ಸರ್ಕಾರಿ ಶಾಲೆ ಉಳಿವಿಗೆ ಎನ್ನೆಸ್ಸೆಸ್ ಬಲ
Team Udayavani, Mar 16, 2022, 3:04 PM IST
ಸಿಂಧನೂರು: ರಾಜ್ಯದ ಸರ್ಕಾರಿ ಶಾಲೆಗಳನ್ನು ಸದೃಢಗೊಳಿಸಲು ಈಗಾಗಲೇ ಸರ್ಕಾರ ನಾನಾ ರೀತಿಯ ಪ್ರಯತ್ನ ಮುಂದುವರಿಸಿದೆ. ಇದಕ್ಕೆ ಕೈ ಜೋಡಿಸಿರುವ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ಬಳಗ ಶಾಲೆಯೊಂದನ್ನು ದತ್ತು ಪಡೆದು ಹೊಸ ಹೊಳಪು ನೀಡುವಲ್ಲಿ ಯಶಸ್ಸು ಕಂಡಿದೆ.
ತಾಲೂಕಿನ ಹೊಸಳ್ಳಿ (ಇಜೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ವಿದ್ಯಾರ್ಥಿಗಳು ಹಾಗೂ ನೋಡುಗರನ್ನು ಆಕರ್ಷಿಸುತ್ತಿದೆ. ಎನ್ನೆಸ್ಸೆಸ್ ಯೋಜನೆಯಡಿ ಪ್ರತಿ ಕಾಲೇಜಿನಿಂದಲೂ ಗ್ರಾಮೀಣ ಭಾಗದಲ್ಲಿ ಸ್ವತ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ದುದ್ದುಪುಡಿ ಮಹಿಳಾ ವಿದ್ಯಾಲಯ ಆ ನಿಟ್ಟಿನಲ್ಲಿ ಹೊಸ ಗುರಿ ಹಾಕಿಕೊಂಡು ಸರ್ಕಾರಿ ಶಾಲೆ ದತ್ತು ಪಡೆದು, ಅದನ್ನು ಸುಸಜ್ಜಿತಗೊಳಿಸಿ ಮಕ್ಕಳ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡಿದೆ.
ಏನಿದು ಹೊಸ ಪ್ರಯತ್ನ?
ಶಾಲೆ ಆವರಣ ಸ್ವತ್ಛತೆ ಹಾಗೂ ಸಮತಟ್ಟು ಮಾಡುವುದು, ತೋಟದ ಆರೈಕೆ ಸೇರಿದಂತೆ ಇತರ ಕಾರ್ಯಕ್ರಮಗಳು ಎನ್ನೆಸ್ಸೆಸ್ನಲ್ಲಿ ನಡೆಯುತ್ತವೆ. ದುದ್ದುಪುಡಿ ಕಾಲೇಜಿನ ಎನ್ನೆಸ್ಸೆಸ್ ತಂಡ, ಇಡೀ ಶಾಲೆ ಚಿತ್ರಣವನ್ನೇ ಬದಲು ಮಾಡಲು ಮುಂದಾಗಿ ಯಶಸ್ಸು ಕೂಡ ಕಂಡಿದೆ. ಫೆ.6ರಿಂದ ಫೆ.12ರವರೆಗೂ ಇಲ್ಲಿ ಬಿಡಾರ ಹೂಡಿದ 100 ವಿದ್ಯಾರ್ಥಿನಿಯರು, ತಾವೇ ಬಣ್ಣದ ಡಬ್ಬಿ ಹಿಡಿದು ಕೆಲಸ ನಿರ್ವಹಿಸಿ ಶಾಲೆಗೆ ಹೊಸ ರೂಪ ಕೊಟ್ಟಿದ್ದಾರೆ. ಸುಣ್ಣ, ಬಣ್ಣ ಮಾಸಿ ಹೋಗಿದ್ದ ಶಾಲೆ ವಾರದಲ್ಲೇ ಹೊಸ ರೀತಿಯಲ್ಲಿ ಕಂಗೊಳಿಸಿದ್ದನ್ನು ಕಂಡು ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ.
