ಬೃಹತ್ ಮರಗಳ ಹನನ: ಪರಿಸರ ಪ್ರೇಮಿಗಳ ಆಕ್ರೋಶ
ಸಾರ್ವಜನಿಕರು, ವಾಹನ ಸವಾರರ ಪರದಾಟ ಕರೆಂಟ್ ಇಲ್ಲದೇ ಕುಡಿಯುವ ನೀರಿಗಾಗಿ ಪರದಾಟ
Team Udayavani, Sep 23, 2021, 6:35 PM IST
ಕುದೂರು: ಒಂದೆಡೆ ಕುಡಿಯುವ ನೀರಿಗಾಗಿ ಜನ ಜಾನುವಾರುಗಳು ತ್ತತ್ತರಿಸುತ್ತಿದ್ದರೆ. ಇನ್ನೊಂದೆಡೆ ರೈತರು ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ. ಇವೆರಡರ ಮಧ್ಯೆ ಮಳೆ, ಪ್ರಕೃತಿ ಸಮತೋಲನ ಕಾಪಾಡುವುದಕ್ಕೆ ಇದ್ದ ಬೃಹತ್ ಮರಗಳ ಹನನವಾಗಿದೆ. ಮರಗಳ ಮಾರಣ ಹೋಮದಿಂದ ಕುದೂರು ರಸ್ತೆಯ ಅಂದ ಹಾಳಾಗಿದೆ. ರಸ್ತೆಯ ಪಕ್ಕದಲ್ಲಿ ಹಸಿರ ಸಿರಿಯಂತೆ ಬೆಳೆದು ನಿಂತಿದ್ದ ರೈಟ್ರೀ ಮರಗಳು ಗರಗಸಕ್ಕೆ ಆಹುತಿಯಾಗಿ ಧರೆಗುರುಳುತ್ತಿರುವುದು ಪರಿಸರ ಪ್ರೇಮಿಗಳಿಗೆ ಬೇಸರ ತರಿಸಿದೆ.
ಶಾಲೆ ಮಕ್ಕಳ ಪರದಾಟ: ಬಸ್ ನಿಲ್ದಾಣದ ಪಕ್ಕದಲ್ಲಿರುವ ಬೃಹತ್ ಮರಗಳನ್ನು ಕಡಿದಿದ್ದು, ರಸ್ತೆ ಮಧ್ಯೆ ಹಾಕಿರುವುದರಿಂದ ಸಾರ್ವಜನಿಕರಿಗೆ ಮತ್ತು ಶಾಲೆ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ. ವ್ಯಾಪಾರಸ್ಥರಿಗೂ ತೊಡಕಾಗಿದೆ. ರಸ್ತೆ ಮಧ್ಯೆ ಇರುವ ಮರದ ಕೊಂಬೆಗಳನ್ನು ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಬೇಕಿದೆ.
ನೀರಿಗಾಗಿ ಪರದಾಟ: ಮೂರು ದಿನಗಳಿಂದ ಮರಕಡಿಯುವ ಸಲುವಾಗಿ ವಿದ್ಯುತ್ ಕಡಿತಗೊಳಿಸಿದ್ದು, ಸಾರ್ವಜನಿಕರು ಕುಡಿಯುವ ನೀರಿಗಾಗಿ ಕ್ಯೂ ನಿಂತು ಪರದಾಡಬೇಕಿದೆ. ಇದೇ ಸಮಯದಲ್ಲಿ ಬೈಪಾಸ್ ರಸ್ತೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೂಡ ದುರಸ್ತಿಗೊಂಡಿದೆ. ಇದರಿಂದ ಕುಡಿಯುವ ನೀರಿಲ್ಲದೇ ಜನ ಪರದಾಡುತ್ತಿದ್ದಾರೆ. ಕಗ್ಗತ್ತಲೆಯಲ್ಲಿ ಕುದೂರು: 3-4 ದಿನಗಳಿಂದ ಮರ ಕಡಿಯುವ ಸಲುವಾಗಿ ವಿದ್ಯುತ್ ಕಡಿತಗೊಳಿಸಿದ್ದು ಕಗ್ಗತ್ತಲೆಯಲ್ಲಿ ಜನರು ಕಾಲ ಕಳೆಯುವಂತಾಗಿದೆ. ಶಾಲೆಯಲ್ಲಿ ನಡೆಯುವ ಟೆಸ್ಟ್ಗಳಿಗೆ ಮಕ್ಕಳು ತಯಾರಿ ನಡೆಸಲು ಕಷ್ಟಸಾಧ್ಯವಾಗಿದೆ.
ಇದನ್ನೂ ಓದಿ:ದಿಢೀರ್ ರದ್ದಾದ ಪಂದ್ಯ; 27 ಲಕ್ಷ ರೂ. ಬಿರಿಯಾನಿ ಬಿಲ್…ಕಂಗಾಲಾದ ಪಾಕ್ ಕ್ರಿಕೆಟ್ ಮಂಡಳಿ
ಮರಗಳ ಹನನ ಬೇಸರದ ಸಂಗತಿ
ಕಳೆದ ವರ್ಷಗಳ ಹಿಂದೆ ಮರಗಳನ್ನು ಕಡಿಯಬೇಕು ಎಂಬ ಸುದ್ದಿ ಕೇಳಿ ನಾನು ಅದನ್ನು ವಿರೋಧಿಸಿದ್ದೆ. ಈಗ ವಾಹನಗಳು ಒಡಾಡಲು ತೊಂದರೆಯಾಗುತ್ತಿದೆ ಎಂದು ಮರ ಕಡಿಯುತ್ತಿರುವುದು ತುಂಬಾ ಬೇಸರ ತಂದಿದೆ ಎಂದು ರಾಷ್ಟ್ರಪ್ರಶಸ್ತಿ ವಿಜೇತೆ, ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ ಹೇಳಿದರು
ಮೂರು ದಿನಗಳಿಂದ ಮಂದಿಗತಿ ಯಲ್ಲಿ ಮರ ತೆರವು ಕಾರ್ಯ ನಡೆದಿದೆ. ಇದರಿಂದ ವ್ಯಾಪಾರ ನಡೆಸಲು ಕಷ್ಟವಾಗುತ್ತಿದೆ. ಟ್ರಾಫಿಕ್ ಸಮಸ್ಯೆ ಹೆಚ್ಚಿದೆ. ಗ್ರಾಹಕರು ಬರುವುದಕ್ಕೆ ತೊಂದರೆಯಾ ಗುತ್ತಿದ್ದು, ಅದಷ್ಟು ಬೇಗ ಮರ ತೆರವುಗೊಳಿಸಿದರೇ ವ್ಯಾಪಾರಕ್ಕೆ ಅನುಕೂಲವಾಗುವುದು.
-ರಾಜಣ್ಣ, ಹಣ್ಣಿನ ವ್ಯಾಪಾರಿ
3-4 ದಿನದಿಂದ ಕರೆಂಟ್ ಇಲ್ಲ. ಶುದ್ಧ ನೀರಿನ ಘಟಕ ಬೇರೆ ಕೆಟ್ಟು ಹೋಗಿದೆ. ಗ್ರಾಪಂಯವರು ಬೈಪಾಸ್ನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಿ ನೀರಿನ ಬವಣೆ ತಪ್ಪಿಸಬೇಕೆಂದರು.
-ಸುಭಾಷ, ಗ್ರಾಮಸ್ಥ,
ಕುದೂರು