ಹಿಂದು ವ್ಯಕ್ತಿ ಕಗ್ಗೊಲೆಗೆ ಖಂಡನೆ
Team Udayavani, Jul 3, 2022, 11:45 AM IST
ರಾಯಚೂರು: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್ನನ್ನು ಧರ್ಮಾಂಧರು ಭೀಕರವಾಗಿ ಕೊಲೆಗೈದಿರುವುದನ್ನು ಖಂಡಿಸಿ ಶನಿವಾರ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟಿಸಿದರು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ, ವಿಡಿಯೋ ತುಣುಕಿನಲ್ಲಿ ಕೃತ್ಯವನ್ನು ವೈಭವಿಕರಿಸಿದ್ದಲ್ಲದೇ ದೇಶದ ಪ್ರಧಾನಮಂತ್ರಿಗಳಿಗೂ ಜೀವ ಬೆದರಿಕೆಯೊಡ್ಡಿರುವ ದುಷ್ಕರ್ಮಿಗಳ ಕೃತ್ಯ ಖಂಡನೀಯ. ಈ ಘಟನೆ ಹಿಂದಿರುವ ದೇಶದ್ರೋಹಿ ಸಂಘಟನೆಗಳಾದ ಐಎಸ್ಐಎಸ್ ಮತ್ತು ಪಿಎಫ್ಐ ಭಾಗಿಯಾಗಿರುವುದು ಎನ್ಐಎ ತನಿಖಾ ಸಂಸ್ಥೆಯು ದೃಢಪಡಿಸಿದೆ.
ದೇಶದಲ್ಲಿ ಈಗಾಗಲೇ ಹಲವು ದೇಶದ್ರೋಹಿ ಕೃತ್ಯಗಳನ್ನು ನಿರಂತರ ನಡೆಸುತ್ತಲೇ ಬಂದಿವೆ ಎಂದು ದೂರಿದರು. ರಾಜ್ಯದಲ್ಲಿಯೂ ಈ ಎರಡು ಸಂಘಟನೆಗಳು ಕೊಲೆ, ದೊಂಬಿ ಹಾಗೂ ದೇಶ ವಿರೋಧಿ ಚಟುವಟಿಕೆಗಳ ಮೂಲಕ ಅರಾಜಕತೆ ಸೃಷ್ಟಿಸುವ ಮೂಲಕ ಸಮಾಜದಲ್ಲಿ ಭಯೋತ್ಪಾದನೆ ಸೃಷ್ಟಿಸುತ್ತಿವೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂಥ ಕೃತ್ಯಗಳ ಹಿಂದಿರುವ ಎಲ್ಲ ಮತಾಂಧ ಸಂಘಟನೆಗಳು ಹಾಗೂ ಅವುಗಳನ್ನು ಪೋಷಿಸುತ್ತಿರುವ ಕಾಣದ ಕೈಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಎಸ್ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಹಿರಿಯ ಮುಖಂಡರಾದ ಬಾಳಪ್ಪ, ಸಂಘಟನೆಯ ಸಹ ಸಂಯೋಜಕ ದೇವರಾಜ, ನಿರಂಜನಮೂರ್ತಿ, ಹರೀಶ, ಪ್ರೀತಮ್ ಕುಮಾರ, ವಿಷ್ಣು ಕಲ್ಯಾಣಧಿಕಾರಿ ಸೇರಿ ಇತರರು ಪ್ರತಿಭಟನೆಯಲ್ಲಿದ್ದರು.