ಕರ್ನಾಟಕ ಬಂದ್ ಬೆಂಬಲಿಸಲು ಮನವಿ
Team Udayavani, Sep 27, 2020, 4:26 PM IST
ರಾಯಚೂರು: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಖಾಸಗೀಕರಣ ಹಾಗೂ ಅಗತ್ಯ ವಸ್ತುಗಳ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಖಂಡಿಸಿ ಅಖೀಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಸೆ.28ರಂದು ಕರ್ನಾಟಕ ಬಂದ್ಗೆ ಕರೆ ನೀಡಿದ್ದು ಜಿಲ್ಲೆಯಲ್ಲೂ ಎಲ್ಲ ಸಂಘಟನೆಗಳು ಬೆಂಬಲಿಸಬೇಕು ಎಂದು ತುಂಗಭದ್ರಾ ಎಡದಂಡೆ ಕಾಲುವೆ ಹಿತರಕ್ಷಣಾ ಸಮಿತಿ ಸಂಚಾಲಕ ರಾಘವೇಂದ್ರ ಕುಷ್ಟಗಿ ವಿನಂತಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡವರು, ಕಾರ್ಮಿಕರು, ರೈತರ ಪರ ಆಡಳಿತ ನಡೆಸದೆ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಪೋರೇಟ್ ಕಂಪನಿಗಳ ಪರವಾಗಿ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ರೈತ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಯ್ದೆಗಳ ತಿದ್ದುಪಡಿಯನ್ನು ಕೂಡಲೇ ಹಿಂಪಡೆಯಬೇಕು. ಸರ್ಕಾರದ ನಿಯಂತ್ರಿತ ಕೃಷಿ ಮಾರುಕಟ್ಟೆ, ಚಿಲ್ಲರೆ ವ್ಯಾಪಾರ ರಕ್ಷಿಸುವ ಉದ್ದೇಶವೇ ಈ ಕರ್ನಾಟಕ ಬಂದ್ ಹೋರಾಟವಾಗಿದೆ. ಜಿಲ್ಲಾದ್ಯಂತ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿ ಬೆಂಬಲ ಸೂಚಿಸಬೇಕು. ಅಂದು ಬೆಳಗ್ಗೆ 6 ಗಂಟೆಯಿಂದ ಬೈಕ್ ಹಾಗೂ ಆಟೋ ರ್ಯಾಲಿ ನಡೆಸಲಾಗವುದು. ನಂತರ ನಗರದ ಅಂಬೇಡ್ಕರ್ ವೃತ್ತದಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಧರಣಿ ನಡೆಸಲಾಗುವುದು ಎಂದು ವಿವರಿಸಿದರು. ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ಜನಸಂಗ್ರಾಮ ಪರಿಷತ್ ಕಾರ್ಯದರ್ಶಿ ಖಾಜಾ ಅಸ್ಲಾಂ ಅಹ್ಮದ್, ಕೆಪಿಆರ್ಎಸ್ನ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ಡಿ.ಎಸ್. ಶರಣಬಸವ ಸೇರಿ ಇತರರು ಇದ್ದರು.