ಆಂಧ್ರ-ತೆಲಂಗಾಣ ಜಲವ್ಯಾಜ್ಯದ ಮೇಲಿರಲಿ ನಿಗಾ
ತೆಲಂಗಾಣ ರಾಜ್ಯಗಳು ಕರ್ನಾಟಕಕ್ಕಿಂತ ಮುಂದು ಎಂದೇ ಹೇಳಬೇಕು.
Team Udayavani, Jul 8, 2021, 8:15 PM IST
ರಾಯಚೂರು: ಮಾನ್ವಿ ತಾಲೂಕಿನ ರಾಜಲಬಂಡಾ ತಿರುವು ನಾಲಾ ಯೋಜನೆ ನೀರು ಹಂಚಿಕೆ ವಿಚಾರದಲ್ಲಿ ಆಂಧ್ರ, ತೆಲಂಗಾಣದ ನಡುವೆ ತಿಕ್ಕಾಟ ಜೋರಾಗಿದೆ. ಇಬ್ಬರ ನಡುವಿನ ಈ ವ್ಯಾಜ್ಯ ರಾಜ್ಯಕ್ಕೆ ಸಂಬಂಧಿಸದೇ ಇದ್ದರೂ ರಾಜ್ಯ ಸರ್ಕಾರ ನಿಗಾ ವಹಿಸುವ ಅನಿವಾರ್ಯತೆಯಂತೂ ಇದೆ.
ತುಂಗಭದ್ರಾ ನದಿಯಲ್ಲಿ ರಾಜ್ಯ ಬಳಸುತ್ತಿರುವ ನೀರಿನ ಬಗ್ಗೆ ಆಂಧ್ರ ಸರ್ಕಾರ ಗುಪ್ತವಾಗಿ ಮಾಹಿತಿ ಸಂಗ್ರಹಿಸುತ್ತಿದೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಹೇರಳ ಜಲ ಸಂಪನ್ಮೂಲದ ಮೇಲೆ ನೆರೆ ರಾಜ್ಯಗಳ ಕಣ್ಣಿರುವುದನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ನೆರೆ ರಾಜ್ಯಗಳಷ್ಟೇ ಕಾಳಜಿ ರಾಜ್ಯ ಸರ್ಕಾರಕ್ಕೂ ಇರಬೇಕಿದೆ.
ಏನಿದು ವಿವಾದ?: ರಾಜಲಬಂಡಾ ಯೋಜನೆಯಡಿ ತುಂಗಭದ್ರಾ ನದಿ ನೀರನ್ನು 1976ರಲ್ಲಿ ಕರ್ನಾಟಕ ಮತ್ತು ಅವಿಭಜಿತ ಆಂಧ್ರ ಸರ್ಕಾರಕ್ಕೆ ಹಂಚಿಕೆ ಮಾಡಲಾಯಿತು. 17.10 ಟಿಎಂಸಿ ನೀರಿನ ಲಭ್ಯತೆಯಲ್ಲಿ ಆಂಧ್ರಕ್ಕೆ (ಈಗಿನ ತೆಲಂಗಾಣ) 15.90 ಟಿಎಂಸಿ ಹಾಗೂ ಕರ್ನಾಟಕಕ್ಕೆ 1.20 ಟಿಎಂಸಿ ನೀರು ಹಂಚಿಕೆ ಮಾಡಲಾಯಿತು. ಈ ನೀರಿನಲ್ಲಿ ತೆಲಂಗಾಣ ಭಾಗದ 87,500 ಹೆಕ್ಟೇರ್ ಹಾಗೂ ರಾಜ್ಯದ 5879 ಹೆಕ್ಟೇರ್ ಪ್ರದೇಶ
ನೀರಾವರಿಗೆ ಒಳಪಟ್ಟಿದೆ.
