ಸರ್ಕಾರದ ವಿರುದ್ಧ ರೈತರ ಆಕ್ರೋಶ
ಪಂಪ್ಸೆಟ್ಗಳಿಗೆ ವಿದ್ಯುತ್ ಮೀಟರ್ ಅಳವಡಿಕೆಗೆ ವಿರೋಧ ; ಕೃಷಿ ತಿದ್ದುಪಡಿ ಕಾಯ್ದೆ ರದ್ದತಿಗೆ ಒತ್ತಾಯ
Team Udayavani, Aug 11, 2021, 5:55 PM IST
ರಾಮನಗರ: ವಿದ್ಯುತ್ ಸರಬರಾಜು ಖಾಸಗೀಕರಣ ಮತ್ತು ರೈತರ ಬೋರ್ವೆಲ್ ಮೋಟಾರ್ಗಳಿಗೆ ವಿದ್ಯುತ್ ಮೀಟರ್ ಅಳವಡಿಸುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಸರ್ಕರಿ ಕಚೇರಿಗಳ ಸಂಕಿರ್ಣದ ಆವರಣದಲ್ಲಿ ಧರಣಿ ಕುಳಿತ ರೈತರು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಕ್ಷೇತ್ರಕ್ಕೆ ಮಾರಕವಾಗುವ ತಿದ್ದುಪಡಿ ಕಾಯ್ದೆಗಳ ಜಾರಿಯಲ್ಲಿ ವಿದ್ಯುತ್ ಕಾಯ್ದೆಯೂ ಒಂದು. ರೈತರು ಮಾತ್ರವಲ್ಲದೆ ಸಾಮಾನ್ಯ ಬಡವರಿಗೂ ವಿದ್ಯುತ್ ಖಾಸಗೀಕರಣ ಮಾರಕವಾಗಲಿದೆ.ವಿದ್ಯುತ್ ಖಾಸಗೀಕರಣ ಮಸೂದೆಯನ್ನು ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು,ಇದಕ್ಕೆಕೃಷಿಕರ ವಿರೋಧವಿದೆಎಂದು ಪ್ರತಿಭಟನಾಕಾರರು ತಿಳಿಸಿದರು.
ಈ ಹಿಂದೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಇದೇ ರೀತಿಯ ಖಾಸಗೀಕರಣ ಕಾಯ್ದೆ ತರಲು ಮುಂದಾದಾಗ ರೈತರು
ಮತ್ತು ಜನರ ವಿರೋಧ ವ್ಯಕ್ತಪಡಿಸಿದ್ದರು. ತದ ನಂತರ ಅವರು ಹಿಂದೆ ಸರಿದಿದ್ದು ಇತಿಹಾಸ. ಈಗ ಇಂತಹದ್ದ ತಪ್ಪನ್ನುಕೇಂದ್ರ ಸರ್ಕಾರ ಮಾಡುತ್ತಿದ್ದು, ಅದೇ ರೀತಿಯ ಪ್ರತಿಭಟನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಏರಿಳಿಕೆಯೊಂದಿಗೆ ವಹಿವಾಟು ಅಂತ್ಯ
ನೀರಾವರಿ ಪಂಪ್ಸೆಟ್ಗೂ ಮೀಟರ್: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಎಚ್.ಬಿ. ಚಂದ್ರಶೇಖರ್ ಮಾತನಾಡಿ, ವಿದ್ಯುತ್ ಖಾಸಗೀಕರಣ ಬಿಲ್ ಒಪ್ಪಿಗೆಯಾದರೆ, ಕಾನೂನು ಮಾನ್ಯತೆ ಪಡೆಯುತ್ತದೆ . ರೈತರ ನೀರಾವರಿ ಪಂಪ್ ಸೆಟ್ಗಳಿಗೂ ಪ್ರಿಪೇಯ್ಡ ಸ್ಮಾರ್ಟ್ ಮೀಟರ್ಗಳು ಅಳವಡಿಕೆಯಾಗುತ್ತವೆ. ಅಲ್ಲದೆ, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಕುಡಿಯುವ ನೀರಿನ ಯೋಜನೆಗಳ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆಯಾಗುತ್ತದೆ. ಇದು ಬಡವರಿಗೆ ಮತ್ತು ರೈತರಿಗೆ ಮತ್ತಷ್ಟು ಹೊರೆಯಾಗಲಿದೆ ಎಂದರು.
ತಿಂಗಳಿಗೆ 20-30 ಸಾವಿರ ವಿದ್ಯುತ್ ಬಿಲ್ ಕಟ್ಟಲಾಗದೆ, ವಿದ್ಯುತ್ ಕಂಪೆನಿಗಳ ಕಾಟಕ್ಕೆ ಹೆದರಿ ಸಾವಿನ ಹಾದಿ ತುಳಿಯುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಸರ್ಕಾರ ವಿದ್ಯುತ್ ಖಾಸಗೀಕರಣ ಬಿಲ್ ಮಂಡಿಸಬಾರದು ಎಂದು ಆಗ್ರಹಿಸಿದರು.
ಅವಕಾಶ ನೀಡಬೇಡಿ: ರೈತ ಮುಖಂಡ ಬೈರೇಗೌಡ ಮಾತನಾಡಿ,ಕೇಂದ್ರ ಸರ್ಕಾರ ಈಗಾಗಲೇ ಬಿಎಸ್ ಎನ್ಎಲ್, ರೈಲ್ವೆ, ಏರ್ ಇಂಡಿಯಾ ಸೇರಿದಂತೆ ಹಲವಾರು ಸರ್ಕಾರಿ ಸ್ವಾಮ್ಯದ ಕಂಪೆನಿಗಳನ್ನು ಖಾಸಗೀಯವರಿಗೆ ಮಾರಾಟ ಮಾಡಿದೆ. ಈಗ ವಿದ್ಯುತ್ ಇಲಾಖೆಯನ್ನು ಮಾರಾಟ ಮಾಡಲು ಹೊರಟಿದೆ. ಇದಕ್ಕೆ ವಿರೋಧ ಪಕ್ಷಗಳು ಅವಕಾಶ ನೀಡಬಾರದು ಎಂದು ಮನವಿ ಮಾಡಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಅನುಸೂಯಮ್ಮ, ಪದಾಧಿಕಾರಿಗಳಾದ ರಮೇಶ್, ಗೋವಿಂದ, ಅನಂತರಾಮು, ಸೀಬೆಕಟ್ಟೆ ಕೃಷ್ಣಪ್ಪ, ಎಂ.ಕೆ.ಗಂಗಾಧರಯ್ಯ, ಅಮಿರ್ ಜಾನ್, ಶಿವರುದ್ರಯ್ಯ, ಗಿರೀಶ್ ಹಾಜರಿದ್ದರು.