ಜಿಲ್ಲೆಯಲ್ಲಿ ಆನೆಕಾಲು ರೋಗದ ಆತಂಕ
ವಲಸೆ ಬಂದಿರುವ ಕಾರ್ಮಿಕರಲ್ಲಿ ರೋಗ ಪತ್ತೆ | ರೋಗ ಹರಡದಂತೆ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚರಿಕೆ
Team Udayavani, Aug 2, 2019, 12:45 PM IST
ರಾಮನಗರ: ಸೊಳ್ಳೆಯಿಂದ ಡೆಂಘೀ, ಚಿಕೂನ್ಗುನ್ಯಾ, ಮಲೇರಿಯಾ ರೋಗಗಳು ಹರಡುತ್ತಿರುವ ಆತಂಕದ ನಡುವೆ ಜಿಲ್ಲೆಗೆ ವಲಸೆ ಬಂದಿರುವ ಕಾರ್ಮಿಕರ ಪೈಕಿ ಕೆಲವರಲ್ಲಿ ಆನೆಕಾಲು (ಫಿಲೇರಿಯಾಸಿಸ್ ಅಥವಾ ಎಲಿಫೆಂಟಿಯಾಸಿಸ್) ರೋಗದ ಪ್ರಕರಣಗಳು ಕಂಡು ಬಂದಿದೆ. ರೋಗ ಹರಡದಂತೆ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿದೆ.
ರಾಮನಗರ ಜಿಲ್ಲೆಯಲ್ಲಿ ಆನೆಕಾಲು ರೋಗಕ್ಕೆ ಕಾರಣವಾಗುವ ಪೂರಕ ವಾತಾವರಣ ಮತ್ತು ಪರಿಸರ ಇಲ್ಲ. ಆದರೆ, ವಲಸೆ ಬಂದಿರುವ ವ್ಯಕ್ತಿಗಳಲ್ಲಿ ಈ ರೋಗವಿದ್ದು, ಅವರನ್ನು ಕಚ್ಚಿದ ಸೊಳ್ಳೆಗಳು ರೋಗವನ್ನು ಹರಡುವ ಆತಂಕವನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
2019ರ ಜನವರಿ ತಿಂಗಳಿಂದ ಜುಲೈ ಅಂತ್ಯದವರೆಗೆ ಜಿಲ್ಲೆಯಲ್ಲಿ 20 ಪ್ರಕರಣಗಳು ಪತ್ತೆಯಾಗಿವೆ. ಆರೋಗ್ಯ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಉತ್ತರ ಭಾರತದ ಕೆಲ ರಾಜ್ಯಗಳು ಮತ್ತು ರಾಜ್ಯದ ಉತ್ತರ ಭಾಗದ ಜಿಲ್ಲೆಗಳಲ್ಲಿ ಆನೆಕಾಲು ರೋಗ ಪೀಡಿತರು ಹೆಚ್ಚಾಗಿದ್ದಾರೆ. ಹೀಗಾಗಿ ಆ ಭಾಗಗಳಿಂದ ಜಿಲ್ಲೆಗೆ ವಲಸೆ ಬಂದಿರುವವರಲ್ಲಿ ಆನೆಕಾಲು ರೋಗಕ್ಕೆ ಕಾರಣವಾಗುವ ಲಾರ್ವ ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಮುಂದಾಗಿದೆ.
2018ರಲ್ಲಿ 67 ಪ್ರಕರಣಗಳು ಪತ್ತೆ: ಕಳೆದ ವರ್ಷ ಜಿಲ್ಲೆಯಲ್ಲಿ 67 ಪ್ರಕರಣಗಳು ಪತ್ತೆಯಾಗಿದ್ದವು. ರಾಮನಗರ ತಾಲೂಕಿನಲ್ಲಿ 32, ಚನ್ನಪಟ್ಟಣದಲ್ಲಿ 13, ಕನಕಪುರದಲ್ಲಿ 8 ಮತ್ತು ಮಾಗಡಿ ತಾಲೂಕಿನಲ್ಲಿ 14 ಪ್ರಕರಣಗಳು ಪತ್ತೆಯಾಗಿದ್ದವು. ರೋಗ ಪತ್ತೆಯಾಗಿದ್ದ ಎಲ್ಲಾ 67 ಮಂದಿಗೂ ಚಿಕಿತ್ಸೆ ಆರಂಭಿಸಲಾಗಿದೆ. ಈ ಪೈಕಿ 6 ಮಂದಿ ರಾಮನಗರ ಜಿಲ್ಲೆಯಿಂದ ಹೊರ ಹೋಗಿದ್ದು, ಉಳಿದವರಿಗೆ ಚಿಕಿತ್ಸೆ ಪ್ರಗತಿಯಲ್ಲಿದೆ.
