ನಕಲಿ ಅಧಿಕಾರಿಯ ಅಸಲಿ ಬಣ್ಣ ಬಯಲು
Team Udayavani, Nov 17, 2019, 3:26 PM IST
ರಾಮನಗರ: ಅಧಿಕಾರಿಗಳಿಂದ ಸೆಲ್ಯೂಟ್, ನಮಸ್ಕಾರ ಹಾಗೂ ಊಟೋಪಚಾರದ ಆತಿಥ್ಯ ಸ್ವೀಕರಿಸುತ್ತಾ ಗತ್ತಿನಿಂದ ಐಎಎಸ್ ಅಧಿಕಾರಿಯಾಗಿ ಎಂದು ಫೋಸು ಕೊಟ್ಟು ವಂಚಿಸುತ್ತಿದ್ದ ಶಿವಮೊಗ್ಗ ಜಿಲ್ಲೆಯ ಮೂಲದ ಮಹಮದ್ ಸಲ್ಮಾನ್ ಈಗ ಚನ್ನಪಟ್ಟಣ ಪೊಲೀಸರ ಅತಿಥಿಯಾಗಿದ್ದಾನೆ.
ಮಹಮ್ಮದ್ ಸಲ್ಮಾನ್.ಎಸ್ಗೆ ಇನ್ನು 26 ವರ್ಷ ಶಿವಮೊಗ್ಗ ತಾಲೂಕಿನ ಐನೋರ ಹೋಬಳಿ, ಅಬ್ಬಲುಗೆರೆ ಗ್ರಾಮದ ವಿನೋಭಾ ನಗರ ನಿವಾಸಿಯಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಲಕ್ಕೇನಹಳ್ಳಿ ಸೊಂಡೆಕೊಪ್ಪ ರಸ್ತೆಯ ಮನೆಯೊಂದರಲ್ಲಿ. ತಾನು ಆರ್.ಡಿ.ಪಿ.ಐ ಇಲಾಖೆಯ ಐಎಎಸ್ ಅಧಿಕಾರಿ ಅಂತ ಹೇಳಿಕೊಳ್ಳುತ್ತಿದ್ದ. ನೆಲಮಂಗಲದಲ್ಲಿ ಕರ್ನಾಟಕ ರಾಜ್ಯ ಸಮಗ್ರ ಜನಸ್ಪಂದನಾ ವೇದಿಕೆಯ ಕಚೇರಿ ಸ್ಥಾಪಿಸಿ ರಾಜ್ಯಾಧ್ಯಕ್ಷ ಅಂತ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದ. ಜನರನ್ನು ನಂಬಿಸಲು ಕಾರಿಗೆ ಸರ್ಕಾರಿ ಇಲಾಖೆಯ ಬೋರ್ಡಿನಂತೆ ಕಾಣುವ ಹಸಿರು ಬಣ್ಣದ ವೇದಿಕೆಯ ಹೆಸರಿನ ಬೋರ್ಡು ಸಹ ಸಿಕ್ಕಿಸಿದ್ದ, ಕಾರಿಗೆ ರವಿಕುಮಾರ್ ಎಂಬ ವ್ಯಕ್ತಿಯನ್ನು ಚಾಲಕ ಕಂ ಗನ್ಮ್ಯಾನ್ ಆಗಿ ನೇಮಿಸಿ ಕೊಂಡಿದ್ದ.
ಸಿಕ್ಕಿ ಬಿದ್ದಿದ್ದು ಹೇಗೆ:? ಚನ್ನಪಟ್ಟಣ ತಾಲೂಕು ಬೆಳೆಕೆರೆ ಗ್ರಾಮದಲ್ಲಿ ಸರ್ವೆ ಸಂಖ್ಯೆ 44/ಪಿ6ರ ಪಹಣಿ ತಿದ್ದುಪಡಿ ಮಾಡಿಕೊಡುವಂತೆ ಚನ್ನಪಟ್ಟಣ ತಹಶೀಲ್ದಾರ್ ಬಿ.ಕೆ.ಸುದರ್ಶನ್ ಅವರಿಗೆ ಫೋನು ಮೂಲಕ ತಾಕೀತು ಮಾಡಿದ್ದ. ನ.14ರ ಗುರುವಾರ ರಾತ್ರಿ ಚನ್ನಪಟ್ಟಣ ಐಬಿಯ ಬಳಿ ಈತ ಚಾಲಕ ರವಿಕುಮಾರ್ ಮತ್ತು ಮಂಜು ಎಂಬಾತನೊಂದಿಗೆ ತಹಶೀಲ್ದಾರರನ್ನು ಭೇಟಿ ಮಾಡಿ ಮಾತನಾಡುತ್ತಿದ್ದಾಗ ತಹಸೀಲ್ದಾರರಿಗೆ ಅನುಮಾನ ಬಂದು ನೀವು ಯಾವ ಬ್ಯಾಚ್ ಐಎಎಸ್ ಎಂದು ಕೇಳಿ ಅಂತರ್ಜಾಲದಲ್ಲಿ ಸಲ್ಮಾನ್ನ ಹೆಸರಿಗಾಗಿ ಹುಡುಕಾಡಿದ್ದಾರೆ. ಮಾಹಿತಿ ಸಿಗದಿದ್ದಾಗ ಈತನ ಬಗ್ಗೆ ಅನುಮಾನ ಹೆಚ್ಚಾಗಿದೆ.
