ಚೆಕ್ ಡ್ಯಾಂ ನಿರ್ಮಾಣಕ್ಕೆ ಪರಿಶೀಲನೆ
Team Udayavani, Sep 9, 2019, 12:44 PM IST
ಮಾಗಡಿ ತಾಲೂಕಿನ ಪಣಕನಕಲ್ಲು ಗ್ರಾಮದಲ್ಲಿ ಚಕ್ ಡ್ಯಾಂ ನಿರ್ಮಾಣಕ್ಕೆ ಶಾಸಕ ಎ.ಮಂಜುನಾಥ ಸ್ಥಳ ಪರಿಶೀಲಿಸಿದರು.
ಮಾಗಡಿ: ತಾಲೂಕಿನ ಬೆಳಗುಂಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಣಕನಕಲ್ಲು ಗ್ರಾಮದ ಹತ್ತಿರ ಚೆಕ್ ಡ್ಯಾಂ ನಿರ್ಮಾಣಕ್ಕೆ ಶಾಸಕ ಎ.ಮಂಜುನಾಥ ಪರಿಶೀಲನೆ ನಡೆಸಿದರು.
ಪಣಕನಕಲ್ಲು ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಅಧಿಕಾರಿಗಳೊಂದಿಗೆ ಚೆಕ್ ಡ್ಯಾಂ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿ, ಕಾವೇರಿ ನೀರಾವರಿ ನಿಗಮದಿಂದ ಪಣಕನಕಲ್ಲು ಗ್ರಾಮದ ಬಳಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಸ್ಥಳ ವೀಕ್ಷಣೆ ಮಾಡಲಾಗಿದೆ. ಚೆಕ್ ಡ್ಯಾಂ ನಿರ್ಮಿಸುವ ಪ್ರದೇಶ ಅರಣ್ಯ ವ್ಯಾಪ್ತಿಗೊಳಪಟ್ಟರೆ ಅರಣ್ಯ ಇಲಾಖೆಯ ಅನುಮತಿ ಬೇಕಾಗಿದೆ. ಇದರ ಬಗ್ಗೆ ಪರಿಶೀಲನೆ ಮಾಡಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಡ್ಯಾಂ ನಿರ್ಮಾಣಕ್ಕೆ ಕ್ರಿಯಾ ಯೋಜನೆ: ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಚೆಕ್ ಡ್ಯಾಂ ನಿರ್ಮಿಸಲು 20 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದಾರೆ. ದೊಡ್ಡ ಮಟ್ಟದ ಡ್ಯಾಂ ನಿರ್ಮಿಸುವ ಬಗ್ಗೆ ಕ್ರಿಯಾ ಯೋಜನೆ ತಯಾರಿಸಿ, ಡಿಪಿಆರ್ ಸಿದ್ಧ ಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿ ದೆ. ಕಾವೇರಿ ನೀರಾವರಿ ನಿಗಮ ದಿಂದ ಮಾಗಡಿ ತಾಲೂಕಿನಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಹೆಚ್ಚಿನ ಹಣ ಮಂಜೂರಾತಿ ಮಾಡಿಸಿ ನೀರಾವರಿ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಈ ಭಾಗದಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದರು.
ಈ ವೇಳೆ ಲೋಕೋಪಯೋಗಿ ಇಲಾಖೆ ಎಇಇ ರಾಮಣ್ಣ. ಕಾವೇರಿ ನೀರಾವರಿ ನಿಗಮದ ಸಹಾಯಕ ಅಭಿಯಂತರ ಎಚ್.ಆರ್.ರಾಘವೇಂದ್ರ, ಮುಖಂಡರಾದ ನಂಜಪ್ಪ, ಕೆಂಪರಾಜು, ಬೆಳಗುಂಬ ಕೋಟಪ್ಪ, ಗುಡ್ಡೇಗೌಡ, ನಾಗರಾಜು, ಸಿಡಗನಹಳ್ಳಿ ವೆಂಕಟೇಶ್, ಎಂ.ಬಿ.ಮಹೇಶ್, ಎಂ.ಆರ್. ಚಂದ್ರಶೇಖರ್ ಉಪಸ್ಥಿತರಿದ್ದರು.