ಉತ್ತರ ಭಾರತ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣ ಇತ್ಯಾದಿ ಕಾಮಗಾರಿಗೆ ಆಗಮಿಸಿರುವ ಕೂಲಿ ಕಾರ್ಮಿಕರಲ್ಲೇ ಈ ರೋಗ ಕಂಡು ಬಂದಿದೆ. ಬೆಂಗಳೂರು – ಮೈಸೂರು ಹೆದ್ದಾರಿ ಬೈಪಾಸ್, ರಸ್ತೆ ವಿಸ್ತೀರ್ಣ ಕಾಮಗಾರಿಗೆ ವಲಸೆ ಬಂದಿರುವ ಕಾರ್ಮಿಕರು, ದೊಡ್ಡ ಕಟ್ಟಡಗಳ ನಿರ್ಮಾಣ ಕಾರ್ಮಿಕರಲ್ಲಿ ಆನೇಕಾಲು ರೋಗ ಪತ್ತೆಯಾಗಿದೆ.
ರಾತ್ರಿ ವೇಳೆ ರಕ್ತ ಪರೀಕ್ಷೆ ಏಕೆ?: ಮಾನವನ ದೇಹವನ್ನು ಸೇರಿದ ಫಿಲೇರಿಯಾ ಲಾರ್ವ ದಿನದ ಎಲ್ಲಾ ಸಮಯದಲ್ಲೂ ರಕ್ತದಲ್ಲಿ ಪತ್ತೆಯಾಗುವುದಿಲ್ಲ ಎಂಬುದು ವಿಶೇಷ ಅಂಶ. ದಿನ ಪೂರ್ತಿ ಅಡಗಿ ಕುಳಿತುಕೊಳ್ಳುವ ಅವು ರಾತ್ರಿ 8.30ರಿಂದ 12 ಗಂಟೆ ಸಮಯದಲ್ಲಿ ರಕ್ತದಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಿದ್ದೆಗೆಟ್ಟು ನಿರ್ಮಾಣ ಕಾಮಗಾರಿ ಸ್ಥಳಗಳಿಗೆ ತೆರಳಿ ಅಲ್ಲಿ ವಿಶ್ರಾಂತಿ ಪಡೆಯುವ ಕಾರ್ಮಿಕರಿಂದ ರಕ್ತಲೇಪನ (ಸ್ಮಿಯರ್) ಸಂಗ್ರಹಿಸುವ ಶ್ರಮಪಡಬೇಕಾಗಿದೆ. ರೋಗದ ಬಗ್ಗೆ ಅವರಿಗೆ ತಿಳುವಳಿಕೆ ಕೊಟ್ಟು, ಅವರಿಂದ ರಕ್ತ ಪಡೆಯುವುದು ದೊಡ್ಡ ಸಾಹಸ ಎಂದು ಗುರುತಿಸಿಕೊಳ್ಳಲು ಇಚ್ಚಿಸದ ಆರೋಗ್ಯ ಇಲಾಖೆಯ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.
ರೋಗ ಲಕ್ಷಣವಿದ್ದರೆ ಆಸ್ಪತ್ರೆ ಸಂಪರ್ಕಿಸಿ: ಆನೆಕಾಲು ರೋಗದ ಲಕ್ಷಣಗಳೆಂದರೆ ಕೈಕಾಲು ಊದಿಕೊಳ್ಳುವುದು. ಗಂಡಸರಲ್ಲಿ ವೃಷಣಗಳು ಸಹ ಊದಿಕೊಳ್ಳುವುದು ರೋಗ ಲಕ್ಷಣ. ಒಮ್ಮೆ ಕೈ, ಕಾಲು, ವೃಷಣ ಊದಿಕೊಂಡರೆ ಜೀವನ ಪೂರ್ತಿ ಊತ ಕಡಿಮೆಯಾಗುವುದಿಲ್ಲ. ಹೀಗಾಗಿ ಈ ಲಕ್ಷಣಗಳು ಕಂಡು ಬಂದಾಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸುವುದು ಒಳಿತು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?