ಬೆಳೆ ಹಾನಿ ಪರಿಹಾರಕ್ಕೆ ಒತ್ತಾಯ
Team Udayavani, Nov 4, 2020, 5:03 PM IST
ರಾಯಚೂರು: ಸತತವಾಗಿ ಸುರಿದ ಮಳೆಯಿಂದ ತಾಲೂಕಿನ ಮೀರಾಪುರ ಗ್ರಾಮ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಮನೆಗಳು ಜಖಂಗೊಂಡಿವೆ. ಸರ್ಕಾರ ಕೂಡಲೇ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್ಕೆಎಸ್) ನೇತೃತ್ವದಲ್ಲಿ ಗ್ರಾಮಸ್ಥರು ಮಂಗಳವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದರು.
ಈ ಕುರಿತು ತಹಶೀಲ್ದಾರ್ಗೆ ಮನವಿ ಸಲ್ಲಿಸಿ, ಮಳೆಯಿಂದ ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆ ಸಂಪೂರ್ಣ ಹಾನಿಗೀಡಾಗಿದೆ. ಬಿತ್ತನೆ ಹಾಗೂ ಗೊಬ್ಬರಕ್ಕೆ ಮಾಡಿದ ಖರ್ಚು ಕೂಡ ಸಿಕ್ಕಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆ ಕುಸಿತದಿಂದ ಇರಲು ಮನೆ ಇಲ್ಲದ ಸ್ಥಿತಿ ಇದೆ. ಹೀಗಾಗಿ ಸಂತ್ರಸ್ತರಿಗೆ ಕೂಡಲೇ ತಾತ್ಕಾಲಿಕ ಪರಿಹಾರ ಹಣ ವಿತರಿಸಬೇಕು. ಮನೆ ಕುಸಿತ ಹಾಗೂ ಬೆಳೆನಷ್ಟ ಅಂದಾಜು ಮಾಡಿ ನಷ್ಟಕ್ಕೆ ತಕ್ಕಂತೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸಂಪೂರ್ಣ ಕುಸಿದ ಮನೆಗಳಿಗೆ ವಿವಿಧ ವಸತಿ ಯೋಜನೆಯಡಿ ಮನೆ ನಿರ್ಮಿಸಬೇಕು. ಗ್ರಾಮದ ಸಮೀಪದ ತಗ್ಗು ಪ್ರದೇಶದಲ್ಲಿ ನೀರು ತುಂಬಿ ಮನೆಗಳಿಗೆ ನುಗ್ಗದಂತೆ ಬೇರೆಡೆ ಹರಿಯಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಎಸ್ಯುಸಿಐ ಜಿಲ್ಲಾ ಸಮಿತಿಸದಸ್ಯ ಚನ್ನಬಸವ ಜಾನೇಕಲ್, ಆರ್ಕೆಎಸ್ ಜಿಲ್ಲಾ ಸಂಘಟನಾ ಪ್ರಮೋದ ಕುಮಾರ ಜಿ., ಮೌನೇಶ, ಅಶೋಕ, ರೈತರಾದ ಮಹಾದೇವ, ರತ್ನಮ್ಮ, ನಾಗಮ್ಮ, ಚನ್ನಮ್ಮ ಇತರರು ಇದ್ದರು.
ಬೇಡಿಕೆ ಈಡೇರಿಕೆಗೆ ಪ್ರತಿಭಟನೆ :
ಮಾನ್ವಿ: ಪಟ್ಟಣದಲ್ಲಿ ನಿರ್ಮಾಣವಾಗಿರುವ ತಾಯಿ ಮಕ್ಕಳ ಆಸ್ಪತ್ರೆ ಪ್ರಾರಂಭಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಮಂಗಳವಾರ ಜನಶಕ್ತಿ ಕೇಂದ್ರ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ತಹಶೀಲ್ದಾರರು ಕ್ರಮ ಜರುಗಿಸುವ ಭರವಸೆ ನೀಡಿದ ಬಳಿಕ ಹಿಂಪಡೆದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ತಹಶೀಲ್ದಾರ್ ಶಂಶಾಲಂ ಮಾತನಾಡಿ, ಬೇಡಿಕೆಗಳಿಗೆ ಅನುಗುಣವಾಗಿ ಆಯಾ ಇಲಾಖೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆಯುವೆ. ಸಾರ್ವಜನಿಕ ಆಸ್ಪತ್ರೆ ರಸ್ತೆ ದುರಸ್ತಿ ಬಗ್ಗೆ ಪಿಡಬ್ಲೂಡಿ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ನಂತರ ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತೇದಾರರ ವಿರುದ್ಧ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ತಿಳಿಸುತ್ತೇನೆ ಎಂದರು.
ಪಟ್ಟಣದಲ್ಲಿ ನಿರ್ಮಾಣವಾಗಿರುವ ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆ, ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ, ಸಾರ್ವಜನಿಕ ಆಸ್ಪತ್ರೆ ರಸ್ತೆ ದುರಸ್ತಿ ಹಾಗೂ ಕೆಕೆಆರ್ಡಿಬಿ ಅನುದಾನ ದುರ್ಬಳಕೆ ತನಿಖೆ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಅ.25ರಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗುವತ್ತಿದೆ. ಅಲ್ಲದೆ ಮಂಗಳವಾರ ಲೋಕೋಪಯೋಗಿ ಇಲಾಖೆ ಎದುರು ಉಪವಾಸ ಸತ್ಯಾಗ್ರಹ, ರಸ್ತೆ ತಡೆ, ತಾಯಿ ಮಕ್ಕಳ ಆಸ್ಪತ್ರೆಯಿಂದ ಕೆಳಗೆ ಬೀಳುವ ಚಳವಳಿ ನಡೆಸುವುದಾಗಿ ಪ್ರತಿಭಟನಾಕಾರರು ತಿಳಿಸಿದರು.
ಈ ವೇಳೆ ರಾಜ್ಯಾಧ್ಯಕ್ಷ ಪ್ರಭುರಾಜ್ಕೊಡ್ಲಿ, ಅಬ್ರಾಹಿಂ ಪನ್ನೂರು, ಶಂಕರ ಜಗ್ಲಿ, ರಾಮು ದೊಡ್ಡಿ, ಶಿವರಾಜ ದೊಡ್ಡಿ, ಜಯರಾಜ ಕೊಡ್ಲಿ, ಮೈನುದ್ದೀನ್, ಶ್ರೀನಿವಾಸ ಕೋನಾಪುರಪೇಟೆ, ಹುಸೇನಪ್ಪ ಪನ್ನೂರು, ಲಕ್ಷ್ಮಣ ಜಾಲವಾಡಿಗಿ, ಪಿಎಸ್ಐ ಸಿದ್ರಾಮಪ್ಪ ಇದ್ದರು.