ಒಕ್ಕಲುತನ ನಲುಗಿದರೆ, ಅನ್ನಸಂಸ್ಕೃತಿಗೆ ಅಪಾಯ
Team Udayavani, Feb 5, 2019, 7:10 AM IST
ಮಾಗಡಿ: ಒಕ್ಕಲುತನ ನಲುಗಿದರೆ, ಅನ್ನಸಂಸ್ಕೃತಿಗೆ ಅಪಾಯವಿದೆ, ಈ ವೈಜ್ಞಾನಿಕ ಯುಗದಲ್ಲಿ ಜ್ಞಾನ ವಿಕಾಸವಾದಂತೆಲ್ಲ ಅನ್ನ ಸಂಸ್ಕೃತಿಗೆ ಅಪಾಯವಾಗ ದಂತೆ ಎಚ್ಚರವಹಿಸುವ ಅವಶ್ಯಕತೆ ಇದೆ ಎಂದು ತಾಲೂಕು ಮಟ್ಟದ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಮುನಿರಾಜಪ್ಪ ಅಭಿಪ್ರಾಯಪಟ್ಟರು.
ನಗರದ ಸಿದ್ದಾರೂಢ ಸಭಾ ಭವನದ ಡಾ. ಶಿವಕುಮಾರ ಮಹಾಸ್ವಾಮಿ ವೇದಿಕೆಯಲ್ಲಿ ನಡೆದ ತಾಲೂಕು ಮಟ್ಟದ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅವರು ಅಧ್ಯಕ್ಷ ಭಾಷಣವನ್ನು ನೆರೆವೇರಿಸಿದರು. ‘ಒಕ್ಕಲುನ ನಲುಗಿಸದೆ ಲೆಕ್ಕವನು ಸಿಕ್ಕಿಸದೆ, ಕಕ್ಕುಲತೆಯಿಂದ ನಡೆಯಿಸುವ ಅರಸುತಾ ಚಕ್ಕಂದವಿರುವ ಸರ್ವಜ್ಞ’ ಎಂಬ ಸರ್ವಜ್ಞನ ಪದ ವನ್ನು ಉದಾಹರಣೆ ನೀಡಿ ಅವರು ಮಾತನಾಡಿ ದರು. ವಿದ್ಯಾವಂತರು ಕೃಷಿ ಕ್ಷೇತ್ರದತ್ತ ಗಮನ ಹರಿಸ ಬೇಕು, ಏಕೆಂದರೆ ಜಗತ್ತಿನ ಅಸ್ತಿತ್ವಕ್ಕೆ ಅನ್ನಸಂಸ್ಕೃತಿಯೇ ಆಧಾರ ಎಂದು ಹೇಳಿದರು.
ಸಾಹಿತ್ಯ ಗ್ರಂಥಗಳಲ್ಲಿ ಕೊಳೆಯದಿರಲಿ: ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ. ಶಾಸ್ತ್ರೀಯ ಭಾಷೆಯೆಂಬ ಹೆಗ್ಗಳಿಕೆ ಇದೆ. ಸಾಹಿತ್ಯ ಕಲೆ ಸಂಸ್ಕೃತಿ ನಾಡಿನ ಉಸಿರು. ದೇಹಕ್ಕೆ ಜೀವಕೋಶಗಳಿದ್ದಂತೆ ಪರಂಪರೆಗೆ ಸಾಂಸ್ಕೃತಿಕ ಹಿರಿಮೆ ಅಗತ್ಯ. ಸಾಹಿತ್ಯ ಗ್ರಂಥಗಳಲೇ ಕೊಳೆಯಬಾರದು. ಓದಿ ಮನನ ಮಾಡಿಕೊಂಡು ಕಿಂಚಿತ್ತಾದರೂ ಪರಿವರ್ತನೆಯಾ ಗಬೇಕು. ಹೀಗಾಗಿ ಮಕ್ಕಳಲ್ಲಿ ಕನ್ನಡ ಸಾಹಿತ್ಯ ಅಭಿರುಚಿಬೆಳೆಸುವ ಪ್ರಯತ್ನಗಳು ಪ್ರತಿ ಮನೆ, ಪ್ರತಿ ಶಾಲೆ, ಪ್ರತಿ ಕಾಲೇಜಿನಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.
