ಕೋವಿಡ್ ಮುಕ್ತ ಸಮಾಜಕ್ಕೆ ಸಹಕಾರ ಅಗತ್ಯ
Team Udayavani, May 21, 2020, 12:15 PM IST
ರಾಯಚೂರು: ಮಾನವನಿಗೆ ಆರೋಗ್ಯಕ್ಕಿಂತ ಮತ್ತೂಂದು ಭಾಗ್ಯವಿಲ್ಲ. ಆರೋಗ್ಯವಂತ ಪ್ರಜೆ ದೇಶದ ಅತ್ಯಮೂಲ್ಯ ಆಸ್ತಿ. ಈ ದಿಸೆಯಲ್ಲಿ ಕೊರೊನಾ ಮುಕ್ತ ಸಮಾಜ ರೂಪಿಸುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಸರೋಜಾ ತಿಳಿಸಿದರು.
ತಾಲೂಕಿನ ಬಿಜನಗೇರಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕ್ವಾರೆಂಟೈನ್ನಲ್ಲಿನ ಜನರಿಗೆ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು. ಕೋವಿಡ್ ವೈರಸ್ ಬಂದಿರುವ ವೇಳೆ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ವಯಸ್ಸಾದವರು, ಮಕ್ಕಳು ಮತ್ತು ಗರ್ಭಿಣಿಯರು ಮನೆಯಿಂದ ಹೊರಗೆ ಬರಬಾರದು. ಮನೆ ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ವೈಯಕ್ತಿಕ ಸ್ಪಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ಲಕ್ಷ್ಮೀ ಮಾತನಾಡಿ, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಸಾಬೂನಿನಿಂದ ಕೈ ತೊಳೆಯುವುದು ಕಡ್ಡಾಯ. ಕಂಡಲ್ಲಿ ಕಂಡಲ್ಲಿ ಉಗುಳಬಾರದು. ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ಈ ಕ್ರಮಗಳನ್ನು ಅಳವಡಿಸಿಕೊಂಡಲ್ಲಿ ಕೋವಿಡ್ ನಿಂದ ದೂರ ಇರಬಹುದು ಎಂದು ತಿಳಿಸಿದರು. ಶಾಲೆಯ ಬೋಧಕ ವೃಂದ, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರರಿದ್ದರು.