ಕಾಡಾನೆ ದಾಳಿ: ಭತ್ತ, ರಾಗಿ ಬೆಳೆ ನಾಶ
Team Udayavani, May 12, 2018, 3:42 PM IST
ಚನ್ನಪಟ್ಟಣ: ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಕಾಡಾನೆಗಳು ರೈತರ ಬೆಳೆಗಳನ್ನು ನಾಶ ಮಾಡಿವೆ. ಕಳೆದ ಒಂದು ವಾರದಿಂದ ಕಾಡಾನೆಗಳು ಸತತವಾಗಿ ದಾಳಿ ನಡೆಸುತ್ತಿದ್ದು, ರೈತರ ಭತ್ತ, ರಾಗಿ, ಮಾವು ಬೆಳೆಗಳನ್ನು ನಾಶಪಡಿಸುತ್ತಿವೆ.
ಗ್ರಾಮದ ರೈತರಾದ ತಾಯಮ್ಮ, ಲೋಕೇಶ್, ಶಿವಮಲ್ಲಣ್ಣ, ಬಿ.ಎಂ. ಕೃಷ್ಣಪ್ಪ, ಅಂಗಡಿ ಪ್ರಮೋದ್, ಕೃಷ್ಣಪ್ಪ ಶಂಕರೇಗೌಡ, ತಿಮ್ಮೇಗೌಡ, ಅಂಗಡಿ ರಾಮಣ್ಣ ಅವರ ಭತ್ತ ಹಾಗೂ ರಾಗಿ ಬೆಳೆ ಮತ್ತು ಹಲವು ರೈತರ ಮಾವು ಬೆಳೆಗೆ ಹಾನಿಯಾಗಿವೆ.
ಪಕ್ಕದ ತೆಂಗಿನಕಲ್ಲು ಅರಣ್ಯ ಪ್ರದೇಶ ದಿಂದ ಆನೆಗಳು ಬಂದಿರಬಹುದು ಎಂದು ಶಂಕಿಸಲಾಗಿದ್ದು, ಇವು ಕಳೆದ
ಒಂದು ತಿಂಗಳಿನಿಂದ ಪಟ್ಟದ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟು ರಾತ್ರಿ ವೇಳೆ ರೈತರ ಬೆಳೆಗಳ ಮೇಲೆ ದಾಳಿ ನಡೆಸುತ್ತಿವೆ ಎಂದು ರೈತರು ಆರೋಪಿಸಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಪರಿಹಾರವನ್ನೂ ನೀಡುತ್ತಿಲ್ಲ ಎಂದು ಗ್ರಾಮದ ಮುಖಂಡ ಬಿ.ಜೆ.ಲೋಕೇಶ್ ಆರೋಪಿಸಿದ್ದಾರೆ. ಹಾಗೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಕಾಡಿಗೆ ಓಡಿಸಬೇಕು, ಸತತವಾಗಿ ನಷ್ಟ ಅನುಭಸುತ್ತಿರುವ ರೈತರಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ಗ್ರಾಮದ ಮುಖಂಡ ಜಿ.ರಾಘವೇಂದ್ರ ಒತ್ತಾಯಿಸಿದ್ದಾರೆ.