17ರಿಂದ ಮಂತ್ರಾಲಯದಲ್ಲಿ ರಾಘವೇಂದ್ರ ಗುರು ವೈಭವೋತ್ಸವ
Team Udayavani, Feb 15, 2018, 6:25 AM IST
ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ 397ನೇ ಪಟ್ಟಾಭಿಷೇಕ ಮಹೋತ್ಸವ, 497ನೇ ವರ್ಧಂತಿ ಉತ್ಸವ ಹಾಗೂ 108 ಶ್ರೀ ಸುಜಯೀಂದ್ರ ತೀರ್ಥ ಶ್ರೀಪಾದಂಗಳವರ ಅಷ್ಟೋತ್ತರ ಜನ್ಮ ಶತಮಾನೋತ್ಸವ, ಪೀಠಾರೋಹಣ ಸುವರ್ಣ ಮಹೋತ್ಸವ ಮತ್ತು ಬೃಂದಾವನ ಪ್ರವೇಶದ ರಜತ ಮಹೋತ್ಸವ ಕಾರ್ಯಕ್ರಮಗಳು ಫೆ.17ರಿಂದ 22ರವರೆಗೆ ಆರು ದಿನಗಳ ಕಾಲ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಯೋಗಿಂದ್ರ ಮಂಟಪದಲ್ಲಿ ನಡೆಯಲಿವೆ.
ಮಠದ ಪೀಠಾಧಿ ಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿವೆ. ಫೆ.17ರಂದು ರಾಘವೇಂದ್ರ ಪಟ್ಟಾಭಿಷೇಕ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಂಜೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಾಜ್ ನ್ಯೂಸ್ ವಾಹಿನಿಯ ಮುಖ್ಯ ಸಂಪಾದಕ ಹಮೀದ್ ಪಾಳ್ಯ, ಬೆಂಗಳೂರಿನ ಡಾ.ತೇಜಸ್ವಿನಿ ಅನಂತಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮುಖ್ಯ ಅತಿಥಿಯಾಗಿ ಕೇಂದ್ರ ಸಚಿವ ಅನಂತಕುಮಾರ್, ಕೇಂದ್ರ ಸಾರಿಗೆ ಹಾಗೂ ನದಿ ಅಭಿವೃದ್ಧಿ ಖಾತೆ ಸಚಿವ ನಿತಿನ್ ಗಡ್ಕರಿ, ಸಂಸದ ಪ್ರಹ್ಲಾದ ಜೋಶಿ ಆಗಮಿಸಲಿದ್ದಾರೆ.