ನೀರಾವರಿ ಕಚೇರಿಗೆ ಬೀಗ
Team Udayavani, Nov 19, 2019, 1:17 PM IST
ಸಿರವಾರ: ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ 92ನೇ ಉಪವಿಭಾಗದ ಜಕ್ಕಲದಿನ್ನಿ, ಗಣದಿನ್ನಿ ಕೊನೆ ಭಾಗಕ್ಕೆ ನೀರು ತಲುಪದ ಹಿನ್ನಲೆಯಲ್ಲಿ ಆ ಭಾಗದ ರೈತರು ಇಲ್ಲಿನ ತುಂಗಭದ್ರಾ ನೀರಾವರಿ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಸಿರವಾರ ತಾಲೂಕಿನ ತುಂಗಭದ್ರಾ ಎಡದಂಡೆ ಕಾಲುವೆಯ 92ನೇ ಡಿಸ್ಟ್ರಿಬ್ಯೂಟರ್ನ ಜಕ್ಕಲದಿನ್ನಿ, ಗಣದಿನ್ನಿ, ಭಾಗ್ಯನಗರ, ಮಾಚನೂರು, ಹಳ್ಳಿಹೊಸೂರ, ತುಪ್ಪದೂರು, ಶಾಖಾಪೂರ ಭಾಗಕ್ಕೆ ಕಳೆದ ನಾಲ್ಕು ತಿಂಗಳಿನಿಂದ ಸಮರ್ಪಕವಾಗಿ ನೀರು ಹರಿದಿಲ್ಲ. ಹೀಗಾಗಿ ಹತ್ತಿ, ಸೂರ್ಯಕಾಂತಿ, ಮೆಣಸಿನ ಕಾಯಿ, ಕಡಲೆ, ಜೋಳ ಇತ್ಯಾದಿ ಬೆಳೆಗಳು ಒಣಗುತ್ತಿವೆ. ಸಮರ್ಪಕ ನೀರು ಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. 92ನೇ ಡಿಸ್ಟ್ರಿಬ್ಯೂಟರ್ ಹಾಗೂ ಮುಖ್ಯ ಕಾಲುವೆಗೆ ಕಳೆದ ಕೆಲವು ದಿನಗಳಿಂದ ಅಕ್ರಮವಾಗಿ ಪಂಪ್ಸೆಟ್ ಅಳವಡಿಸಿ ನೀರು ಪಡೆಯುತ್ತಿದ್ದಾರೆ. ಈ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಜರುಗಿಸಿಲ್ಲ ಎಂದು ರೈತರು ದೂರಿದರು.
ಸ್ಥಳಕ್ಕೆ ಭೇಟಿ ನೀಡಿದ ಉಪ ತಹಶೀಲ್ದಾರ್ ಸಿದ್ಧನಗೌಡ ಅವರೊಂದಿಗೆ ರೈತರು ಮಾತನಾಡಿ, 24 ಗಂಟೆಯಲ್ಲಿ ನೀರು ಹರಿಸದಿದ್ದರೆ ರಸ್ತೆತಡೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಉಪ ತಹಶೀಲ್ದಾರ್ ಸಿದ್ಧನಗೌಡ ಮಾತನಾಡಿ, ಈ ಕುರಿತು ನೀರಾವರಿ ಅ ಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ರೈತರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಹನುಮರೆಡ್ಡಿ ಗೌಡ, ಮೌಲಾಸಾಬ್ ಗಣದಿನ್ನಿ, ಶರೀಫಸಾಬ್, ದೇವಣ್ಣ ಗಣದಿನ್ನಿ, ಸೂಗರೆಡ್ಡಿಗೌಡ, ರಾಜಶೇಖರಗೌಡ ಜಕ್ಕಲದಿನ್ನಿ, ಶರಣಪ್ಪ ಜಕ್ಕಲದಿನ್ನಿ, ಶೇಖರಪ್ಪಗೌಡ ಜಕ್ಕಲದಿನ್ನಿ, ನಾಗರೆಡ್ಡಿಗೌಡ ಜಕ್ಕಲದಿನ್ನಿ, ಈರಪ್ಪ ನಾಯಕ ಜಕ್ಕಲದಿನ್ನಿ, ನಾಗಪ್ಪ ಜಕ್ಕಲದಿನ್ನಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.