ಗುರಿ ಸಾಧನೆಗೆ ಮಾಹಿತಿ ತಂತ್ರಜ್ಞಾನ ಅವಶ್ಯ
Team Udayavani, Jun 24, 2019, 12:09 PM IST
ಲಕ್ಷ್ಮೀಪುರ ಪದವಿ ಪೂರ್ವ ಕಾಲೇಜಿನ ಗ್ರಂಥಾಲಯಕ್ಕೆ ವಿಜ್ಞಾನ ಟ್ರಸ್ಟ್ನ ಸಂಸ್ಥಾಪಕ ಕಾರ್ಯದರ್ಶಿ ಟಿ.ಜಿ.ಶ್ರೀನಿಧಿ ತಾವು ರಚಿಸಿದ ಗ್ರಂಥಗಳನ್ನು ಕೊಡುಗೆಯಾಗಿ ನೀಡಿದರು.
ರಾಮನಗರ: ತಂತ್ರಜ್ಞಾನಕ್ಕೆ ಭಾಷೆ ಹಂಗಿಲ್ಲ. ನಾವೀಗ ಮೊಬೈಲು ಮತ್ತು ಕಂಪ್ಯೂಟರ್ಗಳ ಕಾರ್ಯಚಟುವಟಿಕೆ ಒಂದೇ ಆಗಿರುವ ಪ್ರಪಂಚದಲ್ಲಿದ್ದೇವೆ. ಗ್ರಾಹಕರಿಗೆ ಬೇಕಾದ ಭಾಷೆಯಲ್ಲಿಯೇ ಬಹುರಾಷ್ಟ್ರೀಯ ಕಂಪನಿಗಳೂ ವ್ಯವಹರಿಸುವ ಕಾಲದಲ್ಲಿದ್ದೇವೆ ಎಂದು ಇ-ಜ್ಞಾನ ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ, ಲೇಖಕ ಟಿ.ಜಿ.ಶ್ರೀನಿಧಿ ಹೇಳಿದರು.
ತಾಲೂಕಿನ ಲಕ್ಷ್ಮೀಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ‘ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ಮಾಹಿತಿ ತಂತ್ರಜ್ಞಾನದ ಲಾಭ ಪಡೆಯುವಂತೆ ತಿಳಿಸಿದ ಅವರು ಯುವ ಸಮೂಹ ವಾಟ್ಸಪ್, ಫೇಸ್ಬುಕ್ ನಲ್ಲಿ ಕಾಲಹರಣ ಮಾಡುವ ಬದಲೂ ಜ್ಞಾನಾರ್ಜನೆಗೆ ಮತ್ತು ತಮ್ಮ ನಿರ್ಧಿಷ್ಟ ಗುರಿ ಸಾಧನೆಗೆ ಪೂರಕವಾಗುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ವಿವಿಧ ಸಾಫ್ಟ್ವೇರ್ ಅಪ್ಲಿಕೇಷನ್:ಕಂಪ್ಯೂಟರ್ ಮತ್ತು ಮೊಬೈಲ್ಗೆ ಹೋಲಿಸಿ ದರೆ ಕಾರ್ಯಚಟುವಟಿಕೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ತಂತ್ರಜ್ಞಾನದ ಸೌಲಭ್ಯ ಹಳ್ಳಿಗಳಿಗೆ ವ್ಯಾಪಿಸುತ್ತಿರುವುದರಿಂದ ಸ್ಥಳೀಯ ಭಾಷೆಗಳೂ ಮೊಬೈಲ್, ಇಂಟರ್ನೆಟ್ನಲ್ಲಿ ಮಹತ್ವ ಪಡೆಯು ವಂತಾಗಿದೆ. ಕನ್ನಡ ಭಾಷೆಯಲ್ಲಿ ಕೆಲಸ ಮಾಡುವ ಅನೇಕ ಸಾಫ್ಟ್ವೇರ್ ಗಳು, ಅಪ್ಲಿಕೇಷನ್ ಗಳು ಆವಿಷ್ಕಾರವಾಗಿವೆ. ಕನ್ನಡದ ಮೂಲಕ ಇನ್ನು ಪರಿಣಾಮಕಾರಿಯಾಗಿ ತಂತ್ರಜ್ಞಾನವನ್ನು ಅಭಿ ವೃದ್ಧಿಪಡಿಸುವ ಕಾರ್ಯವಾಗುತ್ತಿದೆ. ವಿದ್ಯಾರ್ಥಿ ಗಳು ತಮ್ಮ ಗುರಿ ಸಾಧನೆಗೆ ತಂತ್ರಜ್ಞಾನಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮಾಹಿತಿ ಅಗತ್ಯ:ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಜಿ.ದಯಾನಂದ ಮಾತನಾಡಿ, ಪಠ್ಯದ ಜತೆಗೆ ಸಾಮಾನ್ಯ ಜ್ಞಾನ ಮತ್ತು ತಂತ್ರಜ್ಞಾನಗಳ ಬಗ್ಗೆಯೂ ಅಗತ್ಯ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಕೊಡಿಸುವ ಕಾರ್ಯವಾಗ ಬೇಕೆಂಬ ಉದ್ದೇಶದಿಂದ ತಿಂಗಳಿಗೊಂದು ಕಾರ್ಯಕ್ರಮ ರೂಪಿಸುವ ನಿರ್ಧಾರ ಮಾಡ ಲಾಗಿದೆ. ಮೊದಲ ಕಾರ್ಯಕ್ರಮವನ್ನು ಕನ್ನಡ ಭಾಷೆಯಲ್ಲಿ ಮಾಹಿತಿ ತಂತ್ರಜ್ಞಾನದ ಬಗ್ಗೆ ಸಾಧನೆ ಮಾಡಿರುವ ಟಿ.ಜಿ.ಶ್ರೀನಿಧಿ ಅವರನ್ನು ಕರೆಯಿಸಲಾಗಿದೆ ಎಂದರು.
ಪುಸ್ತಕಗಳ ಕೊಡುಗೆ:ವಿಜ್ಞಾನ ಟ್ರಸ್ಟ್ ಮೂಲಕ ಟಿ.ಜಿ.ಶ್ರೀನಿಧಿ ಅವರು ಕಾಲೇಜು ಗ್ರಂಥಾಲಯಕ್ಕೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿ ಕೆಲ ಅಮೂಲ್ಯ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ಉಪನ್ಯಾಸಕ ನವೀನ್ ಹಳೇಮನೆ ಕಾರ್ಯ ಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ಅನ್ಸರ್ ವುಲ್ಹಖ್, ಹನುಮಂತರಾಯ, ವಿಜಯಲಕ್ಷ್ಮಿ, ತುಳಸೀರಾಮಶೆಟ್ಟಿ, ಶಿಲ್ಪಿ ಇದ್ದರು.