ಪಟಾಕಿ ತಂದ ಪಜೀತಿ;ರಾಮನಗರದಲ್ಲಿ ಬೆಳ್ಳಂಬೆಳಗ್ಗೆ ʼಬಾಂಬ್ʼ ಭೀತಿ
Team Udayavani, Sep 16, 2019, 9:16 AM IST
ರಾಮನಗರ: ಬೆಂಗಳೂರು – ಮೈಸೂರು ಹೆದ್ದಾರಿಯ ರಾಮನಗರದ ಹೋಟೆಲ್ ಒಂದರ ಮುಂಭಾಗದಲ್ಲಿ ʼಬಾಂಬ್ ʼ ಒಂದು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಸೋಮವಾರ ಬೆಳ್ಳಂಬೆಳಗ್ಗೆ ನಡೆದಿದೆ.
ರಾಮನಗರದ ರಾಮ್ ಘಡ್ ಹೋಟೆಲ್ ಬಳಿ ಬಾಂಬ್ ರೀತಿಯ ಕೆಂಪು ಬಣ್ಣದ ವಸ್ತುವೊಂದು ಪತ್ತೆಯಾಗಿ ಆತಂಕಕ್ಕೆ ಕಾರಣವಾಗಿತ್ತು. ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿತು.
ಅದರೆ ಅಲ್ಲಿ ಪತ್ತೆಯಾಗಿದ್ದು ದೊಡ್ಡ ಗಾತ್ರದ ಪಟಾಕಿ ಎಂದು ತಿಳಿದು ಬಂದಿದ್ದು, ಜನರು ನಿರಾಳರಾಗಿದ್ದಾರೆ. ಯಾರೋ ಕಿಡಿಗೇಡಿಗಳು ಈ ಕೃತ್ಯ ನಡೆಸಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಈ ಹಿಂದೆ ರಾಮನಗರದಲ್ಲಿ ಬಾಂಬ್ ಪತ್ತೆಯಾಗಿತ್ತು ಮತ್ತು ಓರ್ವ ಉಗ್ರನನ್ನು ವಶಕ್ಕೆ ಪಡೆಯಲಾಗಿತ್ತು. ಹೀಗಾಗಿ ಸಹಜವಾಗಿಯೇ ಜನರು ಆತಂಕಗೊಂಡಿದ್ದರು.
ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.