100 ಹೆಚ್ಚುವರಿ ಹಾಸಿಗೆ ವ್ಯವಸ್ಥೆ
Team Udayavani, Apr 5, 2020, 11:49 AM IST
ರಾಮನಗರ: ತುರ್ತು ಪರಿಸ್ಥಿತಿ ಎದುರಾದರೆ ಸಮರ್ಥವಾಗಿ ನಿಭಾಯಿಸಲು ನಗರದ ಕೋವಿಡ್ 19 ರೆಫರಲ್ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 100 ಹಾಸಿಗೆಗಳು ಒಟ್ಟು 200 ಹಾಸಿಗೆಗಳ ವ್ಯವಸ್ಥೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಾ.ಸಿ.ಎನ್.ಅಶ್ವಥನಾರಾಯಣ ತಿಳಿಸಿದರು.
ನಗರದ ಕಂದಾಯ ಭವನದಲ್ಲಿ ಸ್ಥಾಪನೆಯಾಗಿರುವ ಕೋವಿಡ್-19 ರೆಫರಲ್ ಆಸ್ಪತ್ರೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹಾಲಿಯಿರುವ 100 ಹಾಸಿಗೆ ವ್ಯವಸ್ಥೆಯಲ್ಲಿ 40 ಹಾಸಿಗೆಗಳಿಗೆ ಆಕ್ಸಿಜನ್ ಮತ್ತು 4 ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸಲಾಗಿದೆ. ತಾಲೂಕು ಮಟ್ಟದಲ್ಲೂ ಐಸೋ ಲೇಷನ್ ಮತ್ತು ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಜಿಲ್ಲೆಯಲ್ಲಿ ಕೋವಿಡ್ 19 ಪಾಸಿಟಿವ್ ಪ್ರಕರಣ ಇಲ್ಲದಿರುವುದು ಸಮಾಧಾನದ ಸಂಗತಿ ಎಂದರು.
ಸ್ವಯಂ ಪ್ರೇರಣೆಯಿಂದ ಮುಂದೆ ಬನ್ನಿ: ದೆಹಲಿ ಜಮಾತ್ನಲ್ಲಿ ಭಾಗಿಯಾದವರು ಸ್ವಯಂ ಪ್ರೇರ ಣೆಯಿಂದ ಬಂದು ಪರೀ ಕ್ಷೆಗೆ ಒಳಪಡಬೇಕು ಎಂದು ಮನವಿ ಮಾಡಿದರು. ರೇಷ್ಮೆ ಗೂಡು ಮಾರುಕಟ್ಟೆ ವಹಿವಾಟು ಬೇಡ ಎಂಬ ಕೂಗು ಕೇಳಿ ಬಂದಿದ್ದು, ಈ ವಿಚಾರವನ್ನು ಸಿಎಂ ಗಮನಕ್ಕೆ ತರುವುದಾಗಿ ತಿಳಿಸಿದರು.
ಮೂರು ಸ್ಥಳಗಳಲ್ಲಿ ರೇಷ್ಮೆ ವಹಿವಾಟು: ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಜನಸಾಂದ್ರತೆ ಹೆಚ್ಚಾಗದಂತೆ ತಡೆಯಲು ಮೂರು ಕಡೆ ರೇಷ್ಮೆ ಗೂಡು ಹರಾಜು ವ್ಯವಸ್ಥೆ ಕೈಗೊಳ್ಳಿ ಎಂದು ಅಶ್ವಥನಾರಾಯಣ ಅಧಿಕಾರಿಗಳಿಗೆ ಸೂಚನೆ ಕೊಟ್ಟರು. ರೇಷ್ಮೆ ಗೂಡು ಮಾರುಕಟ್ಟೆಗಳ ವಹಿವಾಟು ಆರಂಭಿಸಲಾಗಿದೆ. ಸೋಂಕು ಹರಡದಂತೆ ಎಚ್ಚರಿಕೆ ಕ್ರಮಕೈಗೊಳ್ಳಿ ಎಂದರು.