ಜಿಲ್ಲೆಯಲ್ಲಿ ಉದ್ಯಮ ಸ್ಥಾಪನೆಗೆ ಅವಕಾಶ
Team Udayavani, Nov 15, 2017, 4:17 PM IST
ರಾಯಚೂರು: ರಾಜ್ಯದ 15 ಸ್ಥಳಗಳಲ್ಲಿ ವೆಂಡರ್ ಡೆವಲಪ್ ಮೆಂಟ್ ಕಾರ್ಯಕ್ರಮ ಆಯೋಜಿಸಿದ್ದು, ನಮ್ಮ ಜಿಲ್ಲೆಯಲ್ಲೂ ರಾಯಚೂರು ರೋಡ್ ಶೋ ಹಮ್ಮಿಕೊಂಡಿರುವುದು ಯುವೋದ್ಯಮಿಗಳಿಗೆ ಒಳ್ಳೆಯ ಅವಕಾಶ ಎಂದು ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಾಣಿಜ್ಯೋದ್ಯಮ ಸಂಘ ಮತ್ತು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಯಚೂರು ರೋಡ್ ಶೋ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಆಯೋಜಿಸಿರುವ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗ ಸಭೆಗೆ ಜಿಲ್ಲೆಯ ಉದ್ದಿಮೆದಾರರು ತೆರಳಬೇಕು. ಆ ಮೂಲಕ ಹೆಚ್ಚು ಅವಕಾಶಗಳನ್ನು ಪಡೆಯಬೇಕು ಎಂದರು. ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಸೋಲಾರ್, ಗ್ರಾನೈಟ್, ಕಾಟನ್ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಜಿಲ್ಲೆಯಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಸಾಕಷ್ಟು ಅವಕಾಶಗಳಿದ್ದು, ಕೃಷ್ಣ, ತುಂಗಭದ್ರಾ ನದಿಗಳ ಪ್ರದೇಶವಾದ್ದರಿಂದ ನೀರು, ವಿದ್ಯುತ್ ಹಾಗೂ ಕಡಿಮೆ ಬೆಲೆಯಲ್ಲಿ ಉದ್ಯಮ ಸ್ಥಾಪಿಸಲು ಅವಕಾಶವಿದೆ ಎಂದರು.
ಕಲಬುರಗಿಯ ಎಸ್ಬಿಐ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಅಬೀದ್ ಹುಸೇನ್ ಮಾತನಾಡಿ, ಉದ್ದಿಮೆಗಳಲ್ಲಿ
ನಮ್ಮ ರಾಜ್ಯ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ. ಕಾಫೀ, ಹೂ, ಏರೋಸ್ಪೇಸ್ ಸಾಫ್ಟ್ವೇರ್ನಲ್ಲಿ ಮುಂದಿದೆ. ಬ್ಯಾಂಕ್ಗಳು ಬಂಗಾರದ ಮೊಟ್ಟೆಯಿಡುವ ಕೋಳಿಗಳಿದ್ದಂತೆ. ಅವುಗಳನ್ನು ಪೋಷಿಸಬೇಕು. ನಿಮ್ಮಿಂದಲೆ ಬ್ಯಾಂಕ್ಗಳು ನಡೆಯುತ್ತವೆ. ನಮ್ಮಿಂದ ನೀವು ನಿಮ್ಮಿಂದ ನಾವು ಎಂಬ ತತ್ವದಡಿ ಬಾಳಬೇಕು ಎಂದರು.
ವಾಣಿಜ್ಯೋಧ್ಯಮ ಸಂಘದ ಜಿಲ್ಲಾಧ್ಯಕ್ಷ ತ್ರಿವಿಕ್ರಮ ಜೋಶಿ ಮಾತನಾಡಿ, ರಾಜ್ಯದಲ್ಲಿ ವಿಶ್ವ ಹೂಡಿಕೆದಾರರ ಸಮಾವೇಶ
ಹಮ್ಮಿಕೊಳ್ಳಲಾಗಿತ್ತು. ಅಂತಾರಾಷ್ಟ್ರೀಯ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ರೈಸ್ ಮಿಲ್ಲರ್ಸ್ ಮತ್ತು ಕಾಟನ್ ಜಿನ್ನಿಂಗ್ ಇತ್ತೀಚೆಗೆ ಬೆಳವಣಿಯಾಗತ್ತಿದೆ ಎಂದರು.
ಭತ್ತದ ಉಪಯೋಗಕ್ಕಾಗಿ ವಿಶೇಷ ಯಂತ್ರಾಗಾರವನ್ನು ಕಂಡುಹಿಡಿದ ವಿಕ್ರಮ ಅವರಿಗೆ ಸನ್ಮಾನಿಸಲಾಯಿತು. ಕೆನರಾ
ಬ್ಯಾಂಕಿನಿಂದ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರ ನೀಡಲಾಯಿತು.
ರಾಜ್ಯ ಸಣ್ಣ ಕೈಗಾರಿಕೆಗಳ ಖಜಾಂಚಿ ಕೆ.ಎಂ.ನರಸಿಂಹ ಮೂರ್ತಿ, ಶಿಲ್ಪಾ ಮೆಡಿಕೇರ್ ಮ್ಯಾನೆಜಿಂಗ್ ಡೈರೆಕ್ಟರ್
ವಿಷ್ಣುಕಾಂತ. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಹ್ಮದ್, ಇರ್ಫಾನ್, ಜಗದೀಶ ಗುಪ್ತ ಸೇರಿ ಇತರರಿದ್ದರು.
ಬ್ಯಾಂಕ್ ಸಾಲದ್ದೇ ಸಮಸ್ಯೆ: ನಂತರ ನಡೆದ ಸಂವಾದದಲ್ಲಿ ಪಾಲ್ಗೊಂಡಿದ್ದ ಯುವ ಉದ್ಯಮಿಗಳು ತಮಗೆ ಬ್ಯಾಂಕ್
ಸಾಲದ್ದೇ ಸಮಸ್ಯೆಯಾಗಿದೆ ಎಂದು ದೂರಿದರು. ಯಾವ ಯೋಜನೆಯಡಿ ಎಷ್ಟು ಸಾಲ ಸಿಗಲಿದೆ ಎಂಬ ಮಾಹಿತಿ
ಸರಿಯಾಗಿ ನೀಡುವುದಿಲ್ಲ. ಪ್ರತಿಯೊಂದಕ್ಕೂ ಶ್ಯೂರಿಟಿ ಕೇಳುತ್ತಾರೆ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಅಲೆಸುತ್ತಾರೆ
ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಶಿ, ಬ್ಯಾಂಕ್ ಸಾಲ ನೀಡಲು ಅದರದ್ದೇ ಆದ ನಿಯಮಗಳಿವೆ. ಮನಬಂದಂತೆ ಸಾಲ ನೀಡಿದರೆ ವ್ಯವಸ್ಥಾಪಕರು ಹೊಣೆಯಾಗುತ್ತಾರೆ. ಅಲ್ಲದೇ, ಯುವ ಉದ್ಯಮಿಗಳು ಸಬ್ಸಿಡಿಗಾಗಿ ಸಾಲ ಪಡೆಯಬಾರದು ಎಂದು ಕಿವಿಮಾತು ಹೇಳಿದರು.