ಬೀಚನಹಳ್ಳಿ ರಸ್ತೆ ದುರಸ್ತಿಗೆ ಬೇಕು ಮುಖಂಡರ ಇಚ್ಚಾಶಕ್ತಿ
ತುರ್ತು ಪರಿಸ್ಥಿತಿಯಲ್ಲಿ ಪರಿತಾಪ ಪಡುವ ಗ್ರಾಮದ ಜನತೆ ಹಲವು ಬಾರಿ ಮನವಿ ಸಲ್ಲಿಸಿದರೂ ಸರಿಹೋಗದ ಸಮಸ್ಯೆ
Team Udayavani, Aug 11, 2019, 2:38 PM IST
ಕುದೂರು: ತಿಪ್ಪಸಂದ್ರ ಹೋಬಳಿಯ ಹುಳ್ಳೇನಹಳ್ಳಿ ಗ್ರಾಪಂ ವ್ಯಾಪ್ತಿಯ ಬೀಚನಹಳ್ಳಿ ಮುಖ್ಯ ರಸ್ತೆಯಲ್ಲಿ ಮಳೆ ಬಂದರೆ ಸಾಕು ರಸ್ತೆಯಲ್ಲಿ ನೀರು ನಿಂತುಕೊಂಡು ಕೆರೆಯಾಗಿ ಮಾರ್ಪಡಾಗುವುದಲ್ಲದೆ. ಕೆಸರು ಗದ್ದೆಯಾಗಿ ವಾಹನಗಳು ಓಡಾಡಲಾಗದ ಸ್ಥಿತಿ ಎದುರಾಗುತ್ತದೆ.
ಸುಮಾರು 10 -15 ವರ್ಷಗಳಿಂದಲೂ ಇದೇ ಸ್ಥಿತಿ ಇದ್ದು, ಇನ್ನೂ ರಾತ್ರಿ ವೇಳೆ ವಾಹನದಿಂದ ಬಿದ್ದು ಗಾಯಗೊಂಡಿರುವ ಘಟನೆ ಸಾಕಷ್ಟಿವೆ. ತುರ್ತು ವೇಳೆಯಲ್ಲಿ ಯಥಾಸ್ಥಿತಿ ಗರ್ಭಿಣಿಯರಿಗೆ, ಹೆಂಗಸರು ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲು ಯಾತನೆ ಪಡಬೇಕಾಗಿದೆ. ಇಲ್ಲಿ ವರೆಗೆ ಯಾವೊಬ್ಬ ಜನಪ್ರತಿನಿಧಿಯೂ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಒತ್ತಡ ಹೆಚ್ಚಾದಾಗ ಗುಂಡಿಗಳಿಗೆ ಮಣ್ಣು ಮುಚ್ಚಿ ಸುಮ್ಮನಾಗುತ್ತಾರೆ. ಮಳೆ ಬಂದಾಗ ಮತ್ತೆ ಯಥಾಸ್ಥಿತಿಯಾಗುತ್ತದೆ.
ಬೀಚನಹಳ್ಳಿ ಕೆರೆಯ ಹಿಂಭಾಗದಿಂದ ಕುದೂರು ಮತ್ತು ತಿಪ್ಪಸಂದ್ರ ಹೋಬಳಿಯ ಜನರಿಗೆ ಈ ರಸ್ತೆ ತುಂಬಾ ಅನುಕೂಲಕರವಾಗಿದೆ. ಇದು ಹತ್ತಿರದ ರಸ್ತೆಯೂ ಆಗಿರುವುದರಿಂದ ಅಲ್ಲಿಯ ರೈತರಿಗೆ ಮತ್ತು ಸಾರ್ವಜನಿಕರಿಗೆ ಕುದೂರು ಗ್ರಾಮದ ಮಾರುಕಟ್ಟೆಗೆ ಬರಲು ಅನುಕೂಲವಾಗಿರುವ ಈ ರಸ್ತೆಯನ್ನೇ ಜನರು ಅವಲಂಬಿಸಿದ್ದಾರೆ. ಇನ್ನು ಈ ರಸ್ತೆ ಹಾಳಾಗಿರುವುದರಿಂದ ಈ ಭಾಗದ ರೈತರು ಬೆಳೆಯುವ ಬೆಳೆಯನ್ನು ಮಾರುಕಟ್ಟೆಗೆ ತಲುಪಿಸಲು ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. ಚುನಾವಣೆಯಲ್ಲಿ ಮತ ಕೇಳಲು ಬರುವ ಜನಪ್ರತಿನಿಧಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ರಸ್ತೆ ಸರಿ ಮಾಡಿ ಚರಂಡಿ ನಿರ್ಮಿಸಿ ಎಂದು ಮನವಿ ಮಾಡಿ ಸಾಕಾಗಿದೆ ಎಂದು ಗ್ರಾಮಸ್ಥರು ಜನಪ್ರತಿನಿಗಳ ಹಾಗೂ ಪಂಚಾಯಿತಿಯ ಕಾರ್ಯ ವೈಖರಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.