ಇತಿಹಾಸ ಪುಟ ಸೇರಿದ ಶತಮಾನದ ಶಾಲೆ
Team Udayavani, Nov 29, 2019, 5:11 PM IST
ರಾಮನಗರ: ಶತಮಾನ ಕಂಡಿರುವ ನಗರದ ಜಿ. ಕೆ.ಬಿ.ಎಂ.ಎಸ್ (ಗೌರ್ನಮೆಂಟ್ ಕನ್ನಡ ಬಾಯ್ಸ ಮಾಡೆಲ್ ಸ್ಕೂಲ್) ಶಾಲೆಯ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಲಾಗಿದ್ದು, 4.30 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರೆವೇರಲಿದೆ.
ಶಿಥಿಲವಾಗುತ್ತಿದ್ದ ಜಿ.ಕೆ.ಬಿ.ಎಂ.ಎಸ್ ಶಾಲಾ ಕಟ್ಟಡದ ದುರಸ್ತಿ ಸಾಧ್ಯವಿಲ್ಲದ ಕಾರಣದಿಂದ ನೂತನ ಕಟ್ಟಡ ನಿರ್ಮಾಣ ಅನಿವಾರ್ಯವಾಗಿತ್ತು.ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ನೂತನ ಕಟ್ಟಡ ನಿರ್ಮಿಸಿಕೊಡಲು ಮುಂದಾಗಿರುವುದರಿಂದ ಇಡೀ ಕಟ್ಟಡ ನೆಲಸಮವಾಗಿದೆ. ಆಂಗ್ಲರ ಆಡಳಿತದ ಕುರುಹಾಗಿ ಇದ್ದ ತಾಲೂಕಿನ ಪ್ರಥಮ ಆಂಗ್ಲ ಶಾಲೆ ನಂತರ ತಾಲೂಕಿನ ಪ್ರಥಮ ಕನ್ನಡ ಮಾಧ್ಯಮ ಶಾಲೆ ನಡೆಯುತ್ತಿದ್ದ ಕಟ್ಟಡ ಇದೀಗ ಇತಿಹಾಸದ ಪುಟ ಸೇರಿದೆ.
ಇತಿಹಾಸ: ಆಂಗ್ಲರ ಆಳ್ವಿಕೆಯ ವೇಳೆ ಬ್ರಿಟೀಷ್ಅಧಿಕಾರಿಗಳು ತಂಗಲು ಒಂದು ಕೊಠಡಿ ಮತ್ತು ಪ್ರಾರ್ಥನಾ ಮಂದಿರವನ್ನು ನಿರ್ಮಿಸಿಕೊಂಡಿದ್ದರು. 1893ರಲ್ಲಿ ಇದೇ ಕಟ್ಟಡದಲ್ಲಿ ದಿ ವೆಸ್ಲಿಯನ್ನ ಮಿಷನ್ ಏಡೆಡ್ ಇಂಗ್ಲೀಷ್ ಸ್ಕೂಲ್ ಎಂಬ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಲಾಗಿತ್ತು.
1924ರಲ್ಲಿ ಈ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ತರಗತಿಗಳು ಆರಂಭವಾಗಿ ವೆಸ್ಲಿಯನ್ ಮಿಡಲ್ ಸ್ಕೂಲ್ ಎಂಬು ಮರು ನಾಮಕರಣದೊಂದಿಗೆ ಮುಂದುವರೆಯಿತು. 1931ರಲ್ಲಿ ವೆಸ್ಲಿಯನ್ ಮಿಷನ್ ಕನ್ನಡ ಸ್ಕೂಲ್ ಪರಿವರ್ತನೆಯಾಯಿತು. ಕಾಲ ಉರುಳಿದಂತೆ ಮೆಥೋಡಿಯನ್ ಮಿಷನ್ ಸೊಸೈಟಿ ಎಂಬ ಸಂಘಟನೆ ಈ ಶಾಲೆಯನ್ನು ನಿರ್ವಹಣೆ ಮಾಡಿತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಪ್ರಾರ್ಥನ ಮಂದಿರದ ಸುತ್ತ ಇನ್ನಷ್ಟು ಕೊಠಡಿಗಳನ್ನು ನಿರ್ಮಿಸಲಾಯಿತು. 1941ರಲ್ಲಿ ಸ್ಥಳೀಯ ಆಡಳಿತ ಈ ಶಾಲೆಯನ್ನು ವಹಿಸಿಕೊಂಡು ನಿರ್ವಹಿಸಲಾರಂಭಿಸಿದ ನಂತರ ಸರ್ಕಾರಿ ಕನ್ನಡ ಬಾಲಕರ ಮಾದರಿ ಶಾಲೆ (ಜಿ.ಕೆ.ಬಿ.ಎಂ.ಎಸ್) ಎಂದು ಪುನರ್ ನಾಮಕರಣಗೊಂಡಿತು.