ಆಂಧ್ರ ಇಬ್ಭಾಗವಾದ ಮೇಲೆ ಸೀಮಾಂಧ್ರಕ್ಕೆ ಈ ನೀರು ಲಭ್ಯವಾಗಲಿಲ್ಲ. ಇಷ್ಟು ದಿನ ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ನೀರು ಪಡೆಯುತ್ತಿದ್ದ ಆಂಧ್ರ ಸರ್ಕಾರ ಈಗ ಅನಧಿಕೃತವಾಗಿ ಕೃಷಿಗೆ ಪಡೆಯಲು ಮುಂದಾಗಿದ್ದು, ಅಕ್ರಮವಾಗಿ ಕಾಲುವೆ ನಿರ್ಮಾಣಕ್ಕೆ ಮುಂದಾಗಿದೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ತೆಲಂಗಾಣ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನೇರವಾಗಿ ಜಗಳಕ್ಕೆ ಬರುತ್ತಿದ್ದಾರೆ. ಇದರಿಂದ ಎಚ್ಚೆತ್ತ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ತುಂಗಭದ್ರಾ ನದಿ ಬಲಭಾಗದಲ್ಲಿ ಆಂಧ್ರ ಸರ್ಕಾರ ನಿರ್ಮಿಸುತ್ತಿರುವ ಕಾಲುವೆ ಕಾಮಗಾರಿ ತಡೆಯುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ರಾಜ್ಯದ ಪಾತ್ರವೇನು?
ರಾಜೊಳ್ಳಿಬಂಡಾ ನಾಲಾ ಯೋಜನೆ ಅಂತಾರಾಜ್ಯಕ್ಕೆ ಸಂಬಂಧಿಸಿದ್ದು, ಮುಖ್ಯ ಕಾಲುವೆಯ 0 ಕಿ.ಮೀದಿಂದ 42.6 ಕಿ.ಮೀವರೆಗೆ ರಾಜ್ಯಕ್ಕೆ ಒಳಪಟ್ಟಿದೆ. ಇದು ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ಸಂಬಂಧಿಸಿದ ಜಗಳ ಎಂಬುದರಲ್ಲಿ ಅನುಮಾನ ಬೇಡ. ಆದರೆ, ನೀರು ಹರಿದು ಹೋಗುತ್ತಿರುವುದು ರಾಜ್ಯದ ತುಂಗಭದ್ರಾ ನದಿಯಿಂದ. ಗಡಿ ಜಿಲ್ಲೆಯಲ್ಲಿ ಉಲ್ಬಣಿಸಿರುವ ಈ ಸಮಸ್ಯೆ ಆಗು- ಹೋಗುಗಳ ಬಗ್ಗೆ ರಾಜ್ಯ ಸರ್ಕಾರ ಕೂಡ ವಿಶೇಷ ನಿಗಾ ವಹಿಸುವ ಅನಿವಾರ್ಯತೆ ಇದೆ ಎನ್ನುತ್ತಾರೆ ನೀರಾವರಿ ತಜ್ಞರು. ನೀರಿಗಾಗಿ ನಡೆಯುವ ಪ್ರತಿ ಘಟನೆಗಳ ಮೇಲೂ ರಾಜ್ಯ ಸರ್ಕಾರ ವಿಶೇಷ ನಿಗಾ ವಹಿಸಬೇಕಿದೆ. ಇಲ್ಲವಾದರೆ ಮುಂದೊಂದು ದಿನ ಉಭಯ ರಾಜ್ಯಗಳ ಜಲ ವಿವಾದ ರಾಜ್ಯವನ್ನು ಸುತ್ತಿಕೊಂಡರೂ ಅಚ್ಚರಿ ಪಡಬೇಕಿಲ್ಲ.
