ನಿಯಮ ಉಲ್ಲಂ ಸಿದರೆ ಕಠಿಣ ಕ್ರಮ
ಪ್ಲಾಸ್ಟಿಕ್ ಮುಕ್ತ ಸಮಾಜಕ್ಕಾಗಿ ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಾಜೇಂದ್ರ ಖಡಕ್ ಸೂಚನೆ
Team Udayavani, Jul 7, 2019, 12:58 PM IST
ರಾಮನಗರ: ಜಿಲ್ಲೆಯಲ್ಲಿ ನಿಷೇದಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ, ಮಾರಾಟದ ಕಾನೂನು ನಿಯಮ ಜಾರಿಯಲ್ಲಿದೆ. ನಿಯಮ ಉಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಎಚ್ಚರಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಮನಗರ ನಗರ ಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಗಳ ಸಂಯುಕ್ತಾಶ್ರ ಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ಪ್ಲಾಸ್ಟಿಕ್ ಮುಕ್ತ ಸಮಾಜಕ್ಕಾಗಿ ಜಾಥಾ ಕಾರ್ಯಕ್ರಮ ಅಧ್ಯಕ್ಷತೆಯನ್ನುವಹಿಸಿ ಅವರು ಮಾತನಾಡಿದರು. ಪ್ಲಾಸ್ಟಿಕ್ನ ಅತಿಯಾದ ಬಳಕೆಯಿಂದಾಗಿ ಇಂದು ಪರಿಸರ ಹಾಳಾಗುತ್ತಿದೆ. ಕಾರಣ ಪ್ಲಾಸ್ಟಿಕ್ ಕೊಳೆಯುವ ವಸ್ತುವಲ್ಲ. ಪ್ಲಾಸ್ಟಿಕ್ ಸುಡುವುದರಿಂದ ಪರಿಸರ ಇನ್ನಷ್ಟು ಬೇಗ ಹಾಳಾಗುತ್ತದೆ. ಆಹಾರ ತಯಾರಿಕೆಯಲ್ಲಿ, ಶೇಖರಣೆಗೆ ಪ್ಲಾಸ್ಟಿಕ್ ಬಳಕೆ ಮಾನವನ ಆರೋಗ್ಯದ ಮೇಲೆ ಕಟ್ಟ ಪರಿಣಾಮ ಬೀರುತ್ತಿದೆ. ಹಿಂದಿನ ದಿನಗಳಲ್ಲಿ ತರಕಾರಿ ಸೇರಿದಂತೆ ಮನೆಗೆ ಬೇಕಾದ ವಸ್ತುಗಳನ್ನು ತರಲು ಬಟ್ಟೆ ಬ್ಯಾಗ್ನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಆದರೆ ಕೆಲವು ವರ್ಷಗಳಲ್ಲಿ ಬಹಳಷ್ಟು ಜನ ಪ್ಲಾಸ್ಟಿಕ್ ಕವರಗಳನ್ನು ಬಳಸುತ್ತಿದ್ದಾರೆ. ಇದೊಂದು ಉದಾಹರಣೆಯಷ್ಟೆ, ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಅತಿಯಾಗಿ ಬಳಕೆಯಾಗುತ್ತಿದೆ ಎಂದು ವಿಷಾಧಿಸಿದರು.
ಪರಿಸರ ಮಾಲಿನ್ಯವಾಗುತ್ತಿದೆ, ಓಜೋನ್ ಪದರ ಹಾಳಾಗುತ್ತಿರುವುದರಿಂದ ಮಾನವರಲ್ಲಿ ಚರ್ಮ ರೋಗಗಳು ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ವೆಂಕಟಪ್ಪ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಕೆ. ಮಾಯಣ್ಣ ಗೌಡ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಸಿ. ಸಿದ್ದರಾಮಯ್ಯ, ನಗರಸಭೆ ಆಯುಕ್ತರಾದ ಬಿ. ಶುಭ,ಟಯೋಟ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ಡೆಪ್ಯೂಟಿ ಜನರಲ್ ಮೆನೆಜರ್ ಅರವಿಂದ್ ಕುಮಾರ್ ಸಿಂಗ್, ಟಯೋಟ ಕಿರ್ಲೋಸ್ಕರ್ ಜನರಲ್ ಮ್ಯಾನೆಜರ್ ಬಿ.ಎಸ್. ನಾಗರಾಜ್ ಮುಂತಾದವರು ಹಾಜರಿದ್ದರು. ಇದೇ ವೇಳೆ ಗಣ್ಯರು ಸಸಿನೆಟ್ಟು ವಿಶ್ವ ಪರಿಸರ ದಿನ ಆಚರಿಸಿದರು.