ಕೋವಿಡ್ 19 ಸೋಂಕಿತರಿಗೆ 100 ಹಾಸಿಗೆ
Team Udayavani, Jun 30, 2020, 6:50 AM IST
ಕನಕಪುರ: ಕೋವಿಡ್-19 ಸೋಂಕಿನ ನಿಯಂತ್ರಣದ ವೈದ್ಯಕೀಯ ಸೇವೆಗೆ ಸಹಕರಿಸುವಂತೆ ಸರ್ಕಾರ ಮಾಡಿದ ಮನವಿಗೆ ದಯಾನಂದ ಸಾಗರ್ ಆಸ್ಪತ್ರೆಯ ಆಡಳಿತ ಮಂಡಳಿ ಸ್ಪಂದಿಸಿದ್ದು, ಮುಂದಿನ ಒಂದು ತಿಂಗಳಲ್ಲಿ 100 ಹಾಸಿಗೆಗಳ ಮೀಸಲಿರಿಸಲು ಭರವಸೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಹೇಳಿದರು.
ತಾಲೂಕಿನ ಮರಳವಾಡಿ ಹೋಬಳಿ ದೇವರ ಕಗ್ಗಳ ಹಳ್ಳಿ ಬಳಿಯಿರುವ ದಯಾನಂದ ಸಾಗರ್ ವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು, ಆಸ್ಪತ್ರೆಯ ವೈದ್ಯಾಧಿ ಕಾರಿ ಮತ್ತು ಆಡಳಿತ ಮಂಡಳಿ ಜೊತೆ ಸಭೆ ನಡೆಸಿದರು. ಅವರು ಸೋಂಕಿನಿಂದ ಗುಣಮುಖರಾಗಿದ್ದ ಕೆಲವು ರೋಗಿಗಳ ಜೊತೆ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ವೈದ್ಯಕೀಯ ಸೇವೆ ಮತ್ತು ಚಿಕಿತ್ಸೆ ಗುಣಮಟ್ಟದ ಬಗ್ಗೆ ಚರ್ಚೆ ನಡೆಸಿದರು.
ನಂತರ ಡಿಸಿಎಂ ಮಾತನಾಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಚಿಕಿತ್ಸೆಯ ಬಗ್ಗೆ ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಾಕಷ್ಟು ಮಂದಿ ಗುಣ ಮುಖರಾಗಿದ್ದಾರೆ. ಸೋಂಕಿನ ಚಿಕಿತ್ಸೆಗೆ ಮೀಸಲಿರಿಸಿದ್ದ 30 ಬೆಡ್ಗಳಿಂದ 60 ಬೆಡ್ಗಳಿಗೆ ವಿಸ್ತರಣೆಯಾಗಿದೆ. ಅದರಲ್ಲಿ 25 ಬೆಡ್ ಐಸಿಯು 5 ಬೆಡ್ಗಳಲ್ಲಿ ವೆಂಟಿ ಲೇಟರ್ ಉಳಿದ ಬೆಡ್ಗಳಿಗೆ ಆಕ್ಸಿಜನ್ ಪೂರೈಕೆಗೆ ಮೀಸಲಿರಿಸಿದೆ ಎಂದರು.
ತಾಲೂಕಿನಲ್ಲಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಕೊರತೆಯಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶೀಘ್ರವಾಗಿ ಕೊರತೆಯಿರುವ ಸಿಬ್ಬಂದಿ ಹುದ್ದೆಗೆ ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ದಯಾನಂದ ಸಾಗರ್ ಆಸ್ಪತ್ರೆ ಎಚ್.ಸಾಗರ್, ನಿಶಾಂತ್ ಸಾಗರ್, ಮಾದೇವನ್ ಗಾಯಕ್ವಾಡ್, ಡೀಸಿ ಅರ್ಚನಾ, ಉಪವಿಭಾಗಾಧಿಕಾರಿ ದಾಕ್ಷಾಯಿಣಿ, ಎಸ್ಪಿ ಅನೂಪ್ಶೆಟ್ಟಿ, ಸಿಇಒ ಇಕ್ರಂ ಇದ್ದರು.