ ಪಾವತಿಸುವಂತೆ ಮೇ 31ರಂದು ನೋಟಿಸ್ ಜಾರಿಗೊಳಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ಬಾರದಿದ್ದಾಗ ಅ.28ರಂದು 6,00,512 ರೂ. ಪಾವತಿಸುವಂತೆ ಡಿಮಾಂಡ್ ಕಾನೂನು ನೋಟಿಸ್ ಜಾರಿಗೊಳಿಸಿದೆ.ಕಳೆದೆರಡು ತಿಂಗಳಿಂದ ಬ್ಯಾಂಕ್ ಅಧಿಕಾರಿಗಳು ಮನೆಗೆ ಬಂದು ಹಣಕ್ಕಾಗಿ ಒತ್ತಾಯಿಸುತ್ತಿದ್ದು, ಕುಟುಂಬ ಆತಂಕಗೊಂಡಿದೆ.
ರಾಯಚೂರು ಐಸಿಐಸಿಐ ಬ್ಯಾಂಕ್ನಲ್ಲಿ ಸಾಲ ಪಡೆದಿದ್ದು, ಬಡ್ಡಿ ಸಹಿತ ಹಣ ಪಾವತಿಸುವಂತೆ ಅಧಿ ಕಾರಿಗಳು ನೋಟಿಸ್
ನೀಡಿದ್ದಾರೆ. ಸತತ ಬರದಿಂದ ಬೆಳೆಯಿಲ್ಲದೇ ನಷ್ಟ ಎದುರಾಗಿದೆ.ಇಂಥ ವೇಳೆ ಎಲ್ಲಿಂದ ಸಾಲ ತೀರಿಸಲು ಸಾಧ್ಯ?
– ನರಸಿಂಹಲು, ಸಾಲ ಪಡೆದ ರೈತ ಮಹಿಳೆ ಮಗ
ರೈತರಿಗೆ ಸಾಲದ ವಿಚಾರದಲ್ಲಿ ತೊಂದರೆ ನೀಡದಂತೆ ಎಲ್ಲ ಬ್ಯಾಂಕ್ಗಳಿಗೂ ಸೂಚಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ಗಳು
ರೈತರ ಮೇಲೆ ಒತ್ತಡ ಹೇರುತ್ತಿಲ್ಲ. ಆದರೆ, ಖಾಸಗಿ ಬ್ಯಾಂಕ್ಗಳನ್ನು ನಿಯಂತ್ರಿಸುವ ಅ ಧಿಕಾರ ನಮಗಿಲ್ಲ. ಆದರೂ ಈ ಕುರಿತು ಕ್ರಮ ಜರುಗಿಸಲಾಗುವುದು.
– ರಂಗನಾಥ ನೂಲಿಕರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