ಮಾಗಡಿ ಋಷಿಮುನಿಗಳ ಬೀಡು: ಮಾಗಡಿ ಸಾಂಸ್ಕೃತಿಕ ತೊಟ್ಟಿಲಿದ್ದಂತೆ. ಇಲ್ಲಿ ಋಷಿಮುನಿಗಳ ಬೀಡು, ಸಾಧು, ಸಿದ್ಧರು ಶಿವಶರಣರು, ಜ್ಞಾನಿಗಳು ಹರಸಿದ ನಾಡು. ಅದೆಷ್ಟೋ ಮೈನಿಮಿರುವ ಸಂಗತಿ ಗಳು ಇಲ್ಲಿವೆ. ಸಾತ್ವಿಕರ ತವರೂರು. ಬೌದ್ಧ, ಜೈನ, ವೈಷ್ಣ, ಶೈ ಯತಿಗಳು ಇಲ್ಲಿ ಬದುಕು ಹೋಗಿದ್ದಾರೆ. ಶಿಲಾಯುಗದಲ್ಲೇ ಮಾನವ ನೆಲಸಲು ಈ ಭೂಮಿ ಆಸರೆಯಾಗಿತ್ತು. ಸಾವಿರಾರು ವರ್ಷಗಳ ಹಿಂದಿನ ಕಬ್ಬಿಣ ಯುಗದ ನೂರಾರು ಬೃಹತ್ ಶಿಲಾ ಗೋರಿಗಳನ್ನು ಇಂದಿಗೂ ನೋಡಬಹುದು. ಫಾದರ್ ಹೆರಾಸ್ ಪ್ರಕಾರ ಸಿಂಧೂ ಕಣಿವೆಯ ನಾಗರಿಕತೆಯ ಸಮಕಾಲೀನ ಚರಿತ್ರೆಯ ಕುರು ಹುಗಳು ಮಾಗಡಿಯಲ್ಲಿವೆ ಎಂದು ತಮ್ಮ ಸಂಶೋ ಧನೆಯಿಂದ ತಿಳಿದುಕೊಂಡಿರುವುದಾಗಿ ತಿಳಿಸಿದರು.
ಮಾಗಡಿ ಉಪನಗರವಾಗಲಿ: ನಾಡಪ್ರಭು ಕೆಂಪೇಗೌಡ, ಸಿದ್ಧಗಂಗೆ ಮತ್ತು ಆದಿಚುಂಚನಗರಿ ಶ್ರೀಗಳು ಇಲ್ಲಿ ಜನಿಸಿ ವಿಶ್ವಮಾನ್ಯರಾಗಿದ್ದಾರೆ. ಬೆಂಗಳೂರಿಗೆ ಮಾಗಡಿ ಸಮೀಪವಿರುವುದರಿಂದ ಮಾಗಡಿಯನ್ನು ಉಪನಗರವಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದೆ ಎಂದರು. ಮಾಗಡಿ ಸೇರಿದಂತೆ ರಾಮನಗರ ಜಿಲ್ಲೆಯನ್ನು ಐತಿಹಾಸಿಕವಾಗಿ ಪ್ರವಾಸಿ ಕ್ಷೇತ್ರವನ್ನಾಗಿಸುವುದು, ಸಾಂಸ್ಕೃತಿಕವಾಗಿ ಬೆಳವಣಿಗೆಗೆ ಅವಕಾಶವಿದೆ. ಜಿಲ್ಲೆಯ ಪ್ರಭಾವಿಗಳಾದ ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಎಚ್.ಎಂ.ರೇವಣ್ಣ , ಡಿ.ಕೆ.ಸುರೇಶ್, ಎ.ಮಂಜುನಾಥ್, ಅ.ದೇವೇಗೌಡ ಮುಂತಾದವರು ಈ ಬಗ್ಗೆ ಚಿಂತಿಸಬೇಕು ಎಂದರು.
ಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ತಾಪಂ ಅಧ್ಯಕ್ಷ ಕೆ.ಎಚ್.ಶಿವರಾಜು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿಂ.ಲಿಂ.ನಾಗರಾಜು, ತಾಲೂಕು ಅಧ್ಯಕ್ಷೆ ಕಲ್ಪನಾ ಶಿವಣ್ಣ, ನಿಕಟಪೂರ್ವ ಅಧ್ಯಕ್ಷ ಡಿ.ರಾಮಚಂದ್ರಯ್ಯ, ತಹಶೀಲ್ದಾರ್ ಎನ್.ರಮೇಶ್, ತಾಪಂ ಇಒ ಚಂದ್ರ, ಬಿಇಒ ಎಸ್.ಸಿದ್ದೇಶ್ವರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಕೆಂಪೇಗೌಡ, ಜಿಲ್ಲಾಧ್ಯಕ್ಷ ಕೆ.ಎಚ್.ಲೋಕೇಶ್, ಹಿರಿಯ ಸಾಹಿತಿ ಸೂ.ಚಿ.ಗಂಗಾಧರಯ್ಯ, ಡಾ.ಭೈರೇಗೌಡ, ಡಿವಿಜಿ ವೇದಿಕೆ ಅಧ್ಯಕ್ಷ ಸಿ.ಬಿ.ಅಶೋಕ್,
