ಚಾಲಕನನ್ನು ಥಳಿಸಿ ಪರಾರಿಯಾದ ಆರೋಪಿಗಳ ಬಂಧನ
Team Udayavani, May 31, 2018, 3:45 PM IST
ರಾಮನಗರ: ಬಾಡಿಗೆಗೆಂದು ಕಾರು ತೆಗೆದುಕೊಂಡು ನಂತರ ಚಾಲಕನ ಮೇಲೆ ಹಲ್ಲೆ ನಡೆಸಿ ಕಾರು ಅಪಹರಣ ಮಾಡಿದ್ದ ಐದು ಮಂದಿ ಆರೋಪಿಗಳ ಪೈಕಿ ನಾಲ್ವರನ್ನು ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹಲಗೂರಿನ ಲಿಂಗಾಯತ ಬೀದಿ ನಿವಾಸಿ ಪ್ರಭಾಕರ್ ಪುತ್ರ ಪಿ.ಎನ್ .ಶರತ್
ಕುಮಾರ್, ಕನಕಪುರ ತಾಲೂಕಿನ ತಿಪ್ಪೂರು ಗ್ರಾಮದ ಮರಿಸ್ವಾಮಿ ಪುತ್ರ ಟಿ.ಎಂ.ಶಿವಶೇಖರ, ಕಲ್ಲಿಗೌಡನದೊಡ್ಡಿ
ಗ್ರಾಮದ ಬಸವರಾಜೇಗೌಡ ಪುತ್ರ ಕೆ.ಬಿ.ಕೌಶಿಕ್ ಹಾಗೂ ತಿಪ್ಪೂರು ಗ್ರಾಮದ ನಾಗರಾಜು ಪುತ್ರ ಟಿ.ಎನ್.ಅವಿನಾಶ್
ಬಂಧಿತ ಆರೋಪಿಗಳಾಗಿದ್ದಾರೆ.
ರಾಮನಗರ ಟೌನ್ ಕಾರ್ ಸ್ಟಾಂಡ್ ನಿಂದ ಬಾಡಿಗೆ ನೆಪದಲ್ಲಿ ಇಬ್ಬರು ಅಪರಿಚಿತರು ಕಾರನ್ನು ಬಾಡಿಗೆಗೆ ಪಡೆದುಕೊಂಡು ರಾಮನಗರದಿಂದ ಹೊರಟು ಹಾರೋಹಳ್ಳಿ ಬಳಿಯ ದೊಡ್ಡೊರು ಗ್ರಾಮದ ನಿರ್ಜನ ಪ್ರದೇಶದ ರಸ್ತೆಗೆ ಕರೆದುಕೊಂಡು ಹೋಗಿ ಅಲ್ಲಿ ಮತ್ತೆ ಮೂರು ಅಪರಿಚಿತರು ಕಾರು ಹತ್ತಿಕೊಂಡಿದ್ದಾರೆ.
ಐದೂ ಮಂದಿ ಆರೋಪಿಗಳು ಕಾರಿನ ಚಾಲಕನಿಗೆ ಹೊಡೆದು ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಅದೇ ಕಾರಿಗೆ ಹಾಕಿಕೊಂಡು ಹುಣಸನಹಳ್ಳಿಯ ರಸ್ತೆಗೆ ಕರೆದುಕೊಂಡು ಹೋಗಿ ಬಿಟ್ಟು ಚಾಲಕನ ಬಳಿಯಿದ್ದ ನೋಕಿಯಾ ಮೊಬೈಲ್ ಮತ್ತು ಹಣವನ್ನು ದರೊಡೆ ಮಾಡಿಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ಕಾರಿನ ಚಾಲಕ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸಿಪಿಐ ಪ್ರಕಾಶ್ ಮತ್ತು ಎಸ್ಐ ಕೃಷ್ಣಕುಮಾರ್ ನೇತೃತ್ವದ ತಂಡ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ ಸ್ವಿಫ್ಟ್ಕಾರು ಮತ್ತು ಮೊಬೈಲ್ ಹ್ಯಾಂಡ್ ಶೆಟ್ಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ನಗರದ ಪೊಲೀಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ಬಿ.ರಮೇಶ್ ಮಾಹಿತಿ ನೀಡಿದರು. ಕಾರ್ಯಾಚರಣೆ ನಡೆಸಿದ ತಂಡದಲ್ಲಿ
ಪೊಲೀಸ್ ಮುಖ್ಯ ಪೇದೆ ಕಲ್ಯಾಣ ಕುಮಾರ್, ಅನಂತ ಕುಮಾರ್, ಪೇದೆಗಳಾದ ರಾಜು, ಸಂತೋಷ್ ಕುಮಾರ್, ಬಿ.ಎಸ್ .ಉಳವಿ, ಬೋರೇಗೌಡ ಇದ್ದರು.