ಶುದ್ಧ ನೀರಿನ ಯಂತ್ರ ವಿತರಣೆ
Team Udayavani, Sep 2, 2020, 2:14 PM IST
ಕನಕಪುರ: ಜನರಿಗೆ ಕಾನೂನಿನ ಅರಿವು ಮತ್ತು ಸಮಾಜ ಸೇವೆಗೆಂದು ಮಾತೃ ಭೂಮಿ ಫೌಂಡೇಶನ್ ಟ್ರಸ್ಟ್ ಮತ್ತು ಕಾನೂನು ಜಾಗೃತಿ ಸಮಿತಿ ರಚಿಸಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಹಾಗೂ ವಕೀಲ ಲೋಕೇಶ್ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಗಾಣಾಳು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾಗಮ ಯೋಜನೆಯಡಿ ಶಿಕ್ಷಣ ಕಲಿಯುತ್ತಿರುವ ಮಕ್ಕಳಿಗೆ ಶುದ್ಧ ನೀರಿನ ಯಂತ್ರ ಹಸ್ತಾಂತರಿಸಿ ಮಾತನಾಡಿದರು. ನಮ್ಮ ಐವರು ವಕೀಲರ ತಂಡ ಕೈಲಾದಷ್ಟು ಸಮಾಜ ಸೇವೆ ಮಾಡಲು ನಿರ್ಧರಿಸಿ ಕಾನೂನು ಜಾಗೃತಿ, ಮಾತೃ ಭೂಮಿ ಫೌಂಡೇಶನ್ ಟ್ರಸ್ಟ್ ನಿರ್ಮಾಣ ಮಾಡಿದೆ. ಕೌಟುಂಬಿಕ ಕಲಹ, ಜಮೀನು ವ್ಯಾಜ್ಯಗಳಲ್ಲಿ ನ್ಯಾಯ ಸಿಗದೆ ಅನ್ಯಾಯಕ್ಕೊಳಗಾದ ಬಡವರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವುದು. ಸರ್ಕಾರಿ ಇಲಾಖೆಯಲ್ಲಿ ಸಿಗುವ ಸವಲತ್ತು ಬಗ್ಗೆ ಮಾಹಿತಿ ನೀಡುವುದು ಸೇರಿದಂತೆ ಬಿಡುವಿನ ಸಮಯವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದೇವೆಂದರು.
ಕೊರೊನಾದಿಂದ ಶಾಲೆಗಳು ತೆರೆದಿಲ್ಲ. ನಿರಂತರ ಕಲಿಕೆಗೆ ಅನುಕೂಲವಾಗಲೆಂದು ಸರ್ಕಾರ ವಿದ್ಯಾ ಗಮ ಯೋಜನೆ ರೂಪಿಸಿದೆ. ಹಳ್ಳಿಯ ಜಗಲಿಕಟ್ಟೆ ದೇವಾಲಯ ಜಾಗದಲ್ಲಿ ಶಿಕ್ಷಣ ಕಲಿಯುವ ಮಕ್ಕಳಿಗೆ ಆರೋಗ್ಯದ ದೃಷ್ಟಿಯಿಂದ ಮೂಲಭೂತ ಸೌಕರ್ಯ ಕಲ್ಪಿಸಬೇಕಿದೆ. ಹೀಗಾಗಿ ಮಕ್ಕಳು ಶಿಕ್ಷಣ ಕಲಿಯುವ ಸ್ಥಳದಲ್ಲೇ ಶುದ್ಧ ನೀರು ಸಿಗಬೇಕು ಎನ್ನುವ ದೃಷ್ಟಿಯಿಂದ ವಿದ್ಯುತ್ ರಹಿತ ಶುದ್ಧ ನೀರು ಪೂರೈಸುವ ಯಂತ್ರ ವಿತರಿಸಲಾಗುತ್ತಿದೆ ಎಂದರು.