ದೇವದಾಸಿಯರ ಮಕ್ಕಳ ಸರಳ ವಿವಾಹ
ಹಸೆಮಣೆ ಏರಿದ 20 ಜೋಡಿಗಳು •ಸರಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ
Team Udayavani, Jun 29, 2019, 3:45 PM IST
ರಾಯಚೂರು: ವಿಠಲ ರುಕ್ಮಿಣಿ ಕಲ್ಯಾಣ ಮಂಟಪದಲ್ಲಿ ದೇವದಾಸಿಯರ ಮಕ್ಕಳ ಸಾಮೂಹಿಕ ನಡೆಯಿತು
ರಾಯಚೂರು: ನಗರದ ವಿಠಲ ರುಕ್ಮಿಣಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ದೇವದಾಸಿಯರ ವಿಮೋಚನಾ ಸಂಘದ ರಾಜ್ಯಮಟ್ಟದ ಅಧ್ಯಯನ ಶಿಬಿರದ ಅಂಗವಾಗಿ ದೇವದಾಸಿಯರ ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ 20 ಜೋಡಿಗಳು ನವಜೀವನಕ್ಕೆ ಕಾಲಿಟ್ಟವು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದಸ್ವಾಮಿ ಮಾತನಾಡಿ, ಸಮಾಜದಲ್ಲಿ ದೇವದಾಸಿಯಂಥ ಅನಿಷ್ಠ ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಈ ಸರಳ ಸಾಮೂಹಿಕ ವಿವಾಹ ಸಮಾರಂಭ ಪೂರಕ. ದೇವದಾಸಿಯರ ಕುಟುಂಬಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ದುಂದುವೆಚ್ಚ ಕಡಿವಾಣ ಹಾಕುವುದರ ಜತೆಗೆ ಜಾತಿ ವ್ಯವಸ್ಥೆಯನ್ನೂ ನಿರ್ಮೂಲನೆ ಮಾಡಬಹುದಾಗಿದೆ. ನೂತನ ದಂಪತಿಗಳು ಹೆತ್ತವರನ್ನು ಚನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳಿದರು.
ದೇವದಾಸಿ ಮಹಿಳೆ ಸಂಘಟನೆ ರಾಜ್ಯ ಗೌರವಾಧ್ಯಕ್ಷ ಯು. ಬಸವರಾಜ ಮಾತನಾಡಿ, ಮಾಜಿ ದೇವದಾಸಿಯರ ಪುನರ್ವಸತಿಗಾಗಿ ಸರ್ಕಾರಗಳ ವಿರುದ್ಧ ಹಲವು ರೀತಿಯ ಹೋರಾಟ ನಡೆಸಲಾಗಿದೆ. ಆ ಹೋರಾಟದ ಫಲವಾಗಿ ದೇವದಾಸಿಯರ ಮಕ್ಕಳ ಮದುವೆಗೆ ಸರ್ಕಾರ ಸಹಾಯಧನ ನೀಡುತ್ತಿದೆ. ಹೆಣ್ಣುಮಕ್ಕಳ ಮದುವೆಗೆ 5 ಲಕ್ಷ ರೂ. ಹಾಗೂ ಗಂಡು ಮಕ್ಕಳ ಮದುವೆಗೆ 3 ಲಕ್ಷ ರೂ. ಪ್ರೋತ್ಸಾಹಧನ ಘೋಷಿಸಿದೆ. ಎಲ್ಲ ದೇವದಾಸಿಯರು ಈ ರೀತಿಯ ಸರಳ ಸಾಮೂಹಿಕ ವಿವಾಹ ಮಾಡುವ ಮೂಲಕ ಆರ್ಥಿಕ ಹೊರೆಯಿಂದ ವಿಮುಕ್ತರಾಗಬೇಕು. ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವೀರೇಶ, ವಿಮೆ ನೌಕರರ ಸಂಘಟನೆಯ ವಿಭಾಗೀಯ ಅಧ್ಯಕ್ಷ ಎಂ. ಶರಣಗೌಡ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಕರಿಯಪ್ಪ ಮಾತನಾಡಿದರು. ದೇವದಾಸಿ ಮಹಿಳಾ ವಿಮೋಚನಾ ಸಂಘಟನೆ ಜಿಲ್ಲಾಧ್ಯಕ್ಷೆ ಎಚ್.ಪದ್ಮಾ ಅಧ್ಯಕ್ಷತೆ ವಹಿಸಿದ್ದರು. ಡಿ.ಎಸ್.ಶರಣಬಸವ ನಿರ್ವಹಿಸಿದರು.