ಸಂಶಯಾಸ್ಪದ ನಕಲಿ ಕೃಷಿ ಪರಿಕರ ವಶಕ್ಕೆ
ಜಾಗೃತಿ ಕೋಶದಿಂದ ಜಿಲ್ಲೆಯಲ್ಲಿ ಮೂರು ದಿನ ಪರಿಶೀಲನೆ •ಜೈವಿಕ ಮಾದರಿ ಹೆಸರಲ್ಲೂ ನಕಲಿ ಮಾರಾಟ ಪತ್ತೆ: ಅನೂಪ್
Team Udayavani, Aug 30, 2019, 3:02 PM IST
ರಾಯಚೂರು: ಕೃಷಿ ಇಲಾಖೆ ಕಚೇರಿಯಲ್ಲಿ ಬೆಂಗಳೂರಿನ ಕೃಷಿ ಇಲಾಖೆ ಜಾಗೃತ ಕೋಶದ ಅಪರ ನಿರ್ದೇಶಕ ಅನೂಪ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಯಚೂರು: ಕೃಷಿಗೆ ಬಳಸುವ ರಾಸಾಯನಿಕ, ಕ್ರಿಮಿನಾಶಕಗಳಲ್ಲಿ ನಕಲಿ ಕಂಪನಿಗಳ ಹಾವಳಿ ಕಂಡುಬಂದಿದ್ದು, ಈ ವಿಚಾರವಾಗಿ ನಡೆಸಿದ ದಾಳಿಯಲ್ಲಿ ಕಂಡುಬಂದ ಸಂಶಯಾಸ್ಪದ 10 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಬೆಂಗಳೂರಿನ ಕೃಷಿ ಇಲಾಖೆಯ ಜಾಗೃತ ಕೋಶದ ಅಪರ ನಿರ್ದೇಶಕ ಅನೂಪ್ ತಿಳಿಸಿದರು.
ನಗರದ ಕೃಷಿ ಇಲಾಖೆ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಚಟುವಟಿಕೆಗಳು ಬಿರುಸುಗೊಂಡಿದ್ದು, ಕೃಷಿ ಪರಿಕರಗಳ ಗುಣ ನಿಯಂತ್ರಣ ಪರೀಕ್ಷಿಸಲು ಕೃಷಿ ಪರಿಕರ ಮಳಿಗೆಳಿಗೆ ಹಠಾತ್ ದಾಳಿ ನಡೆಸಲಾಯಿತು. ಈ ವೇಳೆ ಅನಧಿಕೃತ ಕಂಪನಿಗಳ ಕ್ರಿಮಿನಾಶಕಗಳು ಕಂಡು ಬಂದರೆ, ಕೆಲವೊಂದು ಜೈವಿಕ ಮಾದರಿ ಹೆಸರಿನಲ್ಲಿ ಮಾರಾಟ ಮಾಡುತ್ತಿರುವ ಅಂಶ ಪತ್ತೆಯಾಗಿದೆ. ಆದರೆ, ಜೈವಿಕ ಮಾದರಿ ಹೆಸರಿನಲ್ಲೂ ನಕಲಿ ಕ್ರಿಮಿನಾಶಕ ಮಾರುವ ಸಂಶಯ ಬಂದಿದೆ. ಅಂಥ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಕೃಷಿ ಹಂಗಾಮಿನಲ್ಲಿ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಸೇರಿದಂತೆ ವಿವಿಧ ಕೃಷಿ ಪರಿಕರಗಳನ್ನು ಇಲಾಖೆಯಿಂದ ಪರವಾನಗಿ ಪಡೆದ ಉತ್ಪಾದಕರಿಂದಲೇ ಖರೀದಿಸಬೇಕು. ಪರವಾನಗಿ ಇಲ್ಲದ ಮಳಿಗೆಗಳಲ್ಲಿ ರೈತರು ಖರೀದಿಸಲೇಬಾರದು ಎಂದು ಜಾಗೃತಿ ಮೂಡಿಸಲಾಗಿದೆ ಎಂದರು.
