ಬಾಪೂರಿಗೆ ಕುಡಿವ ನೀರು ಪೂರೈಕೆಗೆ ಆಗ್ರಹ
Team Udayavani, Mar 3, 2020, 2:13 PM IST
ರಾಯಚೂರು: ತಾಲೂಕಿನ ಬಾಪೂರು ಗ್ರಾಮಸ್ಥರಿಗೆ ಕುಡಿವ ನೀರಿನ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಕುರಿತು ಜಿಪಂ ಸಿಇಒಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ತಾಲೂಕಿನ ಸಿಂಗನೋಡಿ ಗ್ರಾಪಂ ವ್ಯಾಪ್ತಿಯ ಬಾಪೂರು ಗ್ರಾಮಕ್ಕೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುತ್ತದೆ. ಎರಡು ಸಾವಿರಕ್ಕೂ ಅ ಧಿಕ ಜನ ಗ್ರಾಮದಲ್ಲಿದ್ದಾರೆ. ಗ್ರಾಮದಲ್ಲಿ ಕುಡಿವ ನೀರಿಗೆ ಸಾಕಷ್ಟು ಸಮಸ್ಯೆ ಇದೆ. ಗ್ರಾಮದಲ್ಲಿ ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ. ಕುಡಿವ ನೀರಿಗಾಗಿ ರಾತ್ರಿ ಇಡಿ ನೀರಿಗಾಗಿ ಕಾಯ್ದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೀರಿನ ಸಮಸ್ಯೆ ನಿವಾರಣೆಗೆ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಪಂ ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ ಆದರೂ ಸ್ಪಂದಿಸಿಲ್ಲ. ವಾರದೊಳಗಾಗಿ ಗ್ರಾಮಕ್ಕೆ ಭೇಟಿ ನೀಡಿ ಕುಡಿವ ನೀರಿನ ಸಮಸ್ಯೆ ಬಗ್ಗೆ ಪರಿಶೀಲಿಸಬೇಕು. ಈ ಬಗ್ಗೆ ನಿರ್ಲಕ್ಷಿಸಿದರೆ ರಸ್ತೆ ಸಂಚಾರ ತಡೆದು ಪ್ರತಿಭಟಿಸುವುದಾಗಿ ಎಚ್ಚರಿಸಿದರು. ಸಂಘದ ಜಿಲ್ಲಾಧ್ಯಕ್ಷ ವಾಸುದೇವ ಮೇಟಿ, ಸದಸ್ಯರಾದ ಶಿವಪ್ಪ ಆಲ್ಕೂರು, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಬಾನು ಬಿ., ರಾಮಬಾಬು, ಶಂಕರ ಬೇಲಿಮಂಚಿ ಸೇರಿ ಇತರರಿದ್ದರು.
ಬೇಗ ಬಾರದ ಸಿಇಒ: ಕಚೇರಿ ಎದುರು ರೈತ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಹೋರಾಟ ಮಾಡುತ್ತಿದ್ದರೂ ಕಚೇರಿಯಲ್ಲಿಯೇ ಇದ್ದ ಜಿಪಂ ಸಿಇಒ ಲಕ್ಷ್ಮೀಕಾಂತರೆಡ್ಡಿ ಮನವಿ ಸ್ವೀಕರಿಸಲು ಬೇಗನೆ ಬರಲಿಲ್ಲ. ರೈತರನ್ನು ಸಾಕಷ್ಟು ಸಮಯ ಕಾಯಿಸಿದ ಕಾರಣ ರೈತರು ಬೇಸರ ವ್ಯಕ್ತಪಡಿಸಿದರು.