ಇನ್ನೂ ಆರಂಭವಾಗಿಲ್ಲ ತೊಗರಿ ಖರೀದಿ ಕೇಂದ್ರ
ಎಪಿಎಂಸಿ ವರ್ತಕರಿಗೆ ತೊಗರಿ ಮಾರಲು ಮುಂದಾದ ರೈತರು
Team Udayavani, Jan 11, 2020, 3:12 PM IST
ಮುದಗಲ್ಲ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್ಎಕ್ಯೂ ತೊಗರಿ ಖರೀದಿಸಲು ವಿಳಂಬ ಮಾಡುತ್ತಿರುವ ಕಾರಣ ರಾಶಿ ಮಾಡಿರುವ ರೈತರು ಹಣಕಾಸಿನ ಅಡಚಣೆಯಿಂದಾಗಿ ಸ್ಥಳೀಯ ಎಪಿಎಂಸಿ ವರ್ತಕರಿಗೆ, ಖಾಸಗಿ ದಲ್ಲಾಳಿ ಅಂಗಡಿಗಳಿಗೆ ಮಾರಾಟಕ್ಕೆ ಮುಂದಾಗಿದ್ದಾರೆ.
ತಾಲೂಕಿನಲ್ಲಿ ಒಟ್ಟು 17, 772 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಈ ಭಾರಿ ಮುಂಗಾರು ಉತ್ತಮ ಮಳೆಯಾಗಿದ್ದರಿಂದ ಫಸಲು ಚೆನ್ನಾಗಿಯೇ ಬಂದಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಥಿತಿವಂತ ರೈತರು ದಾಸ್ತಾನಿನಲ್ಲಿ ತೊಗರಿ ಸಂಗ್ರಹಿಸಿಟ್ಟರೆ, ಇನ್ನು ಸಣ್ಣ-ಅತಿ ಸಣ್ಣ ರೈತರು ಹತ್ತಿರದ ಖಾಸಗಿ ಅಂಗಡಿಗಳಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಸಮರ್ಪಕ ದರ ಸಿಗದೇ ನಷ್ಟ ಅನುಭವಿಸುತ್ತಿರುವ ತೊಗರಿ ಬೆಳೆದ ರೈತರಿಗೆ ಸರಕಾರದ ಬೆಂಬಲ ಬೆಲೆ ಗಗನ ಕುಸುಮವಾಗಿದೆ.
ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ 5 ಸಾವಿರದ ಗಡಿ ದಾಟುತ್ತಿಲ್ಲ. 4500ರಿಂದ 4800 ರೂ. ವರೆಗೆ ಮಾತ್ರ ದರ ಸಿಗುತ್ತಿದೆ. ಇದರಿಂದ ರೈತ ಕಂಗಾಲಾಗಿದ್ಧಾನೆ. ಅಲ್ಲದೇ ಎಷ್ಟೋ ಗ್ರಾಮೀಣ ಪ್ರದೇಶಗಳಲ್ಲಿ ಬೇರೆ ಜಿಲ್ಲೆಗಳ ವ್ಯಾಪಾರಸ್ಥರು ರೈತರಿದ್ದ ಸ್ಥಳಕ್ಕೆ ಆಗಮಿಸಿ 5000ದಿಂದ 5200 ರೂ. ವರೆಗೆ ದರ ನಿಗದಿ ಮಾಡಿ ಖರೀದಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಕೇಂದ್ರ ಸರಕಾದ 5800 ರೂ. ಬೆಂಬಲ ಬೆಲೆ ಜತೆಗೆ ರಾಜ್ಯ ಸರಕಾರದ ಪ್ರೋತ್ಸಾಹ ಧನ 300 ರೂ.ಸೇರಿ ಒಟ್ಟು ಪ್ರತಿ ಕ್ವಿಂಟಲ್ ತೊಗರಿಗೆ 6100.ರಂತೆ ಖರೀದಿಸಲು ಖರೀದಿ ಕೇಂದ್ರ
ತೆರೆಯಲು ಸರಕಾರ ಸೂಚಿಸಿದೆ. ಅದರಂತೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಲಿಂಗಸುಗೂರ, ಗುರಗುಂಟ, ಮುದಗಲ್ಲ, ನಾಗಲಾಪುರ, ಮಸ್ಕಿ, ಹಟ್ಟಿ, ನಾಗರಹಾಳ ಸೇರಿದಂತೆ ತಾಲೂಕಿನಲ್ಲಿ 11 ತೊಗರಿ ಖರೀದಿ ಕೇಂದ್ರ ಸ್ಥಾಪಿಸಲು ಸೂಚಿಸಿದೆ.
ಆದರೆ ಅವುಗಳು ಇನ್ನು ಕಾರ್ಯಾರಂಭವಾಗದ ಕಾರಣ ಹಣಕಾಸಿನ ತೊಂದರೆಯಲ್ಲಿರುವ ರೈತರು ಖಾಸಗಿ ಅಂಗಡಿಕಾರರಿಗೆ ತೊಗರಿ ಮಾರಾಟಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಬಲ ಬೆಲೆಗೆ ತೊಗರಿ ಮಾರಾಟ ಮಾಡಿ ಹಣಕ್ಕಾಗಿ ತಿಂಗಳಾನುಗಟ್ಟಲೆ ಕಾಯಬೇಕು. ಹಣಕಾಸಿನ ತೊಂದರೆಗಾಗಿ ತೊಗರಿ ಮಾರಾಟ ಮಾಡುತ್ತಿದ್ದೇನೆ ಎನ್ನುತ್ತಾನೆ ತೊಗರಿ ಬೆಳೆದ ರೈತ ಪಿಕೇಪ್ಪ.
ತೊಗರಿ ಖರೀದಿಸಲು ಅನುಮತಿ ನೀಡಲಾಗಿದೆ. ಆದರೆ ಆನ್ಲೈನ್ ಸ್ಥಗಿತವಾಗಿದೆ ಎಂದು ಪಟ್ಟಣದ ವಿಎಸ್ ಎಸ್ಎನ್ ಮುಖ್ಯಸ್ಥರು ತಿಳಿಸಿದ್ದಾರೆ.
ದೇವಪ್ಪ ರಾಠೊಡ