ಮಕ್ಕಳ ವಿಕಸನಕ್ಕೆ ಶಿಕ್ಷಣ ಮುಖ್ಯ
Team Udayavani, Oct 15, 2019, 6:08 PM IST
ಚನ್ನಪಟ್ಟಣ: ಮಕ್ಕಳ ವಿಕಸನಕ್ಕೆ ಶಿಕ್ಷಣ ಬಹಳ ಮುಖ್ಯವಾಗಿದೆ. ಶಿಕ್ಷಕರಲ್ಲಿ ಶಿಸ್ತು, ಶ್ರದ್ಧೆ, ಸಮಯ ಪಾಲನೆಯ ಜೊತೆಗೆ ತಾಯ್ತನದ ಗುಣ ಇರಬೇಕು ಎಂದು ನಿವೃತ್ತ ಪ್ರಾಂಶುಪಾಲ ಎ.ಎಲ್. ಶೇಖರ್ ಹೇಳಿದರು.
ಪಟ್ಟಣದ ಚನ್ನಾಂಬಿಕ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಪದವಿ ಪತ್ರ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಪ್ರಸ್ತುತ ಸಮಾಜಕ್ಕೆ ಮೌಲ್ಯ ಯುವ ಶಿಕ್ಷಣ ಅಗತ್ಯವಿದೆ. ಶಿಕ್ಷಕರು ಸಮರ್ಪಣಾ ಮನೋಭಾವ ದಿಂದ ದುಡಿಯಬೇಕು ಎಂದು ತಿಳಿಸಿದರು.
ಮಾನವೀಯ ಗುಣ ಬೆಳೆಸಿ: ಎನ್.ಟಿ.ಟಿ. ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಸಂಪತ್ ಕುಮಾರ್ ಮಾತನಾಡಿ, ಮಕ್ಕಳು ಶಿಕ್ಷಕರನ್ನು ಸುಲಭವಾಗಿ ಅನುಕರಿಸುತ್ತವೆ.
ಮಕ್ಕಳಿಗೆ ಮಾನವೀಯ ಗುಣಗಳನ್ನು ಬೆಳೆಸುವ ಮೂಲಕ ಸಶಕ್ತ ಸಮಾಜ ನಿರ್ಮಾಣ ಸಾಧ್ಯ. ಪಠ್ಯದ ಜೊತೆಗೆ ಕ್ರೀಡೆ ಮತ್ತು ವಿಶೇಷ ಕಾರ್ಯಚಟುವಟಿಕೆಗಳ ಮೂಲಕ ಕಲಿಕೆಯನ್ನು ಸುಲಭಗೊಳಿಸಬೇಕು ಎಂದರು.
ಒತ್ತಡ ಮುಕ್ತ ಕಲಿಕೆಗೆ ಆದ್ಯತೆ ನೀಡಿ: ಸಮಾಜ ಸೇವಕ ರಾಂಪುರ ರಾಜಣ್ಣ ಮಾತನಾಡಿ, ಶಿಕ್ಷಕರು ತಮ್ಮ ಒತ್ತಡಗಳನ್ನು ಬದಿಗಿಟ್ಟು, ನೂತನ ಕಲಿಕಾ ವಿಧಾನಗಳನ್ನು ಅಳವಡಿಸಿಕೊಂಡು ಒತ್ತಡ ಮುಕ್ತ ಕಲಿಕೆಗೆ ವಿಶೇಷ ಆದ್ಯತೆ ನೀಡಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಪುಟ್ಟಸ್ವಾಮಿಗೌಡ ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ವಿಜಯ್ ರಾಂಪುರ, ಜಾನಪದ ಗಾಯಕ ಚೌ.ಪು.ಸ್ವಾಮಿ, ನಂದಿನಿ ಕೋ ಅಪರೇಟಿವ್ ಬ್ಯಾಂಕಿನ ಸಿಇಒ ರಂಗರಾಜಯ್ಯ, ಎನ್ಟಿಟಿ ಪ್ರಾಂಶುಪಾಲ ಎಂ.ಮಲ್ಲೇಶ್, ಸಾಧನ ವಿದ್ಯಾಲಯದ ಮುಖ್ಯ ಶಿಕ್ಷಕ ಡಿ.ರಾಮಕೃಷ್ಣ, ಎನ್.ಟಿ.ಟಿ. ಸಂಯೋಜಕಿ ಶಾಂಭವಿ ಹಾಜರಿದ್ದರು. ಎನ್ಟಿಟಿ ಆಡಳಿತ ನಿರ್ದೇಶಕ ಸಂಪತ್ ಕುಮಾರ್ ಹಾಗೂ ಸಾಹಿತಿ ವಿಜಯ್ ರಾಂಪುರ ಅವರನ್ನು ಸನ್ಮಾನಿಸ ಲಾಯಿತು. 2018-19ನೇ ಸಾಲಿನ ಪ್ರಶಿಕ್ಷಣಾರ್ಥಿಗಳಿಗೆ ಪದವಿ ಪತ್ರ ಪ್ರದಾನ ಮಾಡಲಾಯಿತು.