ಇನ್ನೆರಡು ಉಪಮುಖ್ಯಮಂತ್ರಿ ಹುದ್ದೆ; ಸತ್ಯಕ್ಕೆ ದೂರವಾದ ಸುದ್ದಿಯೆಂದ ಡಿಸಿಎಂ ಸವದಿ
Team Udayavani, Dec 15, 2019, 12:41 PM IST
ರಾಯಚೂರು: ರಾಜ್ಯದಲ್ಲಿ ಇನ್ನೆರಡು ಉಪಮುಖ್ಯಮಂತ್ರಿ ಹುದ್ದೆ ನೀಡುವ ವಿಚಾರ ಸತ್ಯಕ್ಕೆ ದೂರವಾಗಿದ್ದು, ಅದು ಮಾಧ್ಯಮಗಳ ಸೃಷ್ಟಿ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟ ಪುನರಚನೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಪಕ್ಷದ ನಾಯಕರಿಗೆ ಅಸಮಾಧಾನ ಎನ್ನುವುದೆಲ್ಲ ಬರೀ ಊಹಾಪೋಹವಷ್ಟೇ. ನಾನು ದೆಹಲಿಗೆ ತೆರಳಿದ್ದು ಯಾವ ಸ್ಥಾನಮಾನಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಪೌರತ್ವ ತಿದ್ದುಪಡಿ ಮಸೂದೆಯಿಂದ ದೇಶದ ಯಾವ ಸಮುದಾಯಕ್ಕೆ ತೊಂದರೆ ಆಗುವುದಿಲ್ಲ. ಕಾಯಿದೆ ಬಗ್ಗೆ ಕೆಲವರು ಗೊಂದಲ ಉಂಟು ಮಾಡುತ್ತಿದ್ದಾರೆ. ಯಾರು ಆತಂಕಪಡುವ ಅಗತ್ಯವಿಲ್ಲ ಎಂದರು.
ನೆರೆ ಹಾನಿಗೆ ಒಳಗಾದ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ 2ನೇ ಹಂತದ ಪರಿಹಾರ ಬಂದ ಕೂಡಲೇ ಪರಿಹಾರ ಹಣ ಜಮಾ ಮಾಡಲಾಗುವುದು. ಸಾರಿಗೆ ಇಲಾಖೆಯಿಂದ 1200 ನೂತನ ಬಸ್ ಖರೀದಿಗೆ ಚಿಂತನೆ ನಡೆದಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಬಸ್ ನೀಡಲಾಗುವುದು ಎಂದರು.
ಸಚಿವ ಪ್ರಭು ಚವ್ಹಾಣ್ ಜೊತೆಗಿದ್ದರು.