ಆಂಧ್ರ, ತೆಲಂಗಾಣ ಮುಂದು
ನೀರಾವರಿ ವಿಚಾರಕ್ಕೆ ಬಂದರೆ ಆಂಧ್ರ, ತೆಲಂಗಾಣ ರಾಜ್ಯಗಳು ಕರ್ನಾಟಕಕ್ಕಿಂತ ಮುಂದು ಎಂದೇ ಹೇಳಬೇಕು. ಪ್ರತಿ ವರ್ಷ ಕೃಷ್ಣಾ, ತುಂಗಭದ್ರಾ ನದಿಯಿಂದ ಹರಿದು ಹೋಗುವ ಹೆಚ್ಚುವರಿ ನೀರಿನಲ್ಲೇ ಆಂಧ್ರ, ತೆಲಂಗಾಣಗಳು ಸಾಕಷ್ಟು ಕೃಷಿ ಮಾಡಿಕೊಂಡಿವೆ. 2019ರಲ್ಲಿ ನೆರೆ ಎದುರಾದಾಗ ಉಭಯ ನದಿಗಳಿಂದ ಸಾವಿರ ಟಿಎಂಸಿಗೂ ಅಧಿಕ ನೀರು ಹರಿದು ಹೋಗಿದೆ ಎನ್ನುತ್ತಾರೆ ನೀರಾವರಿ ತಜ್ಞರು. ನಮ್ಮಲ್ಲಿ
ಸಂಗ್ರಹ ಸಾಮರ್ಥ್ಯ ಇಲ್ಲ ಎನ್ನುವ ಕಾರಣಕ್ಕೆ ನದಿ ಮೂಲಕ ವೃಥಾ ನೀರು ಹರಿದು ಹೋಗುತ್ತಿದೆ. ಈ ಅವಕಾಶ ಬಳಸಿಕೊಳ್ಳುವ ಈ ರಾಜ್ಯಗಳು ನೀರಾವರಿ ವಲಯ ಹೆಚ್ಚಿಸಿಕೊಂಡಿರುವುದು ಸುಳ್ಳಲ್ಲ
ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ಏತ ನೀರಾವರಿಗೆ, ಕಾರ್ಖಾನೆಗಳ ಬಳಕೆಗೆ, ಕುಡಿವ ನೀರಿನ ಯೋಜನೆ ಸೇರಿದಂತೆ ವಿವಿಧ ಕಾರಣಕ್ಕೆ ಬಳಸುತ್ತಿರುವ ನೀರನ್ನು ಕರ್ನಾಟಕದ ಖಾತೆಗೆ ಸೇರಿಸಲು ಆಂಧ್ರ, ತೆಲಂಗಾಣ ಸರ್ಕಾರಗಳು ನಿರಂತರ ಪ್ರಯತ್ನಿಸುತ್ತಿದೆ. ಇಂಥ ವೇಳೆ ನಮ್ಮ ಸರ್ಕಾರ ಕೂಡ ಆಂಧ್ರ, ತೆಲಂಗಾಣಕ್ಕೆ ಎಷ್ಟು ನೀರು ಹೋಗುತ್ತಿದೆ ಎಂಬ ಲೆಕ್ಕಾಚಾರ ಹಾಕಬೇಕಿದೆ. ರಾಜಲಬಂಡಾ ನದಿ ಪಾತ್ರದಲ್ಲಿ ಆನ್ ಸೀಜನ್ ಮತ್ತು ಆಫ್ ಸೀಜನ್ನಲ್ಲಿ ಎಷ್ಟು ನೀರು ಹರಿದು ಹೋಗುತ್ತಿದೆ ಎಂಬ ಲೆಕ್ಕಾಚಾರ ಮಾಡಬೇಕಿದೆ. ತುಂಗಭದ್ರಾ ಜಲಾಶಯದಲ್ಲಿ 33 ಟಿಎಂಸಿ ಹೂಳಿದ್ದರೆ ಈ ಎರಡು ರಾಜ್ಯಗಳು ತಮ್ಮ ಪಾಲಿನ ನೀರನ್ನು ಮಾತ್ರ ಪಡೆಯುತ್ತಿದ್ದು, ಹೂಳು ನಮಗೆ ಸಂಬಂಧಿಸಿದ್ದಲ್ಲ ಎನ್ನುತ್ತವೆ. ಮುಂದೆ ನೀರಿನ ಸಮಸ್ಯೆ ಇನ್ನೂ ಜಟಿಲವಾಗಲಿದ್ದು, ಈಗಲೇ ಎಚ್ಚರಿಕೆ ವಹಿಸುವುದು ಸೂಕ್ತ.
ಹನುಮನಗೌಡ
ಬೆಳಗುರ್ಕಿ, ರೈತ ಮುಖಂಡ
*ಸಿದ್ಧಯ್ಯಸ್ವಾಮಿ ಕುಕುನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್