ಈ ಬಗ್ಗೆ ಚನ್ನಪಟ್ಟಣ ಪುರ ಠಾಣೆಯ ಎಸ್ ಐ ಕುಮಾರಸ್ವಾಮಿ ಅವರನ್ನು ಎಚ್ಚರಿಸಿದ್ದಾರೆ. ಸ್ಥಳಕ್ಕೆ ಬಂದ ಎಸ್ಐ ಕುಮಾರಸ್ವಾಮಿ ಮತ್ತು ಸಿಬ್ಬಂದಿ ಕಂಡ ನಕಲಿ ಐ ಎ ಎಸ್ ಅಧಿಕಾರಿ ಸಲ್ಮಾನ್ ಮತ್ತು ಸಹಚರರು ಪರಾರಿಯಾಗಿದ್ದಾರೆ.
ಈ ವೇಳೆ ತಹಶೀಲ್ದಾರ್ ಸುದರ್ಶನ್ ನೀಡಿದ ದೂರಿನ ಮೇರೆಗೆ ಹುಡುಕಾಟ ನಡೆಸಿದ ಪೊಲೀಸರಿಗೆ ಸಾತನೂರು ವೃತ್ತದ ಬಳಿ ಇವರ ಕಾರು ನಿಂತಿತ್ತು. ಆದರೆ ಆರೋಪಿಗಳು ಇರಲಿಲ್ಲ. ಕಾರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ತನಿಖೆ ಆರಂಭಿಸಿ ಮೊಹಮ್ಮದ್ ಸಲ್ಮಾನ್, ಈತನ ಬಳಿ ಕಾರು ಚಾಲಕ ಕಂ ಗನ್ ಮ್ಯಾನ್ ಆಗಿದ್ದ ಬಿ.ರವಿ ಈತ ಸರ್ಕಾರಿ ಅಧಿಕಾರಿ ಎಂದು ನಂಬಿ ಪಹಣಿ ತಿದ್ದುಪಡಿಗೆ ಒತ್ತಾಯಿಸಿದ್ದ ಚನ್ನಪಟ್ಟಣ ತಾಲೂಕು ಬೆಳೆಕರೆ ಗ್ರಾಮದ ಬಿ.ಎಸ್. ಮಂಜು ಮತ್ತು ಗೋವಿಂದರಾಜು ಒಟ್ಟು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಣ ವಂಚಿಸುತ್ತಿದ್ದ: ತಾನು ಐಎಎಸ್ ಅಧಿಕಾರಿಗ ಎಂದು ಹೇಳಿಕೊಂಡು ಮಹಮ್ಮದ್ ಸಲ್ಮಾನ್ ಮೈಸೂರು, ಮಂಡ್ಯ, ತುಮಕೂರು, ರಾಮನಗರ, ಚನ್ನಪಟ್ಟಣ, ಮಾಗಡಿ, ಗಂಗಾವತಿ ಹೀಗೆ ಹಲವಾರು ಕಡೆ ಸಂಚರಿಸಿ ಕೆಲಸ ಕೊಡಿಸುವುದಾಗಿ, ಸೈಟು ಕೊಡಿಸುವುದಾಗಿ ಹೇಳಿ ಹಣ ಪೀಕಿ ವಂಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಉರ್ದು ಶಾಲೆಗಳಿಗೆ ಭೇಟಿ ನೋಡಲು ಸುರದ್ರೂಪಿಯಾಗಿ ಸಲ್ಮಾನ್ ಧರಿಸುತ್ತಿದ್ದ ಸೂಟು ಬೂಟಿಗೆ ಮರಳಾದವರೇ ಇಲ್ಲ. ಆರ್ .ಡಿ.ಪಿ.ಐ ಅಧಿಕಾರಿ ಎಂದು ಹೇಳಿಕೊಂಡು ವಿಧಾನಸೌಧ, ಎಂ.ಎಸ್. ಬಿಲ್ಡಿಂಗ್ನಲ್ಲಿರುವ ಹಲವಾರು ಇಲಾಖೆಗಳಿಗೆ ಭೇಟಿ ಕೊಟ್ಟು ಅಲ್ಲಿನ ಅಧಿಕಾರಿಗಳಿಂದ ಕೆಲಸ ಕಾರ್ಯಗಳಿಗೆ ಶಿಫಾರಸ್ಸು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಾಗಡಿ ತಾಲೂಕಿನ ಕುದೂರು ಮುಂತಾದ ಗ್ರಾಮಗಳಲ್ಲಿ ಇರುವ ಅಂಗನವಾಡಿಗಳು ವಿಶೇಷವಾಗಿ ಉರ್ದು ಶಾಲೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡುವುದು. ಶಾಲೆಯನ್ನು ದತ್ತು ಪಡೆದು ಅಭಿವೃದ್ದಿ ಮಾಡುವುದಾಗಿ ಸುಳ್ಳು ಹೇಳಿದ್ದಾನೆ. ಇವನ ಗತ್ತು ನೋಡಿ ನಿಜವೆಂದು ನಂಬಿದ ಶಿಕ್ಷಕರು ಮತ್ತು ಗ್ರಾಮಸ್ಥರು ಕೈಕಟ್ಟಿ ವಿಧೇಯತೆ ತೋರಿಸಿದ್ದರಂತೆ.
