ಕನಕಪುರದಲ್ಲಿ ಅದ್ಧೂರಿ ಸಂಭ್ರಮ
Team Udayavani, Dec 10, 2019, 4:49 PM IST
ಕನಕಪುರ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಹನುಮ ಜಯಂತಿ ಅಂಗವಾಗಿ ನಗರದ ಹನುಮ ದೇವಾಲಯಗಳಲ್ಲಿ ವಿಶೇಷ ಪೂಜೆ ಅನ್ನಸಂತರ್ಪಣೆ ಏರ್ಪಡಿಸಿ ಅದ್ಧೂರಿಯಾಗಿ ಹನುಮ ಜಯಂತಿ ಆಚರಿಸಲಾಯಿತು.
ನಗರದ ಬಸ್ ನಿಲ್ದಾಣದ ಬಳಿ ಇರುವ ಮತ್ತು ಅರ್ಕಾವತಿ ವೃತ್ತದ ಬಳಿಯ ಹನುಮ ದೇವಾಲಯಗಳಲ್ಲಿ ಹನುಮ ಜಯಂತಿ ಅಂಗವಾಗಿ ಬೆಳಗ್ಗಿನಿಂದಲೇ ಸುಪ್ರಭಾತ, ಮಹಾಗಣಪತಿ ಪೂಜೆ, ಪುಣ್ಯಾಹ, ಭಗವಾನ್ ವಾಸುದೇವ ಪುಣ್ಯಾಹ, ಹೋಮ, ಪಂಚಾಮೃತ ಅಭಿಷೇಕ, ನಂತರ ಮಹಾಮಂಗಳಾರತಿ ನಡೆಯಿತು ಹನುಮ ಜಯಂತಿ ಅಂಗವಾಗಿ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ಹನುಮ ದೇವಾಲಯಕ್ಕೆ ಸಾವಿರಾರು ಮಂದಿ ಭಕ್ತಾದಿಗಳು ಭೇಟಿ ನೀಡಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಅರ್ಕಾವತಿ ವೃತ್ತದ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಅದ್ಧೂರಿ ರಾಜ್ಯೋತ್ಸವ ಆಚರಿಸಲಾಯಿತು. ಹನುಮ ಜಯಂತಿ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪ್ರತಿ ವರ್ಷ ಹನುಮ ಜಯಂತಿ ಆಚರಣೆಯಲ್ಲಿ ಕಾರು ಚಾಲಕರು ಮತ್ತು ಮಾಲೀಕರು, ಗೂಡ್ಸ್ ಗಾಡಿ ಚಾಲಕರು ಮತ್ತು ಮಾಲೀಕರು, ಆಟೋ ಚಾಲಕರು ಮತ್ತು ಮಾಲೀಕರು, ಖಾಸಗಿ ಬಸ್ ಮಾಲಿಕರು, ಎಪಿಎಂಸಿ ವರ್ತಕರು, ಸೇರಿದಂತೆ ನಗರದ ಸಾರ್ವಜನಿಕರು ಹನುಮ ಜಯಂತಿ ಆಚರಣೆಯಲ್ಲಿ ಭಾಗವಹಿಸಿದರು.