ಎಸ್ಪಿ ನೇತೃತ್ವದಲ್ಲಿ ಪುರಾತನ ಬಾವಿ ಸ್ವಚ್ಛತೆ
ವಿವಿಧ ಸಂಘ-ಸಂಸ್ಥೆಗಳು-ನಗರಸಭೆ ನೆರವಿನೊಂದಿಗೆ ಆಂದೋಲನ
Team Udayavani, Sep 16, 2019, 5:30 PM IST
ರಾಯಚೂರು: ವಾಸವಿ ನಗರದ ತೋಟದ ಬಾವಿಯನ್ನು ಎಸ್ಪಿ ಡಾ| ಸಿ.ಬಿ.ವೇದಮೂರ್ತಿ ನೇತೃತ್ವದಲ್ಲಿ ರವಿವಾರ ಸ್ವಚ್ಛಗೊಳಿಸಲಾಯಿತು.
ರಾಯಚೂರು: ಪ್ಲಾಸ್ಟಿಕ್, ಕಸ ಕಡ್ಡಿಯಿಂದ ತುಂಬಿ ಹಾಳಾಗಿ ಹೋಗಿದ್ದ ಇಲ್ಲಿನ ವಾಸವಿ ನಗರದ ಪುರಾತನ ತೋಟದ ಬಾವಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ.ವೇದಮೂರ್ತಿ ನೇತೃತ್ವದಲ್ಲಿ ರವಿವಾರ ಸ್ವಚ್ಛಗೊಳಿಸಲಾಯಿತು.
ಬೆಳ್ಳಂಬೆಳಗ್ಗೆ ಕೈಗೆ ಗ್ಲೌಸ್ಗಳನ್ನು ಹಾಕಿಕೊಂಡು ಖುದ್ದು ಎಸ್ಪಿಯೇ ಬಾವಿಗಿಳಿದ ಕಾರಣ ಇದರಿಂದ ಪ್ರೇರಿತರಾಗಿ ಅನೇಕ ಯುವಕರು ಕೂಡ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು. ಈ ಬಾವಿಯಲ್ಲಿ ಜನರು ದೇವರ ಪೂಜಾ ಸಾಮಗ್ರಿ, ಪ್ಲಾಸ್ಟಿಕ್, ಕಸ, ಘನ ತ್ಯಾಜ್ಯಗಳನ್ನು ಸುರಿದು ತುಂಬಿಸಿದ್ದರು. ಸುತ್ತಲಿನ ಪರಿಸರ ಕೂಡ ಸಂಪೂರ್ಣ ಹದಗೆಟ್ಟು ಹೋಗಿತ್ತು. ನೀರಿನ ಮೂಲವಿದ್ದರೂ ಈ ಬಾವಿ ಸಂಪೂರ್ಣ ಮುಚ್ಚಿ ಹೋಗಿತ್ತು. ಇದನ್ನು ಗಮನಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕರು ನಗರದ ಗ್ರೀನ್ ರಾಯಚೂರು ಹಾಗೂ ಇನ್ನಿತರ ಸಂಘಗಳ ಜೊತೆಗೆ ಸೇರಿ ಈ ಸ್ವಚ್ಛತಾ ಆಂದೋಲನಕ್ಕೆ ಕರೆ ನೀಡಿದ್ದರು. ಬೆಳಗ್ಗೆ ಸ್ವಚ್ಛತೆಗೆ ಮುಂದಾದ ಅಧಿಕಾರಿಗಳು ಸಾಕಷ್ಟು ತ್ಯಾಜ್ಯ ವಿಲೇವಾರಿ ಮಾಡಿದರು. 17ನೇ ವಾರ್ಡ್ ಜನರು ಸೇರಿದಂತೆ, ನಗರಸಭೆ ಅಧಿಕಾರಿಗಳು ಅಭಿಯಾನಕ್ಕೆ ಕೈ ಜೋಡಿಸಿದರು.
ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಎಸ್ಪಿ ಡಾ| ಸಿ.ಬಿ. ವೇದಮೂರ್ತಿ, ಪುರಾತನ ಬಾವಿಯನ್ನು ಸ್ವಚ್ಛಗೊಳಿಸಿದ್ದು, ಇನ್ನು ಮುಂದೆ ಯಾರು ಕೂಡ ಬಾವಿಗೆ ತ್ಯಾಜ್ಯ ಹಾಕಬಾರದು. ಅದನ್ನು ಸ್ವಚ್ಛವಾಗಿಟ್ಟಲ್ಲಿ ಆ ನೀರು ಬಳಕೆಗೆ ಉಪಯೋಗವಾಗಲಿದೆ. ಸಂಘ-ಸಂಸ್ಥೆಗಳ ಮೂಲಕ ಹಳೆಯ ಬಾವಿಗಳ ರಕ್ಷಣೆಗೆ ಮುಂದಾಗಿದ್ದು, ಅದಕ್ಕೆ ಜನರ ಸಹಭಾಗಿತ್ವ ಕೂಡ ಅಷ್ಟೇ ಮುಖ್ಯವಾಗಿದೆ ಎಂದರು.
ಬಳಿಕ ಬಾವಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಜಾಗೃತಿ ಮೂಡಿಸಲಾಯಿತು. ನಗರಸಭೆ ಅಧಿಕಾರಿ ಶರಣಪ್ಪ, ಗ್ರೀನ್ ರಾಯಚೂರು ಸಂಸ್ಥಾಪಕ ಕೊಂಡ ಕೃಷ್ಣಮೂರ್ತಿ, ಸಿ.ಬಿ.ಪಾಟೀಲ, ಸರಸ್ವತಿ, ರಾಜೇಂದ್ರ, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಯುವ ಬ್ರಿಗೇಡ್ ಸದಸ್ಯರು ಸೇರಿದಂತೆ ಬಡಾವಣೆ ಯುವಕರು ಇದ್ದರು.