ಇತಿಹಾಸದ ಪುಟ ಸೇರಿದ ಕಟ್ಟಡ:100ಕ್ಕೂ ಹೆಚ್ಚು ವರ್ಷಗಳ ಕಾಲ ಇತಿಹಾಸವಿರುವ ಕಟ್ಟಡ ಇದೀಗ ಇತಿಹಾಸದ ಪುಟ ಸೇರಿದೆ. ಹಳೇ ಕಾಲದ ಚರ್ಚ್ ಮಾದರಿಯಲ್ಲೇ ಗೋಚರಿಸುತ್ತಿದ್ದ ಈ ಕಟ್ಟಡದಲ್ಲಿನಡೆಯುತ್ತಿದ್ದ ಸರ್ಕಾರಿ ಶಾಲೆಯಲ್ಲಿ ಮಾಜಿ ಸಿಎಂ ದಿ. ಕೆಂಗಲ್ ಹನುಮಂತಯ್ಯ, ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದ ಸಿ.ಡಿ.ನರಸಿಂಹಯ್ಯ, ದಿ. ಐಎಎಸ್ ಅಧಿಕಾರಿ ಬಿ.ಪಾರ್ಥ ಸಾರಥಿ, ಜಿ.ವಿ.ಕೆ. ರಾವ್ ಮುಂತಾದ ಖ್ಯಾತನಾಮರು ಈ ಶಾಲೆಯಲ್ಲಿ ಪ್ರಾಥಮಿಕ ಹಂತದ ವಿದ್ಯಾಭ್ಯಾಸ ಪಡೆದಕೊಂಡಿದ್ದಾರೆ. ಶಾಲೆಯ ಕಟ್ಟಡ ಶಿಥಿಲವಾಗಿತ್ತು. ನೂತನ ಕಟ್ಟಡ ನಿರ್ಮಾಣ ಅನಿವಾರ್ಯವಾಗಿತ್ತು.
ಈ ಬಗ್ಗೆ 2018ರ ನವೆಂಬರ್ನಲ್ಲಿ ಶತಮಾನ ಕಂಡ ಶಾಲೆಗೆ ದುರಸ್ತಿ ಅಗತ್ಯ ಎಂಬ ಲೇಖನ ಉದಯವಾಣಿಯಲ್ಲಿ ಪ್ರಕಟವಾಗಿತ್ತು. ಈ ಬಗ್ಗೆ ಸಾರ್ವಜನಿಕರು ಸಹ ಸರ್ಕಾರದ ಗಮನ ಸೆಳೆದಿದ್ದರು. ಶಾಸಕಿ ಅನಿತಾ ಕುಮಾರ ಸ್ವಾಮಿಯವರು ದುರಸ್ತಿ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದರು. ನಂತರ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ತನ್ನ 2019-20ನೇ ಸಾಲಿನ ಸಿ.ಎಸ್.ಆರ್. ನಿಧಿಯಡಿಯಲ್ಲಿ ನೂತನಶಾಲಾ ಕಟ್ಟಡವನ್ನು ನಿರ್ಮಿಸಿಕೊಡಲು ಒಪ್ಪಿಗೆ ಸೂಚಿಸಿದ್ದು, ಟೊಯೋಟಾ ಕಂಪನಿಯ ಅಧಿಕಾರಿಗಳ ಮನವೊಲಿಸಲು ತಾಪಂ ಅಧ್ಯಕ್ಷ ಗಾಣಕಲ್ ನಟರಾಜ್ ಹೆಚ್ಚು ಶ್ರಮವಹಿಸಿದ್ದಾರೆ.
