ತಿದ್ದುಪಡಿಗಳ ವಿರುದ್ಧ ಹೋರಾಡಿ: ಕೋಡಿಹಳ್ಳಿ
Team Udayavani, Sep 2, 2020, 2:09 PM IST
ರಾಮನಗರ: ಕೋವಿಡ್-19 ಲಾಕ್ಡೌನ್ ವೇಳೆರಾಜ್ಯ ಸರ್ಕಾರ ಕೆಲವು ರೈತ ವಿರೋಧಿ ಕಾಯ್ದೆಗಳಿಗೆ ತಿದ್ದುಪಡಿ ತಂದಿದ್ದು ಇವುಗಳ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ನಗರದ ಎಪಿಎಂಸಿ ಸಭಾಂಗಣದಲ್ಲಿ ಇತ್ತೀಚೆಗೆ ನಿಧನರಾದ ಜಿಲ್ಲಾ ರೈತ ಸಂಘದ ಅಧ್ಯಕ್ಷರಾಗಿದ್ದ ಕೆ.ಎಸ್.ಲಕ್ಷ್ಮಣ ಸ್ವಾಮಿ ಅವರ ಶ್ರದ್ಧಾಂಜಲಿ, ವಿವಿಧ ವಿಷಯಗಳ ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭೂ ಸುಧಾರಣಾ ಕಾಯ್ದೆ, ಭೂ ಸ್ವಾಧೀನ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆಗಳಿಗೆ ಕೇಂದ್ರ-ರಾಜ್ಯ ಸರ್ಕಾರಗಳು ತಿದ್ದುಪಡಿ ತಂದಿವೆ. ಇನ್ನೊಂದೆಡೆ ಸೋಂಕಿನಿಂದಾಗಿ ಜನ ಜೀವನ ಅಸ್ತ್ಯವಸ್ತ್ಯವಾಗಿದೆ. ಈ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿ ರೈತ ಸಮುದಾಯದ ವಿರೋಧಿಯಾಗಿದ್ದು ಬಹುರಾಷ್ಟ್ರೀಯ ಕಂಪನಿಗಳಿಗೆ ಭೂಮಿ ಕಬಳಿಸುವ ಅವಕಾಶ ಕಲ್ಪಿಸಿಕೊಟ್ಟಂತಾಗಿದೆ ಎಂದರು.
ಇದೇ ವೇಳೆ ಜಿಲ್ಲಾ ರೈತ ಸಂಘದ ಅಧ್ಯಕ್ಷರಾಗಿದ್ದ ಕೆ.ಎಸ್.ಲಕ್ಷ್ಮಣಸ್ವಾಮಿ ಅವರ ಒಡೆನಾಟವನ್ನು ಕೋಡಿಹಳ್ಳಿ ಚಂದ್ರಶೇಖರ್ ಸ್ಮರಿಸಿದರು. ರಾಜ್ಯ ರೈತ ಸಂಘದ ಉಪಾಧ್ಯಕ್ಷೆ ಅನಸೂಯಮ್ಮ ಮಾತನಾಡಿ, ತಿದ್ದುಪಡಿ ಕಾಯ್ದೆಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವ ಅಗತ್ಯವಿದೆ ಎಂದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ಪ, ಎಪಿಎಂಸಿ ಅಧ್ಯಕ್ಷ ರಮೇಶ್, ಕಾರ್ಮಿಕ ಮುಖಂಡ ಪ್ರಸನ್ನ ಮಾತನಾಡಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಬೈರೇಗೌಡ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ರೈತ ಪ್ರಮುಖರಾದ ಆನಂದ ಪಟೇಲ್, ಚಂದ್ರಶೇಖರ್, ಶ್ರೀನಿವಾಸ್, ನಾಗಮ್ಮ, ಕೃಷ್ಣಪ್ಪ, ಗೋವಿಂದರಾಜು, ಅನಂತರಾಮು, ರಮೇಶ್, ಲಕ್ಷ್ಮಣಸ್ವಾಮಿ ಅವರ ಪತ್ನಿ ಗೌರಮ್ಮ ಮತ್ತಿತರರಿದ್ದರು.