ಆರೋಪಿ ಹಿನ್ನೆಲೆ: ಶಿವಮೊಗ್ಗದ ಸಾಧಾರಣ ಕುಟುಂಬವೊಂದರಲ್ಲಿ ಜನಿಸಿದ್ದ ಮೊಹಮದ್ ಸಲ್ಮಾನ್ 2014ರಲ್ಲಿ ಶಿವಮೊಗ್ಗೆ ಜಿಪಂನಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ. ಜಿಪಂಗೆ ಬರುತ್ತಿದ್ದಸಾರ್ವಜನಿಕರಿಗೆ ಸಣ್ಣ ಪುಟ್ಟಣ ಕೆಲಸ ಮಾಡಿಕೊಟ್ಟು ಹಣ ಮಾಡುತ್ತಿದ್ದ. 2016ರಲ್ಲಿ ಬೆಂಗಳೂರು ಸೇರಿದ ಈತನ ಕಾರ್ಯ ವಿಧಾನವೇ ಬದಲಾಗಿ ಹೋಯ್ತು. ಕರ್ನಾಟಕ ರಾಜ್ಯ ಸಮಗ್ರ ಜನ ಸ್ಪಂದನ ವೇದಿಕೆಯ ಹೆಸರಿನಲ್ಲಿ ನಕಲಿ ಸಂಘಟನೆ ಸ್ಥಾಪಿಸಿ ತಾನು ರಾಜ್ಯಾಧ್ಯಕ್ಷ ನೆಂದು ಫೋಸು ಕೊಡುತ್ತಾ ಸರ್ಕಾರಿ ಇಲಾಖೆಗಳಲ್ಲಿ ಅವರಿವರ ಕೆಲಸ ಮಾಡಿಸಿಕೊಡುತ್ತಿದ್ದ. ಒಂದಿಬ್ಬರಿಗೆ ನಿವೇಶನ ಮಾಡಿಸಿ ಕೊಟ್ಟು ನಂಬಿಕೆ ಹುಟ್ಟಿಸಿದ್ದ. ಇದೇ ವೇಳೆ ತಾನು ಅಧಿಕಾರಿ ಅಂತಲೂ ನಂಬಿಸಲಾರಂಭಿಸಿದ್ದ. ಕೆಲಸ ಕೊಡಿಸುವುದಾಗಿ, ಸೈಟು ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಲಾರಂಭಿಸಿದ್ದ.
ಪೊಲೀಸರಿಗೆ ಸಿಕ್ಕಿದ್ದೇನು:? ನಕಲಿ ಐ.ಎ.ಎಸ್ ಅಧಿಕಾರಿ ಆರೋಪದ ಮೇಲೆ ಬಂಧನದಲ್ಲಿರುವ ಮಹಮದ್ ಸಲ್ಮಾನ್ ಬಳಿ ಪೊಲೀಸರು ಇನ್ನೋವ ಕಾರು, ಲ್ಯಾಪ್ ಟಾಪ್ಗ್ಳು, ಕ್ಯಾಮರಾ, ಮೊಬೈಲ್ಗಳು, ಪೊಲೀಸ್ ಲಾಠಿ, ಪೊಲೀಸ್ ಕ್ಯಾಪ್, ಕೆಲವು ರಬ್ಬರ್ ಸ್ಟಾಂಪ್ಗ್ಳು, ಬೇರೆ ಬೇರೆ ವ್ಯಕ್ತಿಗಳ ಆಧಾರ್ ಕಾರ್ಡುಗಳು, ಸರ್ಕಾರಿ ದಾಖಲೆ ಪತ್ರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿಎಸ್ಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.
ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಚನ್ನಪಟ್ಟಣ ಉಪವಿಭಾಗದ ಡಿಐಎಸ್ಪಿ ಪಿ.ಕೆ.ರಾಮರಾಜನ್, ವೃತ್ತ ನಿರೀಕ್ಷಕ ಗೋವಿಂದ್ ರಾಜು, ಪಿಎಸ್ಐ ಕುಮಾರಸ್ವಾಮಿ, ಸಿಬಂದ್ದಿ ಶಿವಲಿಂಗೇಗೌಡ, ದಿನೇಶ್, ರವಿ, ಅಕ್ರಮ್ ಖಾನ್,… ರಮೇಶ್, ಅನೀಲ ಕುಮಾರ್, ಸಂತೋಷ್, ಸುನೀಲ್ ಶ್ರಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