ಕಳ್ಳರ ಕಿಸೆಗೆ ಕೈ ಹಾಕಿ ರೈತರಿಗೆ ನೀಡುತ್ತೇವೆ
ನ್ಯಾಯ್ ಯೋಜನೆಗೆ ಹಣದ ಕೊರತೆ ಆಗಲ್ಲದೆಹಲಿಯಿಂದ ಮೋದಿ ಓಡಿಸಲು ಎಲ್ಲರೂ ಒಗ್ಗಟ್ಟು
Team Udayavani, Apr 20, 2019, 11:03 AM IST
ರಾಯಚೂರು: ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾತನಾಡಿದರು.
ರಾಯಚೂರು: ನಮ್ಮ ಯೋಜನೆಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸುತ್ತಾರೆ. ಅಂಬಾನಿಯಂಥ ಕಳ್ಳರ ಜೇಬಿನಿಂದ ಕಿತ್ತು ಬಡವರಿಗೆ ಹಂಚುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರತ್ಯುತ್ತರ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎರಡು ವಿಚಾರದ ಮೇಲೆ ಚುನಾವಣೆ ನಡೆಯುತ್ತಿದೆ. ಒಂದು ನ್ಯಾಯ, ಸತ್ಯ, ಪ್ರೀತಿಯ ಸಿದ್ಧಾಂತವಾದರೆ ಮತ್ತೊಂದು ಅನ್ಯಾಯ, ಸುಳ್ಳು, ದ್ವೇಷದ ಸಿದ್ಧಾಂತ. ನಾವು ಜನರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದ್ದೇವೆ. ದೇಶದ ಬಡ ಜನರ ಖಾತೆಗೆ ವರ್ಷಕ್ಕೆ 72 ಸಾವಿರ ರೂ. ನೀಡುವ ನ್ಯಾಯ್ ಯೋಜನೆ ಘೋಷಣೆ ಮಾಡಿದ್ದೇವೆ. ಕಳೆದ ಐದು ವರ್ಷದಲ್ಲಿ ಮೋದಿ ಬಡವರಿಗೆ ಅನ್ಯಾಯ ಮಾಡಿದ್ದಾರೆ. ನಾವು ಬಡವರ ಬಗ್ಗೆ ಮಾತನಾಡಿದರೆ ಸಾಕು ಅವರಿಗೆ ಹಣದ ವಿಚಾರ ಬರುತ್ತದೆ. ಆದರೆ,
ದೇಶದಲ್ಲಿ ಹಣದ ಕೊರತೆ ಇಲ್ಲ. ಅಂಬಾನಿ, ವಿಜಯ್ ಮಲ್ಯ, ಲಲಿತ್ ಮೋದಿ, ನೀರವ್ ಮೋದಿಯಂಥ ಕಳ್ಳ ಉದ್ಯಮಿಗಳಿಂದ ಕಿತ್ತು ಬಡವರಿಗೆ ನೀಡುತ್ತೇವೆ ಎಂದರು.
ಪ್ರಧಾನಿ ಮೋದಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇನೆಂದು ಕಳೆದ ಐದು ವರ್ಷದಲ್ಲಿ ಒಂದು ರೂ. ಹಾಕಲಿಲ್ಲ. ಆದರೆ, ನಾವು
ಸುಳ್ಳು ಹೇಳಲು ಬಂದಿಲ್ಲ. ಆಡಿದ್ದನ್ನು ಮಾಡಿ ತೋರಿಸುತ್ತೇವೆ. ಅ ಧಿಕಾರಕ್ಕೆ ಬಂದ 10 ದಿನದೊಳಗೆ ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್ನಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ. ರಾಜ್ಯದಲ್ಲೂ ಸಮ್ಮಿಶ್ರ ಸರ್ಕಾರ 40 ಸಾವಿರ ಕೋಟಿ ಸಾಲಮನ್ನಾ ಮಾಡಿದೆ ಎಂದರು.
ಚೌಕಿದಾರ್ ಚೋರ್ ಹೈ: ದೇಶದ ಯಾವ ಮೂಲೆಗೆ ಹೋದರೂ ಚೌಕಿದಾರ್ ಚೋರ್ ಹೈ ಎನ್ನುವ ಮಾತನ್ನು ಜನರೇ ಹೇಳುತ್ತಾರೆ. ಅವರು ಬಡವರ ಹಣ ಕದ್ದು ಉದ್ಯಮಿಗಳ ಜೇಬಿಗೆ ಹಾಕಿದ್ದಾರೆ. ಅಂಬಾನಿ, ಅದಾನಿಯಂಥ ಉದ್ಯಮಿಗಳಿಗೆ ಸಾವಿರಾರು ಕೋಟಿ ಹಣ ನೀಡುತ್ತಾರೆ. ರಫೆಲ್ ಒಪ್ಪಂದವನ್ನು ಎಚ್ಎಎಲ್ಗೆ ತಪ್ಪಿಸಿ ಅಂಬಾನಿಗೆ ಏಕೆ ನೀಡಲಾಯಿತು? ಅಂಬಾನಿ ಅಕೌಂಟ್ ಗೆ 30 ಸಾವಿರ ಕೋಟಿ ಏಕೆ ಬಂತು ಎಂಬುದನ್ನು ಎಂದು ದೇಶದ ಜನರಿಗೆ ತಿಳಿಸಲಿ. ಯುಪಿಎ ಸರ್ಕಾರ ರಫೇಲ್ ಯುದ್ಧ ವಿಮಾನ ನಿರ್ಮಾಣ
ಹೊಣೆ ಎಚ್ಎಎಲ್ ನೀಡಿ ಇಲ್ಲಿಯೇ ಕಾರ್ಖಾನೆ ನಿರ್ಮಿಸಲು ನಿರ್ಧರಿಸಿತ್ತು. ಇದರಿಂದ ರಾಜ್ಯದ ಲಕ್ಷಾಂತರ ಯುವಕರಿಗೆ ಉದ್ಯೋಗ ಸಿಗುತ್ತಿತ್ತು. ಪ್ರಧಾನಿ ದೇಶದ ಭದ್ರತೆ ಬಗ್ಗೆ ಮಾತನಾಡುತ್ತಾರೆ.
ನೋಟ್ ಬ್ಯಾನ್ ಮೂಲಕ 50 ಲಕ್ಷ ಜನ ಉದ್ಯೋಗ ಕಳೆದುಕೊಂಡರು. ಯುವಕರಿಗೆ ಉದ್ಯೋಗ ಇಲ್ಲದಿದ್ದರೆ ದೇಶ ಬಲಿಷ್ಠವಾಗದು ಎಂಬ ತಿಳಿವಳಿಕೆ ಇಲ್ಲವೇ ಎಂದು ಪ್ರಶ್ನಿಸಿದರು.