ಗ್ರಾಮ ಲೆಕ್ಕಿಗನ ಹತ್ಯೆ: ಟಿಪ್ಪರ್ ಚಾಲಕನ ಬಂಧನ
Team Udayavani, Dec 24, 2018, 7:40 AM IST
ರಾಯಚೂರು: ಮಾನ್ವಿ ತಾಲೂಕಿನ ಚೀಕಲಪರ್ವಿ ಕ್ರಾಸ್ ಬಳಿ ಶನಿವಾರ ಸಂಜೆ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಮೇಲೆ ಅಕ್ರಮ ಮರಳು ದಂಧೆಕೋರರು ಟಿಪ್ಪರ್ ಹರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಪ್ಪರ್ ಚಾಲಕ ರಂಗಪ್ಪನನ್ನು ರವಿವಾರ ಮಾನ್ವಿ ಪೊಲೀಸರು ಬಂಧಿಸಿದ್ದಾರೆ. ರಂಗಪ್ಪ ವಿರುದ್ಧ ಸೆಕ್ಷನ್ 302ರಡಿ ಪ್ರಕರಣ ದಾಖಲಿಸಲಾಗಿದೆ. ಎಸ್ಪಿ ಡಿ. ಕಿಶೋರ್ ಬಾಬು ಅವರು ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದ್ದು, ಚಾಲಕ ರಂಗಪ್ಪನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಲಾರಿ ಮಾಲಕರ ವಿರುದ್ಧವಾಗಲಿ, ಅಕ್ರಮ ಮರಳು ದಂಧೆಕೋರರ ಹೆಸರನ್ನಾಗಲಿ ಪೊಲೀಸರು ಬಹಿರಂಗಪಡಿಸಿಲ್ಲ.
ಇದೇ ವೇಳೆ ಘಟನೆ ಖಂಡಿಸಿ ಮಾನ್ವಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಹೋರಾಟಗಾರರು ಬೀದಿಗಿಳಿದು ಹೋರಾಟ ನಡೆಸಿದರು. ಜಿಲ್ಲೆಯಲ್ಲಿ ಎಗ್ಗಿಲ್ಲದೇ ಮರಳು ದಂಧೆ ನಡೆಯುತ್ತಿದೆ. ಇದರ ಹಿಂದೆ ಕೆಲ ಪ್ರಭಾವೀ ರಾಜಕಾರಣಿಗಳು ಮತ್ತು ಮುಖಂಡರಿದ್ದು ಕೂಡಲೇ ಅವರ ವಿರುದ್ಧವೂ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದರು. ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಸಾಮೂಹಿಕ ರಜೆ
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹನುಮೇಶ್ ಅವರು ಡಿ.24ರಂದು ಸಂಘದ ಎಲ್ಲ ಸದಸ್ಯರು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ಮೃತ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಮೂಲತಃ ಲಿಂಗಸುಗೂರು ತಾಲೂಕಿನ ಚಿತ್ತಾಪುರ ಗ್ರಾಮದವರು. ರವಿವಾರ ತಡರಾತ್ರಿ ಮೃತದೇಹವನ್ನು ಗ್ರಾಮಕ್ಕೆ ತಂದಾಗ ಗ್ರಾಮಸ್ಥರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಯಿತು. ಗ್ರಾಮಸ್ಥರೆಲ್ಲ ಸಹಿ ಸಂಗ್ರಹ ಮಾಡಿ ರವಿವಾರ ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿದ ಅ ಧಿಕಾರಿಗಳಿಗೆ ಮನವಿ ನೀಡಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.
ಚಾಲಕನನ್ನು ವಶಕ್ಕೆ ಪಡೆದಿದ್ದು, ಸೆಕ್ಷನ್ 302ರಡಿ ಪ್ರಕರಣ ದಾಖಲಿಸಲಾಗಿದೆ. ಈಗಷ್ಟೇ ತನಿಖೆ ಶುರು ಮಾಡಿದ್ದು ಯಾವುದೇ ಮಾಹಿತಿ ಬಹಿರಂಗಪಡಿಸಲು ಆಗುವುದಿಲ್ಲ. ವಾಹನ ಮಾಲಕರ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲ. ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ಬಗ್ಗೆ ಸಾಕಷ್ಟು ಕಟ್ಟೆಚ್ಚರ ವಹಿಸಲಾಗಿದೆ.
– ಡಿ. ಕಿಶೋರ್ ಬಾಬು, ಎಸ್ಪಿ