ನೂತನ ಕಟ್ಟಡದಲ್ಲಿ ಏನಿರಲಿದೆ?: 2019-20ರ ಸಿಎಸ್.ಆರ್. ಕಾರ್ಯಕ್ರಮದಡಿ ಟೊಯೋಟಾ ಮೋಟಾರ್ ಕಂಪನಿ ಎರಡು ಮಹಡಿಗಳ ಕಟ್ಟಡವನ್ನು ನಿರ್ಮಿಸುತ್ತಿದೆ. 6222 ಚದರಡಿಯ ಕೆಳ ಅಂತಸ್ತು ಮತ್ತು 4776 ಚದರಡಿಯ ಮೊದಲ ಅಂತಸ್ತಿನ ಕಟ್ಟಡ ನಿರ್ಮಿಸಲು ಮುಂದಾಗಿದೆ. ಒಂದೊಂದು ಕೊಠಡಿ
ಯಲ್ಲೂ ಸುಮಾರು 50-60 ವಿದ್ಯಾರ್ಥಿಗಳು ಕೂರ ಬಹುದಾದ 8 ಬೋಧನಾ ಕೊಠಡಿಗಳು, ಮುಖ್ಯ ಶಿಕ್ಷಕರ/ಶಿಕ್ಷಕರ ಕೊಠಡಿ, ಗ್ರಂಥಾಲಯ, ಪ್ರಯೋಗಾಲಯ, ಗಣಕ ಯಂತ್ರಗಳ ಕೊಠಡಿ, ಕ್ರೀಡಾ ಕೊಠಡಿ, ಅಡುಗೆ ಮನೆ, ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣವಾಗಲಿದೆ. ಶಾಲೆಯ ಮುಂಭಾಗ ವಿಶಾಲ ಆಟದ ಮೈದಾನವೂ ಲಭ್ಯವಾಗಲಿದೆ.
ವಿಳಂಬ ಧೋರಣೆ! ಯೋಜನೆ ಕೈಬಿಟ್ಟಿದ್ದ ಟೊಯೋಟಾ!: ಕಳೆದ ಮಾರ್ಚ್ನಲ್ಲಿ ನೂತನ ಕಟ್ಟಡ ನಿರ್ಮಿಸಿಕೊಡುವಂತೆ ಟೊಯೋಟಾಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸರ್ಕಾರದ ಅನುಮತಿ ನಿಧಾನವಾಗಿದ್ದರಿಂದ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ವಿಳಂಬವಾಗಿದೆ. 8ನೇ ನವೆಂಬರ್ 2019ರ ವೇಳೆಗೆಕಟ್ಟಡ ಕೆಡವಿ ಕೊಡುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೇಳಿತ್ತು. ಆದರೆ 8ನೇ ತಾರೀಖು ಟೊಯೋಟಾ ಅಧಿಕಾರಿಗಳು ಇಲ್ಲಿಗೆ ಬಂದಾಗ ಕಟ್ಟಡ ಕೆಡವಿರಲಿಲ್ಲ. ನವೆಂಬರ್ 14ರವರೆಗೆ ಅವಕಾಶವನ್ನು ಜಿಲ್ಲಾ ಪಂಚಾಯ್ತಿ ಸಿಇಒ, ಡಿಡಿಪಿಐ ಅಧಿಕಾರಿಗಳು ಕೋರಿದ್ದರು.
ಆದರೆ ನವೆಂಬರ್ 19ರಂದು ಕೂಡ ಕಟ್ಟಡ ಕಡೆವಿರಲಿಲ್ಲ. ಹೀಗಾಗಿ ಅದೇ ದಿನ ಪತ್ರ ಬರೆದ ಟೊಯೋಟಾದ ಜನರಲ್ ಮ್ಯಾನೇಜರ್ ಕೆ.ವಿ.ರಾಜೇಂದ್ರ ಹೆಗ್ಡೆ ಮಾರ್ಚ್ 2020ರ ವೇಳೆಗೆ ಸಿ.ಎಸ್.ಆರ್.ನಿಧಿಯನ್ನು ಬಳಕೆ ಮಾಡಬೇಕಾಗಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಸದರಿ ಕಟ್ಟಡ ನಿರ್ಮಾಣ ಕೈಬಿಡುತ್ತಿರುವುದಾಗಿ ಖಡಕ್ ಆಗಿ ಪತ್ರ ಬರೆದಿದ್ದರು. ಶಾಸಕಿ ಅನಿತಾ ಕುಮಾರಸ್ವಾಮಿ ಮತ್ತು ತಾಪಂ ಅಧ್ಯಕ್ಷ ಗಾಣಕಲ್ ನಟರಾಜ್ ಅವರು ಟೊಯೋಟಾ ಅಧಿಕಾರಿಗಳ ಮನವೊಲಿಸಿ ಇದೀಗ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
-ಬಿ.ವಿ.ಸೂರ್ಯ ಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