ಮಸ್ಕಿ ಶ್ರೀ ಮಲ್ಲಿಕಾರ್ಜುನ ಅದ್ಧೂರಿ ರಥೋತ್ಸವ
Team Udayavani, Feb 10, 2020, 4:12 PM IST
ಮಸ್ಕಿ: ಭಾರತ ಹುಣ್ಣಿಮೆ ಪ್ರಯುಕ್ತ ಪಟ್ಟಣದ ಆರಾಧ್ಯದೈವ ಹಾಗೂ ಎರಡನೇ ಶ್ರೀಶೈಲವೆಂದೇ ಕರೆಯಲ್ಪಡುವ ಇಲ್ಲಿನ ಶ್ರೀ ಮಲ್ಲಿಕಾರ್ಜುನ ದೇವರ ಮಹಾರಥೋತ್ಸವ ಸಾವಿರಾರು ಭಕ್ತರ ಜಯಘೋಷ, ಸಕಲ ವಾದ್ಯವೈಭವದೊಂದಿಗೆ ರವಿವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
ತೇರಿನ ಮನೆ ಹತ್ತಿರ ಗಚ್ಚಿನಮಠದ ಶ್ರೀ ವರರುದ್ರಮುನಿ ಶಿವಾಚಾರ್ಯ ಶ್ರೀಗಳು ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ತೇರಿನಮನೆ ಹತ್ತಿರದಿಂದ ಪ್ರಾರಂಭಗೊಂಡ ರಥೋತ್ಸವವು ದೈವದ ಕಟ್ಟೆಯವರೆಗೆ ತೆರಳಿತು.
ಮರಳಿ ತೇರಿನಮನೆಗೆ ಆಗಮಿಸಿತು. ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಭಕ್ತರು ರಥದ ಮೇಲೆ ಉತ್ತತ್ತಿ, ಬಾಳೆಹಣ್ಣು, ಹೂವು ತೂರಿ ನಮಿಸಿ ಭಕ್ತಿ ಸಮರ್ಪಿಸಿದರು. ಮಲ್ಲಿಕಾರ್ಜುನನಿಗೆ ಜಯಘೋಷ ಹಾಕಿದರು. ಮಸ್ಕಿ ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳ ಭಕ್ತರು, ಮಹಾರಾಷ್ಟ್ರ, ಆಂಧ್ರಪ್ರದೇಶದ ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.