ಎಪಿಎಂಸಿಯಲ್ಲಿ ಸಾಮಾಜಿಕ ಅಂತರ ಮಾಯ
Team Udayavani, Apr 5, 2020, 5:13 PM IST
ರಾಯಚೂರು: ಇಲ್ಲಿನ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಂಪೂರ್ಣ ಕಾರ್ಯೋನ್ಮುಖವಾಗಿದ್ದು, ಕೋವಿಡ್ 19 ವೈರಸ್ ಹರಡದಂತೆ ತಡೆಯುವ ಯಾವುದೇ ಮುನ್ನೆಚ್ಚರಿಕೆಗಳು ಕಂಡು ಬರಲಿಲ್ಲ.
ರೈತರು ಭತ್ತ, ಈರುಳ್ಳಿ, ಶೇಂಗಾ ಸೇರಿದಂತೆ ನಾನಾ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿದ್ದರು. ಖರೀದಿದಾರರು ಕೂಡ ಟೆಂಡರ್ ನಡೆಸಿದರು. ವರ್ತಕರು, ಮಧ್ಯವರ್ತಿಗಳು ಮಾತ್ರ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರೆ, ರೈತರಾಗಲಿ, ಅಲ್ಲಿ ಕೆಲಸ ಮಾಡುವ ಹಮಾಲಿಗಳಾಗಲಿ ಆರೋಗ್ಯ ಸಂಬಂಧಿ ತ ಮುನ್ನೆಚ್ಚರಿಕೆ ವಹಿಸಿದ್ದು ಕಂಡು ಬರಲಿಲ್ಲ. ಕೆಲ ರೈತರು, ಹಮಾಲಿಗಳು ಶಲ್ಯೆಯನ್ನೇ ಮುಖಕ್ಕೆ ಕಟ್ಟಿದ್ದರೆ, ಮಹಿಳೆಯರು ಸೆರಗನ್ನೆ ಮುಖಗವಚ ಮಾಡಿಕೊಂಡಿದ್ದು ಕಂಡು ಬಂತು. ಸೂಕ್ತ ಜಾಗೃತಿ ನೀಡಿದ್ದೇವೆ ಎಂದು ಹೇಳಿದ ಆಡಳಿತ ಮಂಡಳಿ, ಗಳಿಗೆಗೊಮ್ಮೆ ಮೈಕ್ನಲ್ಲಿ ಕೂಗಿ ಅಂತರ ಕಾಯ್ದುಕೊಳ್ಳಿ ಎಂದು ತಿಳಿಸುತ್ತಿತ್ತು. ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳಬೇಕು ಎಂದು ಹೇಳುತ್ತಿದ್ದರು.
ಆದರೆ, ಸಾಮಾಜಿಕ ಅಂತರ ಕಾಯ್ದುಕೊಂಡು ಮಾಡುವ ಕೆಲಸವಲ್ಲವಾದ್ದರಿಂದ ರೈತರು ಯಾವುದನ್ನು ಲೆಕ್ಕಿಸದೆ ತಮ್ಮಷ್ಟಕ್ಕೆ ತಾವು ಚೀಲ ತುಂಬಿ ತೂಕ ಮಾಡುತ್ತಿದ್ದರು. ಇನ್ನೂ ಮಹಿಳೆಯರು ಕೂಡ ಅಕ್ಕ ಪಕ್ಕ ಕುಳಿತು ಕಸ ಕಡ್ಡಿ ಆರಿಸುತ್ತಿದ್ದರೂ ಮುಖಕ್ಕೆ ಸೆರಗು ಅಡ್ಡಗಟ್ಟಿದ್ದರು.
ಇನ್ನೂ ಎಪಿಎಂಸಿ ಶುರುವಾಗಿ ಮೂರು ನಾಲ್ಕು ದಿನವಾದರು ಸುಳಿಯದ ರೈತರು ಐದನೇ ದಿನ ಮಾರುಕಟ್ಟೆಗೆ ಲಗ್ಗೆ ಹಾಕಿದ್ದು ಕಂಡು ಬಂತು.