ತಿದ್ದುಪಡಿ ಕಾಯ್ದೆ ಹಿಂಪಡೆಗೆ ಆಗ್ರಹ
Team Udayavani, Jun 18, 2020, 11:56 AM IST
ರಾಯಚೂರು: ಕರ್ನಾಟಕ ಜಾಗೃತ ರೈತ ಸಂಘದ ಸದಸ್ಯರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಯಚೂರು: ಸಣ್ಣ ರೈತರಿಗೆ ಶಾಪವಾಗಿ ಪರಿಣಮಿಸಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ಜಾಗೃತ ರೈತ ಸಂಘದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.
ಈ ಕುರಿತು ಡಿಸಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದ ಸದಸ್ಯರು, ಇದೊಂದು ಅಪಾಯಕಾರಿ ನಡೆಯಾಗಿದೆ. ಬಡ ರೈತರನ್ನು ಸಂಕಷ್ಟಕ್ಕೀಡು ಮಾಡುವ ಮಸೂದೆಯಾಗಿದೆ. ಇದರಿಂದ ಬಂಡವಾಳ ಶಾಹಿಗಳಿಗೆ ರತ್ನಗಳಂಬಳಿ ಹಾಸಿದಂತಾಗಲಿದೆ. ಬೇಕಾಬಿಟ್ಟಿ ಭೂಮಿ ಖರೀದಿಗೆ ಅವಕಾಶ ಮಾಡಿಕೊಟ್ಟಂತಾಗಲಿದೆ. ಕಾಯ್ದೆ ಜಾರಿಯಾಗಿ 45 ವರ್ಷ ಕಳೆದರೂ ಪರಿಪೂರ್ಣವಾಗಿ ಜಾರಿಯಾಗಿರಲಿಲ್ಲ. ಸಣ್ಣ ಮತ್ತು ಅತಿ ಸಣ್ಣ ರೈತರು ಹೊರತು ಪಡಿಸಿ ಹಲವಾರು ಜನಾಂಗದವರು ಭೂಮಿ ಹಕ್ಕಿನಿಂದ ವಂಚಿತರಾಗಿದ್ದಾರೆ. ಉಳ್ಳವರು ಹಣದಾಸೆ ತೋರಿಸಿ ಭೂಮಿ ಖರೀದಿಸಿ ಕೈಗಾರಿಕೆ ಸ್ಥಾಪಿಸಿದರೆ ಕೃಷಿಗೂ ಅಪಾಯ ತಪ್ಪಿದ್ದಲ್ಲ. ಆಹಾರ ಭದ್ರತೆ ಬಿಕ್ಕಟಿನೊಂದಿಗೆ ಕೃಷಿ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ರೈತರ ಆರ್ಥಿಕ ಮತ್ತು ಸಾಮಾಜಿಕ ಅಸಹಾಯಕತೆಯನ್ನು ಬಂಡವಾಳವನ್ನಾಗಿ ಮಾಡಿಕೊಳ್ಳುವ ಹುನ್ನಾರ ಮಾಡಲಾಗಿದೆ ಎಂದು ದೂರಿದರು.
ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಸರ್ಕಾರ ಮುಂದಾಗಬೇಕು. ಭೂ ಸುಧಾರಣೆ ಕಾಯ್ದೆ ನೀತಿ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಅಬ್ರಾಹಂ ಪನ್ನೂರು, ಬಿ.ಬಸವಲಿಂಗಪ್ಪ , ಜಯಪ್ರಕಾಶ ಗೌಡ, ಶ್ರೀನಿವಾಸ ಕೊಪ್ಪರ ಇದ್ದರು.