ಪ್ರತಿ ತಿಂಗಳು ವೇತನ ಪಾವತಿಸಿ
Team Udayavani, Nov 5, 2019, 5:55 PM IST
ಸಿಂಧನೂರು: ಪ್ರತಿ ತಿಂಗಳು ವೇತನ ಪಾವತಿಸಲು ಆಗ್ರಹಿಸಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಧರಣಿ ನಡೆಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಹಿರೇಗೌಡ ಹಾಗೂ ಜಿಪಂ ಸದಸ್ಯ ಎನ್. ಶಿವನಗೌಡ ಗೊರೇಬಾಳ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ರಂಗನಾಥ ಗುಡಿ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲ ಸಿಬ್ಬಂದಿಗೆ 4 ತಿಂಗಳಿಗೊಮ್ಮೆ ಮತ್ತೆ ಕೆಲವರಿಗೆ 6 ತಿಂಗಳಿಗೊಮ್ಮೆ ವೇತನ ಪಾವತಿಸಲಾಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆಗೆ ತೊಂದರೆ ಆಗುತ್ತಿದೆ. ಪ್ರತಿ ತಿಂಗಳು 1ನೇ ತಾರೀಖೀನಂದು ವೇತನ ಸಂದಾಯ ಮಾಡುವಂತೆ ಸರಕಾರ ನಿಯಮ ರೂಪಿಸಿದ್ದರೂ ಜಿಪಂ ಲೆಕ್ಕ ಶೀರ್ಷಿಕೆಯಲ್ಲಿ ವೇತನ ಮಾಡಲು ವಿಳಂಬವಾಗುತ್ತಿದೆ. ಆದ್ದರಿಂದ ಅಧಿಕಾರಿಗಳು ಪ್ರತಿ ತಿಂಗಳು ವೇತನ ಪಾವತಿಗೆ ಮುಂದಾಗಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಹಿರೇಗೌಡ ಮಾತನಾಡಿ, ಆರೋಗ್ಯ ಇಲಾಖೆ ನೌಕರರ ಸಮಸ್ಯೆಗಳ ಬಗ್ಗೆ ಜಿಪಂ ಸಭೆಯಲ್ಲಿ ಚರ್ಚಿಸಿ ಬಗೆಹರಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಆರೋಗ್ಯ ಪ್ರತಿ ತಿಂಗಳು ವೇತನ ಪಾವತಿಗೆ ಕ್ರಮ ವಹಿಸಲಾಗುವುದು ಎಂದರು. ಜಿಪಂ ಸದಸ್ಯ ಎನ್. ಶಿವನಗೌಡ ಗೊರೇಬಾಳ ಮಾತನಾಡಿ, ನೌಕರರ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರ ಗಮನಕ್ಕೆ ತರಲಾಗುವುದು ಎಂದರು.
ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಸಂಗನಗೌಡ ಮಾಲಿಪಾಟೀಲ, ಮಲ್ಲಿಕಾರ್ಜುನ, ಹುಸೇನಪ್ಪ, ಸೈಯ್ಯದ್ ಹುಸೇನ್, ಸುರೇಶರೆಡ್ಡಿ, ಬಸಪ್ಪ, ಹನುಮಂತ ರೆಡ್ಡಿ, ಸುಧಾರಾಣಿ, ಶಶಿಕಿರಣ, ಗಾಯತ್ರಿ, ಮಂಜುಳಾ, ಶಶಿಕಲಾ ಇತರರು ಇದ್ದರು.