ಜಿಲ್ಲೆಗೆ 6.53 ಲಕ್ಷ ಪ್ರವಾಸಿಗರ ಭೇಟಿ
ಪ್ರವಾಸಿಗರಿಂದ ಸ್ಥಳೀಯರಿಗೆ ಉದ್ಯೋಗ n ದೇಶದ ಅಭಿವೃದ್ಧಿಗೆ ಪ್ರವಾಸೋದ್ಯಮ ಪೂರಕ
Team Udayavani, Sep 28, 2019, 5:38 PM IST
ರಾಮನಗರ: ರಾಜ್ಯ ರಾಜಧಾನಿಯ ಮಗ್ಗಲಲ್ಲೇ ಇರುವ ರಾಮನಗರ ಜಿಲ್ಲೆ ಪ್ರವಾಸಿಗರನ್ನು ಸೆಳೆಯುತ್ತಿದ್ದು, ಪ್ರವಾಸಿಗರ ಸಂಖ್ಯೆ ನಿರಂತರವಾಗಿ ಏರುತ್ತಲೇ ಇದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಂಕಿ- ಅಂಶಗಳು ದೃಢಪಡಿಸಿವೆ.
ಪ್ರವಾಸೋದ್ಯಮ ಹೆಚ್ಚಿದಂತೆ ಸಾವಿರಾರು ಮಂದಿಗೆ ಸ್ವ-ಉದ್ಯೋಗಾವಕಾಶವನ್ನು ದೊರಕಿಸಿಕೊಟ್ಟಿದೆ. ಪ್ರವಾಸಿ ಸ್ಥಳಗಳಲ್ಲಿ ಎಳನೀರು
ಮಾರಾಟ, ದೇವಸ್ಥಾನಗಳ ಮುಂಭಾಗದ ಹೂ, ಹಣ್ಣು ಮುಂತಾದ ಅಂಗಡಿಗಳು, ಟೀ ಸ್ಟಾಲ್ಗಳು, ಐಸ್ ಕ್ರೀಂ ಅಂಗಡಿಗಳು, ಹೋಟೆಲ್ಗಳು, ಅಲ್ಲದೆ ರಸ್ತೆ ಬದಿಯಲ್ಲಿ ಸೌತೆಕಾಯಿ, ಕಡಲೆಕಾಯಿ ಹೀಗೆ ವಿವಿಧ ರೀತಿಯ ಸಣ್ಣ ಪುಟ್ಟ ವ್ಯಾಪಾರಿಗಳು….. ಹೀಗೆ ಹತ್ತು ಹಲವು ರೂಪದಲ್ಲಿ ಸಾವಿರಾರು ಜನರು ಪ್ರವಾಸಿ ತಾಣಗಳಿಂದಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ದೊರಕಿಸಿಕೊಂಡು ಜೀವನೋಪಾಯಕ್ಕಾಗಿ ಈ ತಾಣಗಳನ್ನೆ ಅವಲಂಬಿಸಿದ್ದಾರೆ.
ಉದ್ಯೋಗದ ಪ್ರಾತ್ಯಕ್ಷಿಕೆ: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಜಿಲ್ಲೆಯಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಉಜ್ವಲ ಉದ್ಯೋಗ ಕುರಿತು ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ ದೇಶದ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮವೂ ಪೂರಕವಾಗಿದೆ ಎಂಬ ಅಂಶ ಮತ್ತೂಮ್ಮೆ ದೃಢಪಟ್ಟಿತು.
8 ತಿಂಗಳಲ್ಲಿ 6.53 ಲಕ್ಷ ಪ್ರವಾಸಿಗರ ಭೇಟಿ: ಇತ್ತೀಚಿನ ದಿನಗಳಲ್ಲಿ ರಾಮನಗರ ಜಿಲ್ಲೆ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿದೆ. ಕಲೆ, ಸಂಸ್ಕೃತಿ ಮತ್ತು ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿರುವ ರಾಮನಗರದ ಪ್ರವಾಸಿ ತಾಣಗಳನ್ನು
ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.
2019ರ ಜನವರಿಯಿಂದ ಆಗಸ್ಟ್ ಅಂತ್ಯದವರೆಗೆ 6,47,666 ಮಂದಿ ದೇಶಿ ಪ್ರವಾಸಿಗರು ಮತ್ತು 5,693 ಮಂದಿ ವಿದೇಶಿ ಪ್ರವಾಸಿಗರು ಒಟ್ಟು 6,53,359 ಪ್ರವಾಸಿಗರು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
ಪ್ರಮುಖ ಪ್ರವಾಸಿ ಸ್ಥಳಗಳು: ರಾಮದೇವರ ಬೆಟ್ಟ, ರೇವಣಸಿದೇªಶ್ವರ ಬೆಟ್ಟ, ಹಂದಿದಗುಂದಿ ಬೆಟ್ಟ, ಕೂನಗಲ್ ಬೆಟ್ಟ, ಸಾವನದುರ್ಗ, ಮಾಗಡಿ ಕೋಟೆ, ಸಂಗಮ, ಮೇಕೆದಾಟು, ಮಳೂರು ಅಪ್ರಮೇಯಸ್ವಾಮಿ ದೇವಾಲಯ, ಜಾನಪದ ಲೋಕ, ಕಣ್ವ ಜಲಾಶಯ, ಮಂಚನಬೆಲೆ ಜಲಾಶಯ, ಸಾವನದುರ್ಗ, ಮಾಗಡಿ ರಂಗನಾಥ ದೇವಾಲಯ, ಕನಕಪುರದ ಕಬ್ಟಾಳಮ್ಮ
ದೇವಾಲಯ, ಚುಂಚಿಫಾಲ್ಸ್, ಕಲ್ಲಳ್ಳಿ ವೆಂಕಟೇಶ್ವರ ಸ್ವಾಮಿ ದೇವಾಲಯ ಸದ್ಯ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿರುವ ಸ್ಥಳಗಳು. ಪ್ರತಿ ಸ್ಥಳದಲ್ಲೂ ತನ್ನದೇ
ಆದ ಸ್ಥಳೀಯ ಆಹಾರ ವೈವಿಧ್ಯತೆ ವ್ಯಕ್ತವಾಗುತ್ತಿರುವುದರಿಂದ ಪ್ರವಾಸಿಗರಿಗೆ ಸ್ಥಳೀಯ ಅಚಾರ, ವಿಚಾರಗಳು ಸಹ ಪರಿಚಯವಾಗುತ್ತಿವೆ.