ಯುವಜನತೆ ದೇಶಿ ಸಂಸ್ಕೃತಿ ಅನುಸರಿಸಲಿ
Team Udayavani, Aug 22, 2017, 4:45 PM IST
ಸಿಂಧನೂರು: ಆಧುನಿಕ ಜಗತ್ತಿನಲ್ಲಿ ಯುವಕರು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಯುವಕರು ಭಾರತ
ಸಂಸ್ಕೃತಿಗೆ ತಲೆಬಾಗಿ ನಡೆಯುವ ಸಂಕಲ್ಪ ಮಾಡಬೇಕು ಎಂದು ಸಾಹಿತಿ ಹಾಗೂ ಉಪನ್ಯಾಸಕ ರಮೇಶಬಾಬು
ಯಾಳಗಿ ಕರೆ ನೀಡಿದರು.ನಗರದ ಖಾಸಗಿ ಹೋಟೆಲ್ವೊಂದರ ಸಭಾಂಗಣದಲ್ಲಿ ನ್ಯಾಷನಲ್ ಕಾಲೇಜಿನಿಂದ ಹಮ್ಮಿಕೊಂಡಿದ್ದ ಪಿಯುಸಿ, ಬಿಎ ಮತ್ತು ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಏಕಾಗ್ರತೆ, ಸಮಯಪಾಲನೆ ಮಾಡಬೇಕು. ತಂದೆ-ತಾಯಿಯನ್ನು ಗೌರವಿಸಬೇಕು. ಬಡ ವಿದ್ಯಾರ್ಥಿಗಳು ಸ್ವಾಭಿಮಾನ ಬಿಡದೇ ಸ್ಪರ್ಧಾತ್ಮಕವಾಗಿ ಮುನ್ನುಗ್ಗಬೇಕು. ಯುವಕರು ನಿಸ್ವಾರ್ಥ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ಹೈದ್ರಾಬಾದ್ ಕರ್ನಾಟಕ ಇಂದು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಹೆಜ್ಜೆಗಳನ್ನು ಇಡುತ್ತಿರುವುದು ಸಂತೋಷದ ವಿಷಯ. ವಿದ್ಯಾರ್ಥಿಗಳು 371 ಜೆ ಕಲಂನ ಸದುಪಯೋಗ ಪಡೆದು ಉಜ್ಜಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ವಿಸಿಬಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಸತೀಶ ಎನ್.ಆಯುರ್ವೇದ ಮೆಡಿಕಲ್ ಕಾಲೇಜ್ ಆಡಳಿತಾಧಿಕಾರಿ ಉಮಾಶಂಕರ ಎಚ್.ಎಂ. ಮಾತನಾಡಿದರು. ವಿಸಿಬಿ
ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಪಂಪಾಪತಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿಸಿಬಿ ಶಿಕ್ಷಣ ಸಂಸ್ಥೆಯ ಸಲಹಾ ಮಂಡಳಿ ಸದಸ್ಯ ಚಂದ್ರಶೇಖರ ಪಾಟೀಲ, ಖಜಾಂಚಿ ಅಮರೇಶ ಪಾಟೀಲ, ಪ್ರಾಚಾರ್ಯ ಶರಣಪ್ಪ ಜಾಲಿಹಾಳ ಇದ್ದರು.