ವಿರುಪಾಕ್ಷಿಪುರದಲ್ಲಿ ಮಹಾಲಕ್ಷ್ಮೀ ದೇವಾಲಯ ನಿರ್ಮಾಣಕ್ಕೆ ಸಿದ್ಧತೆ
Team Udayavani, Jan 30, 2020, 5:08 PM IST
ಚನ್ನಪಟ್ಟಣ: ಜಿಲ್ಲೆಯಲ್ಲಿಯೇ ವಿಶೇಷವಾದ 35 ಅಡಿ ಎತ್ತರದ ಬೃಹತ್ ಶಿವನ ಮೂರ್ತಿ ಸ್ಥಾಪನೆ, ಮಹಾ ಲಕ್ಷ್ಮೀ ದೇವಾಲಯ ನಿರ್ಮಾಣ ಹಾಗೂ ಭಕ್ತಾಧಿಗಳಿಗೆ ಪ್ರತಿ ನಿತ್ಯ ಅನ್ನದಾಸೋಹ ಕಲ್ಪಿಸುವ ಬಯಕೆ ಹೊಂದಿರುವುದಾಗಿ ನಾಗಾ ಬಾಬಾ ಪೂರಿ ಪರಂಪರೆಯ ಶ್ರೀಶಿವಾನಂದ ಆವಧೂತ ಸ್ವಾಮೀಜಿ ತಿಳಿಸಿದರು.
ವಿರುಪಾಕ್ಷಿಪುರ ಗ್ರಾಮದ ಹೊರ ವಲಯದಲ್ಲಿನ ಚನ್ನಪ್ಪಾಜಿ ದೇವಾಲಯದಲ್ಲಿ ಮಾತನಾಡಿ ಅವರು, ದೇವಾಲಯ ನಿರ್ಮಾಣಕ್ಕೆ ಕಾಯ್ದಿರಿಸಿದ ಸ್ಥಳದಲ್ಲಿ ಸದ್ಯದಲ್ಲಿಯೇ ಭಕ್ತರ ಸಹಕಾರದೊಂದಿಗೆ ಮಹಾಲಕ್ಷ್ಮೀ ದೇವಾಲಯದ ಕಟ್ಟಡ ನಿರ್ಮಾಣ ಕೆಲಸ ಪ್ರಾರಂಭವಾಗಿದ್ದು, ಹಂತ ಹಂತವಾಗಿ ದೇವಾಲಯದ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.
ಸಂದರ ಪರಿಸರದಲ್ಲಿ ಅದರಲ್ಲೂ ಅರಣ್ಯ ಪ್ರದೇಶದ ಬಸವನ ಬೆಟ್ಟದ ತಪ್ಪಲಿನಲ್ಲಿರುವ ಸ್ಥಳದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಹಾಲಕ್ಷ್ಮೀ ದೇವಾಲಯದ ಪಕ್ಕದಲ್ಲಿಯೇ ಶಿವನ ಬೃಹತ್ ಪ್ರತಿಮೆ ಸ್ಥಾಪನೆ ಮಾಡಲಾಗುತ್ತಿದ್ದು, ದೇವಾಲಯ ಹಾಗೂ ಶಿವನ ಪ್ರತಿಮೆ ಸ್ಥಾಪನೆಗೆ ಭಕ್ತಾಧಿಗಳ ಸಂಪೂರ್ಣ ಸಹಕಾರ ಅವಶ್ಯಕವಾಗಿದೆ ಎಂದರು.
ನಾಗಬಾಬಾ ಪರಂಪರೆಯನ್ನು ಹೊಂದಿರುವ ನಾಗಾ ಸಾಧುಗಳ
ಧೀಕ್ಷೆಯನ್ನು ಪಡೆದಿರುವುದಾಗಿ ತಿಳಿಸಿದ ಅವರು, ಹಲವಾರು ವರ್ಷಗಳ ಹಿಂದೆಯೇ ಹೃಷಿಕೇಶದ ವಿಶ್ವಚೇತನ ಆಶ್ರಮದಲ್ಲಿ ಲಕ್ಷ್ಮಣ ಶೀಲ, ಭೀಮ ಶೀಲ ಆಶ್ರಮದಲ್ಲಿ 125ರಿಂದ 150 ವರ್ಷಗಳ ನಾಗಾ ಸಾಧುಸಂತರ ಸೇವೆ ಮಾಡಿ ಸಿದ್ಧಿ ಪಡೆದಿದ್ದೇನೆ. ಹರಿಯಾಣದ ಗುರುಮಾತೆಯಾದ ರಾಜೇ ಶ್ವರಿ ಅವರ ಆಶೀರ್ವಾದದಲ್ಲಿ ಹಲವಾರು ರೀತಿಯ ಸಿದ್ಧಿ ಪಡೆದಿರುವುದಾಗಿ ತಿಳಿಸಿದರು.
ಗ್ರಾಮದ ಜನತೆಯ ಸಂಪೂರ್ಣ ಸಹಕಾರದೊಂದಿಗೆ ಚನ್ನಪ್ಪಸ್ವಾಮಿಯ ಗದ್ದುಗೆಯ ಬಳಿ ಇರುವ ರಾಮಯ್ಯನ ಕೆರೆಯ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯ, ಶಿವನ ಪ್ರತಿಮೆ ಹಾಗೂ ಅನ್ನದಾಸೋಹ ಭವನ ಬಹುವರ್ಷಗಳ ಕನಸಾಗಿದೆ ಎಂದರು.
ಪ್ರತಿ ನಿತ್ಯ ಜಂಜಾಟದಲ್ಲಿ ಸಿಲುಕುವ ಮನುಷ್ಯನಿಗೆ ನೆಮ್ಮದಿ ನೀಡುವ ದೇವಾಲಯಗಳು ಆತನ ಆರೋಗ್ಯದ ಮೇಲೂ ಗುಣಮಟ್ಟದ ಪರಿಣಾಮ ಬೀರುತ್ತಿವೆ ಎಂಬುದು ವಾಸ್ತವವಾಗಿದೆ ಎಂದು ತಿಳಿಸಿದರು. ಭಕ್ತರು ದೇವಾಲಯ, ಶಿವನ ಬೃಹತ್ ಪ್ರತಿಮೆ ಹಾಗೂ ಅನ್ನದಾಸೋಹ ಭವನಕ್ಕೆ ವಿವಿಧ ರೂಪದಲ್ಲಿ ಸಹಕಾರ ನೀಡುವಂತೆ ಸ್ವಾಮಿಗಳು ಮನವಿ ಮಾಡಿದರು.