ಕಾಡಾನೆಗಳ ದಾಳಿಗೆ ಬೆಳೆ ನಾಶ
Team Udayavani, Feb 28, 2019, 11:53 AM IST
ಚನ್ನಪಟ್ಟಣ: ತಾಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ನಾಲ್ಕು ಕಾಡಾನೆಗಳು ದಾಳಿ ನಡೆಸಿ, ರೈತರ ಗೊನೆಭರಿತ ಬಾಳೆ ಬೆಳೆಯನ್ನು ನಾಶಗೊಳಿಸಿವೆ. ಗ್ರಾಮದ ರೈತರಾದ ಕೆ.ರಾಮಯ್ಯ ಅವರ ಎರಡುವರೆ ಎಕರೆ ಬಾಳೆ, ಹುಚ್ಚಮ್ಮ ಅವರ ಎರಡುವರೆ ಎಕರೆ ಬಾಳೆ, ಬಸವೇಗೌಡ ಅವರ ಒಂದುವರೆ ಎಕರೆ ಬಾಳೆ ಬೆಳೆಯನ್ನು ತಿಂದು, ತುಳಿದು ನಾಶ ಮಾಡಿವೆ. ಇನ್ನು ಹಲವು ರೈತರ ಭತ್ತ, ರಾಗಿ ಬೆಳೆಯನ್ನು ಸಹ ನಾಶ ಮಾಡಿವೆ. ಘಟನೆಯಲ್ಲಿ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಗ್ರಾಮದ ಪಕ್ಕದ ಬೆಟ್ಟದಲ್ಲಿ ಆಶ್ರಯ ಪಡೆದಿರುವ ಕಾಡಾನೆಗಳು ರಾತ್ರಿಯ ವೇಳೆಯಲ್ಲಿ ರೈತರ ಬೆಳೆಗಳ ಮೇಲೆ ದಾಳಿ ಮಾಡುತ್ತಿದ್ದು, ಹಲವಾರು ವರ್ಷಗಳಿಂದ ಇದು ಸತತವಾಗಿ ನಡೆಯುತ್ತದೆ. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯ ಮಾಡುತ್ತಿಲ್ಲ. ಇದರ ಬಗ್ಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ರೈತರು ಆರೋಪಿಸಿದರು.
ಸ್ಥಳಕ್ಕೆ ಅರಣ್ಯಾಧಿಕಾರಿ ಮುತ್ತುನಾಯಕ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು. ಆನೆಗಳನ್ನು ಶಾಶ್ವತವಾಗಿ ಕಾಡಿಗೆ ಓಡಿಸುವ ಕಾರ್ಯ ಮಾಡುವಂತೆ ರೈತರು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಒತ್ತಾಯಿಸಿದರು.