ಸುಮಾರು 54 ರಸಗೊಬ್ಬರ ಹಾಗೂ ಪೀಡೆನಾಶಕ ಮಾರಾಟ ಮಳಿಗೆಗಳಿಗೆ ಪರಿವೀಕ್ಷಕರು ಭೇಟಿ ನೀಡಿದ್ದರು. ಪರವಾನಗಿ ಪಡೆಯದೇ ಮಾರುತ್ತಿದ್ದ 86 ಜೈವಿಕ ಪೀಡೆನಾಶಕಗಳು, ಸಸ್ಯ ಸಂವರ್ಧಕಗಳು ಪತ್ತೆಯಾಗಿದ್ದು ಒಟ್ಟು 1576.45 ಲೀಟರ್ ದಾಸ್ತಾನು ಮಾಡಿದ್ದ ವಿವಿಧ ಕೃಷಿ ಪರಿಕರಗಳ ಮಾರಾಟಕ್ಕೆ ತಡೆಯಾಜ್ಞೆ ನೀಡಲಾಗಿದೆ ಎಂದು ತಿಳಿಸಿದರು.
ವಿವಿಧ ಕೃಷಿ ಪರಿಕರಗಳ ಉತ್ಪಾದಕ ಸಂಸ್ಥೆಯ ಪ್ರತಿನಿಧಿಗಳ ಪರವಾನಗಿ ಪಡೆದಿರುವ ಕುರಿತು ಖಾತರಿಪಡಿಸಿಕೊಂಡು ನಂತರ ಪರಿಕರಗಳನ್ನು ಸರಬರಾಜು ಮಾಡಬೇಕಿದೆ. ರೈತರು ಕೂಡ ಯಾವುದೇ ಕೃಷಿ ಪರಿಕರ ಖರೀದಿಸುವಾಗ ಜಾಗೃತರಾಗಿರಬೇಕು. ಪರವಾನಗಿ ಹೊಂದಿದವರ ಬಳಿ ಮಾತ್ರ ಖರೀದಿಸಬೇಕು. ಹಣ ಪಾವತಿಸಿದ ರಶೀದಿ ಪಡೆದು ತೆಗೆದಿಡಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ| ಚೇತನಾ ಪಾಟೀಲ ಮಾತನಾಡಿ, ಬಿಟಿ ಹತ್ತಿಗೆ ಕಾಯಿಕೊರಕ ರೋಗ ಬರುವ ಕಾರಣ ರೈತರು ಅದರ ಜತೆಗೆ ಬಲೆ ಬೆಳೆ ಕೂಡ ಬೆಳೆಯಬೇಕು ಎಂದು ತಿಳಿಸಲಾಗಿದೆ. ಆದರೆ, ಸಾಕಷ್ಟು ರೈತರು ಅದನ್ನು ಬೆಳೆಯದ ಕಾರಣ ರೋಗ ಮತ್ತೆ ಹರಡುತ್ತದೆ. 90 ದಿನ ಆದ ಕೂಡಲೇ ಬಿಟಿ ಹತ್ತಿಯಲ್ಲಿರುವ ಶಕ್ತಿ ಕುಗ್ಗಲಿದೆ. ಇದರಿಂದ ಕಾಯಿಲೆ ಸುಲಭವಾಗಿ ಹರಡಲಿದೆ. ಅದಲ್ಲದೇ, ಗುಲಾಬಿ ಕಾಯಿಕೊರಕ ರೋಗ ಭೂಮಿಯಲ್ಲಿ ಸೇರಿದ ಕನಿಷ್ಠ ಮೂರು ವರ್ಷವಾದರೂ ಅದು ನಿರ್ನಾಮವಾಗುವುದಿಲ್ಲ. ಈ ಎಲ್ಲ ಕಾರಣದಿಂದ ರೈತರು ಎಚ್ಚರಿಕೆ ವಹಿಸಲೇಬೇಕು ಎಂದರು. ಜಾಗೃತಿ ಕೋಶದ ಜಂಟಿ ನಿರ್ದೇಶಕ ಶಿವನಗೌಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್ ಸಾವು
ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು
Mandya Lok Sabha Constituency; ಸ್ಟಾರ್ ಚಂದ್ರು ಪರ ಇಂದು ನಟ ದರ್ಶನ್ ಪ್ರಚಾರ
ಚುನಾವಣ ಬಾಂಡ್ ವಿಶ್ವದ ಅತಿದೊಡ್ಡ ಹಗರಣ: ರಾಹುಲ್