ರಾಜ್ಯ ಸರ್ಕಾರದ ವಿರುದ್ದ ಎಸ್ಡಿಪಿಐ ಪ್ರತಿಭಟನೆ
Team Udayavani, Apr 4, 2022, 2:54 PM IST
ರಾಯಚೂರು: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದು, ಜನರಲ್ಲಿ ದ್ವೇಷ ಭಾವನೆ ಹುಟ್ಟು ಹಾಕುತ್ತಿದೆ ಎಂದು ಆರೋಪಿಸಿ ಎಸ್ ಡಿಪಿಐ ಸಂಘಟನೆ ಸದಸ್ಯರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಭಾರತ ಬಹುಸಂಸ್ಕೃತಿಯುಳ್ಳ, ವೈವಿಧ್ಯತೆಯ ದೇಶವಾಗಿದೆ. ಇಲ್ಲಿ ಎಲ್ಲರೂ ಸೌಹಾರ್ದ, ಭಾವೈಕ್ಯತೆಯಿಂದ ಬಾಳುತ್ತಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರೂ ಸಹೋದರ ಭಾವದಿಂದ ಅನ್ಯೋನತೆಯಿಂದ ಜೀವಿಸುತ್ತಿದ್ದಾರೆ. ಬಸವಣ್ಣ, ಸಂತ ಶಿಶುನಾಳ ಶರೀಫ, ಟಿಪ್ಪು ಸುಲ್ತಾನ್, ಸೂಫಿ ಸಂತರು ಸಾಮರಸ್ಯದ ಸಂದೇಶ ಸಾರಿದ್ದು, ಉತ್ತಮ ಸಮಾಜಕ್ಕೆ ದಾರಿ ದೀಪವಾಗಿದೆ. ಆದರೆ, ಸರ್ಕಾರವೇ ಕೋಮು ವಿಚಾರಗಳಿಗೆ ಪುಷ್ಟಿ ನೀಡಿ ಜನರಲ್ಲಿ ಧಾರ್ಮಿಕ ಸಂಘರ್ಷ ಮೂಡುವಂತೆ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಹಿಜಾಬ್ ವಿವಾದ, ಹಲಾಲ್ ಮಾಂಸ ನಿಷೇಧ, ಮುಸ್ಲಿಂ ವ್ಯಾಪಾರಿಗಳಿಗೆ ಜಾತ್ರೆಗಳಲ್ಲಿ ನಿರ್ಬಂಧ ಸೇರಿ ಇತರೆ ವಿವಾದಗಳಿಂದ ಸಾಮರಸ್ಯ ಹಾಳು ಮಾಡಲಾಗುತ್ತಿದೆ. ಮುಸ್ಲಿಂರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಆರ್ಎಸ್ಎಸ್ ಮುಖಂಡರು ಮುಸ್ಲಿಮರ ಅಂಗಡಿಗಳಿಗೆ ದಾಳಿ ಮಾಡಿ ವ್ಯಾಪಾರಸ್ಥರ ಮೇಲೆ ಹಲಾಲ್ ಹೆಸರಿನಲ್ಲಿ ಹಲ್ಲೆ ಮಾಡುತ್ತಿದ್ದಾರೆ. ಬಿಜೆಪಿಯ ಶಾಸಕರು, ಸಂಸದರು, ಸಚಿವರು ಕೂಡ ಇದಕ್ಕೆ ಪುಷ್ಟಿ ನೀಡುವಂತೆ ಹೇಳಿಕೆಗಳನ್ನು ನೀಡಿ ಪ್ರಚೋದನೆ ನೀಡುತ್ತಿರುವುದು ಖಂಡನೀಯ ಎಂದರು.
ಜಿಲ್ಲಾಧ್ಯಕ್ಷ ತೌಸೀಫ್ ಅಹ್ಮದ್, ಸೈಯದ್ ಇಸಾಕ್, ಉಪಾಧ್ಯಕ್ಷ ಮತೀನ್ ಅನ್ಸಾರಿ, ಜಿಲಾನಿ ಪಾಷಾ, ಬಷೀರ್ ಅಹ್ಮದ್, ಪಾಷಾ ಮುದಗಲ್ ಸೇರಿ ಇತರರಿದ್ದರು.