ರಾಮನಗರ ಕಸಾಪ ಅಧ್ಯಕ್ಷ ದಿನೇಶ್, ಚನ್ನಪಟ್ಟಣದ ಕಸಾಪ ಅಧ್ಯಕ್ಷ ಚಲುವರಾಜು, ರಾಮಣ್ಣ, ಬಿ.ಟಿ.ನಾಗೇಶ್, ಎಂ.ಎನ್.ಮಂಜುನಾಥ್, ಕೆ.ವಿ.ಬಾಲು, ಎ. ಹನುಮಂತಪ್ಪ, ಟಿ.ಆರ್.ದಯಾನಂದ್, ಪಿ.ನಂಜುಂಡ, ಸಿ.ಬೆಟ್ಟಸ್ವಾಮಿ, ಪಾನ್ಯಂ ನಟರಾಜ್, ನರಸಿಂಹಮೂರ್ತಿ, ಚಿಕ್ಕವೀರಯ್ಯ, ಎಂ.ಸಿ. ಗೋವಿಂದರಾಜು, ಜಯಲಕ್ಷ್ಮೀದೇವಿ, ವಿಜಯ ದೀಕ್ಷಿತ್, ಗಂ.ದಯನಂದ್, ಕೆ.ಪಿ .ರಂಗಸ್ವಾಮಯ್ಯ, ಡಿ.ಜಿ.ಗಂಗಾಧರ್, ಡಿ.ಜಿ.ಕುಮಾರ್, ರೂಪೇಶ್, ನಂಜೇಗೌಡ ಇತರರಿದ್ದರು.
ಪುಸ್ತಕ ಮಳಿಗೆ ಉದ್ಘಾಟನೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿಂ.ಲಿಂ.ನಾಗರಾಜು ಪುಸ್ತಕ ಮಳಿಗೆ ಉದ್ಘಾಟಿಸಿದರು. ಪುರಸಭಾಧ್ಯಕ್ಷ ಎಚ್.ಆರ್.ಮಂಜುನಾಥ್ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದರು. ಡಾ.ಮುನಿರಾಜಪ್ಪ, ಪತ್ನಿ ಜಯಮ್ಮ, ನಿಕಟ ಪೂರ್ವ ಅಧ್ಯಕ್ಷ ಡಿ.ಆರ್.ಚಂದ್ರು, ಸಿಂ.ಲಿಂ.ನಾಗರಾಜು ಮತ್ತು ತಾಲೂಕು ಕಸಾಪ ಅಧ್ಯಕ್ಷೆ ಕಲ್ಪನಾ ಶಿವಣ್ಣ ಅವರನ್ನು ಬೆಳ್ಳಿ ರಥದಲ್ಲಿ ಕೂರಿಸಿ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು.
ಯುಗ ಪುರುಷನಿಗೆ ಭಾರತ ರತ್ನವೇಕೆ?: ಲೋಕ ಕಲ್ಯಾಣಕ್ಕಾಗಿ ಅವತರಿಸಿದ ಯುಗಪುರುಷ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನವೇಕೆ ಎಂದು ಸಮ್ಮೇಳನದ ಅಧ್ಯಕ್ಷ ಡಾ.ಮುನಿರಾಜಪ್ಪ ಪ್ರಶ್ನಿಸಿದರು. ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದ ಅವರು, ಸಮ್ಮೇಳನಗಳು ಯುವ ಪೀಳಿಗೆಯಲ್ಲಿ ಕನ್ನಡ ಭಾಷಾ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.
ಡಾ. ಎಂ. ಭೈರೇಗೌಡ ಮಾತನಾಡಿ , ಕನ್ನಡ ಭಾಷೆಯೇ ವಿಶಿಷ್ಟವಾಗಿದೆ. ಇದೊಂದು ಶಾಶ್ವತವಾದ ಭಾಷೆ, ಎಂದೂ ಕುತ್ತುಬಾರದು. ಕನ್ನಡದಲ್ಲಿ 432 ಶಬ್ಧ ಕೋಶವಿದೆ. ಕನ್ನಡ ಭಾಷೆಯ ಕೋಶಕ್ಕೆ ಅನ್ಯಭಾಷೆಗಳು ಸೇರುತ್ತಿವೆಯಷ್ಟೆ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಸಿಂ.ಲಿಂ.ನಾಗರಾಜು, ತಾಲೂಕು ಅಧ್ಯಕ್ಷೆ ಕಲ್ಪನಾ ಶಿವಣ್ಣ, ನೀರಾವರಿ ತಜ್ಞ ಪ್ರಸನ್ನಕುಮಾರ್, ಮಲ್ಲಯ್ಯ ಗುರುಬಸವಯ್ಯ ಸೇರಿದಂತೆ ಅನೇಕ ಗಣ್ಯರಿದ್ದರು.
* ತಿರುಮಲೆ ಶ್ರೀನಿವಾಸ್