ರೈಲಾಗಿ ಬದಲಾದ ಶಾಲೆ
ಆರಂಭದಲ್ಲಿ ಬಣ್ಣ ಮಾಸಿದ ಕೊಠಡಿಗಳೇ ಕಾಣುತ್ತಿದ್ದವು. ಈಗ ರೈಲು ಬೋಗಿ ಮಾದರಿ, ಆರಂಭದ ಕೊಠಡಿಗೆ ಎಂಜಿನ್ ಮಾದರಿ ಬಣ್ಣ ಬಳಿಯಲಾಗಿದೆ. ವಿದ್ಯಾರ್ಥಿಗಳು ಕೊಠಡಿ ಹೊರಗಿನ ದ್ವಾರದಲ್ಲಿ ನಿಂತಾಗ ರೈಲು ಏರುತ್ತಿರುವಂತೆ ಭಾಸವಾಗುತ್ತದೆ. ಶಾಲೆ ಕಾಂಪೌಂಡ್ ಹಾಗೂ ಗೇಟ್, ಕೊಠಡಿ ಒಳಭಾಗದಲ್ಲೂ ಬಣ್ಣದ ಚಿತ್ರ ಬಿಡಿಸಲಾಗಿದೆ. ಇದಕ್ಕೆಲ್ಲ ತಗುಲಿದ ವೆಚ್ಚವನ್ನು ಪಾಟೀಲ್ ಅಕಾಡೆಮಿ ವತಿಯಿಂದ ಭರಿಸಲಾಗಿದ್ದು, ಶಾಲೆ ನೋಡಲು ಇತರ ಶಾಲೆಗಳ ನಿಯೋಗ ಬರಲಾರಂಭಿಸಿವೆ.
ಚಿತ್ರಕಲಾ ಶಿಕ್ಷಕರ ಪ್ರಯತ್ನಕ್ಕೆ ಸಾಥ್
ಸರ್ಕಾರಿ ಶಾಲೆಯ ಚಿತ್ರಕಲಾ ಶಿಕ್ಷಕರು ಈ ಹಿಂದೆ ತಂಡಗಳನ್ನು ಕಟ್ಟಿಕೊಂಡು ಆಯಾ ಶಾಲೆಯ ದಾನಿಗಳು ಬಣ್ಣಗಳನ್ನು ಕೊಡಿಸಿದಾಗ, ಶಿಕ್ಷಣ ಇಲಾಖೆಯಿಂದ ನಿಯೋಜಿತವಾಗಿ ಶಾಲೆ ಅಂದ ಹೆಚ್ಚಿಸಲು ಶ್ರಮಿಸಿದ್ದರು. ಇದರಿಂದ 25ಕ್ಕೂ ಹೆಚ್ಚು ಶಾಲೆ ಹೊಸ ಕಳೆ ಪಡೆದುಕೊಂಡಿದ್ದವು. ಇದೀಗ ಖಾಸಗಿ ಕಾಲೇಜು ಕೂಡ ಅದೇ ನಿಟ್ಟಿನಲ್ಲಿ ಪ್ರಯತ್ನಿಸಿದ್ದರಿಂದ ಸರ್ಕಾರಿ ಶಾಲೆಯೊಂದು ಮಾದರಿಯಾಗಿ ಎಲ್ಲರ ಗಮನ ಸೆಳೆಯುತ್ತಿದೆ.
ಶಾಲೆ ಸಂಪೂರ್ಣ ಬದಲಾವಣೆ ಮಾಡಿದ್ದು, ರೈಲು ಬೋಗಿ ಮಾದರಿಯ ಕೊಠಡಿಗಳನ್ನು ನೋಡಿ ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ. ಸಮುದಾಯ ಸಹಭಾಗಿತ್ವ ದೊರಕಿದಾಗ ಹೆಚ್ಚಿನ ಸುಧಾರಣೆ ಸಾಧ್ಯ ಎನ್ನುವುದಕ್ಕೆ ನಮ್ಮ ಶಾಲೆ ನಿದರ್ಶನ. ಆರ್.ಸಿ.ಪಾಟೀಲ್ ತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು. -ವೀಣಾಬಾಯಿ, ಮುಖ್ಯಗುರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸಳ್ಳಿ(ಇಜೆ)
ಏನಾದರೊಂದು ಹೊಸ ಕೆಲಸ ಮಾಡ ಬೇಕೆಂಬ ಉದ್ದೇಶ ಇತ್ತು. ಎನ್ನೆಸ್ಸೆಸ್ ಉದ್ದೇಶವೂ ಕೂಡ. ಆ ನಿಟ್ಟಿನಲ್ಲಿ ವಿದ್ಯಾರ್ಥಿನಿಯರ ತಂಡ ಸಾಥ್ ನೀಡಿದ್ದರಿಂದ ಹೊಸಳ್ಳಿ ಶಾಲೆ ಮಾದರಿಯಾಗಿಸಲು ಸಾಧ್ಯವಾಗಿದೆ. -ಆರ್.ಸಿ. ಪಾಟೀಲ್, ಕಾರ್ಯದರ್ಶಿ, ದುದ್ದುಪುಡಿ ಮಹಿಳಾ ಮಹಾವಿದ್ಯಾಲಯ
-ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಮುಳ್ಳಿನ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